ಜಮೀನಿನಲ್ಲಿ ಅವರೆ ಕೊಯ್ಯುತ್ತಿರುವ ವೇಳೆ ಚಿನ್ನದ ಸರ ಕಿತ್ತು ಪರಾರಿ
Team Udayavani, Jan 29, 2022, 10:30 AM IST
ಕೊರಟಗೆರೆ: ಜಮೀನಿನಲ್ಲಿ ಅವರೆ ಬಳ್ಳಿ ಕೂಯ್ಯುತ್ತಿದ್ದ ಒಂಟಿ ಮಹಿಳೆಗೆ ಇಬ್ಬರು ಸರಗಳ್ಳರು ಚಾಕು ತೋರಿಸಿ, ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ಹೊಳವನಹಳ್ಳಿ ಹೋಬಳಿಯ ತಿಮ್ಮನಹಳ್ಳಿ ಗ್ರಾಮದ ಮಲ್ಲಿಕಾರ್ಜುನಯ್ಯನ ಅವರ ಪತ್ನಿ ಲಕ್ಷ್ಮೀದೇವಮ್ಮ(61) ಎಂಬುವರ ಸರ ಕಳ್ಳತನವಾಗಿದೆ.
ಹೊಳವನಹಳ್ಳಿ- ಗೊರವನ ಹಳ್ಳಿ ಮುಖ್ಯ ರಸ್ತೆಯ ಪಕ್ಕದಲ್ಲಿನ ಜಮೀನಿನಲ್ಲಿ ಜಾನುವಾರು ಮೇಯಿಸಿಕೊಂಡು ಜಮೀನಿನಲ್ಲಿ ಬೆಳೆದ ಅವರೆ ಬಳ್ಳಿ ಕೂಯ್ಯುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಸರಗಳ್ಳರು ವೃದ್ಧೆಗೆ ಚಾಕು ತೋರಿಸಿ ಕೊರಳಲಿದ್ದ 33 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಸಿದ್ದರಾಮೇಶ್ವರ ಹಾಗೂ ಪಿಎಸ್ಐ ಮಂಜುಳಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.