ನಿರ್ಬಂಧಗಳ ಬಿಸಿ ಕೈಗಾರಿಕೆಗೆ ತಟ್ಟದಿರಲಿ: ಸಿಇಒಗಳ ಮನವಿ
Team Udayavani, Apr 13, 2021, 7:05 AM IST
ಹೊಸದಿಲ್ಲಿ: ಕೊರೊನಾ ಸಾಂಕ್ರಾಮಿಕದ ಈ ಕಾಲಘಟ್ಟದಲ್ಲಿ ಜನಜೀವನ ರಕ್ಷಣೆಯ ಬಗ್ಗೆ ಸರಕಾರಗಳು ಹೆಚ್ಚಿನ ಒತ್ತು ನೀಡಬೇಕು. ಸಾಂಕ್ರಾಮಿಕವನ್ನು ತಡೆಗಟ್ಟಲು ಕೈಗೊಳ್ಳಲಾಗಿರುವ ಭಾಗಶಃ ನಿರ್ಬಂಧಗಳ ವರ್ತುಲದಿಂದ ಕೈಗಾರಿಕಾ ರಂಗವನ್ನು ಹೊರಗಿಡಬೇಕು ಎಂದು ಭಾರತೀಯ ಕೈಗಾರಿಕೆಗಳ ಒಕ್ಕೂಟದ (ಸಿಐಐ) ಸದಸ್ಯ ಕಂಪನಿಗಳ ಎಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಒಕ್ಕೊರಲಿನ ಸಮ್ಮತಿ ಸೂಚಿಸಿದ್ದಾರೆ.
ಭಾರತದಲ್ಲಿ ಎದ್ದಿರುವ 2ನೇ ಅಲೆಯನ್ನು ತಡೆಗಟ್ಟಲು ಮೈಕ್ರೋ ಕಂಟೈನ್ಮೆಂಟ್ ಹಾಗೂ ಸೀಮಿತ ನಿರ್ಬಂಧಗಳನ್ನು ಅನುಸರಿಸುವುದು ಸೂಕ್ತ. ಆದರೆ ಆಂಶಿಕ ಲಾಕ್ಡೌನ್ ಹೇರಿದರೆ ಅದರಿಂದ ಸರಕು ಪೂರೈಕೆ ವ್ಯವಸ್ಥೆಗೆ ಧಕ್ಕೆಯಾಗುತ್ತದೆ. ಇದರಿಂದ ಕೈಗಾರಿಕಾ ರಂಗ ನರಳಬೇಕಾಗುತ್ತದೆ. ಇದರಿಂದ ಕೈಗಾರಿಕಾ ಉತ್ಪಾದನಾ ಸಾಮರ್ಥ್ಯಕ್ಕೂ ಹೊಡೆತ ಬೀಳುತ್ತದೆ ಎಂದು ಸಿಇಒಗಳು ಅಭಿಪ್ರಾಯಪಟ್ಟಿದ್ದಾರೆ.
ಶೇ. 75ರಷ್ಟು ಸಿಇಒಗಳು, ದೇಶವನ್ನು ಕೊರೊನಾ ಕೆನ್ನಾಲಿಗೆಯಿಂದ ಪಾರು ಮಾಡ ಬೇಕು. ಜನಜೀವನವನ್ನು, ಪರಿಸರವನ್ನು ರಕ್ಷಿಸಬೇಕು ಎಂದು ಆಗ್ರಹಿಸಿದ್ದರೆ, ಶೇ. 68 ಅಧಿಕಾರಿಗಳು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ರಕ್ಷಿಸಲು ಆದ್ಯತೆ ನೀಡಬೇಕೆಂದು ಕೋರಿದ್ದಾರೆ. ಶೇ. 56ರಷ್ಟು ಸಿಇಒಗಳು ಸರಕು ಸಾಗಣೆ ವ್ಯತ್ಯ ಯವಾದರೆ ಉತ್ಪಾದನೆಗೆ ಕುಂಠಿತವಾಗುತ್ತದೆ ಎಂದಿದ್ದರೆ, ಶೇ. 57ರಷ್ಟು ಜನರು ಕೈಗಾರಿಗಳು ತಮಗೆ ಬೇಕಾದ ಕಚ್ಚಾವಸ್ತುಗಳ ದಾಸ್ತಾನನ್ನು ಈಗಲೇ ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದ್ದಾರೆ. ಶೇ. 31ರಷ್ಟು ಅಧಿಕಾರಿಗಳು, ನೈಟ್ ಕರ್ಫ್ಯೂನಿಂದ ತಮ್ಮ ಸಿಬಂದಿಯ ಪ್ರಯಾಣಕ್ಕೆ ತೊಂದರೆಯಾ ದರೆ ಅವರಿಗೆ ರಾತ್ರಿ ವೇಳೆ ಮಲಗಲು ತಮ್ಮ ಕೈಗಾರಿಕಾ ವಲಯದಲ್ಲೇ ಆಶ್ರಯ ಕಲ್ಪಿಸುವುದಾಗಿ ತಿಳಿಸಿದ್ದಾರೆ. ಶೇ. 60ರಷ್ಟು ಸಿಇಒಗಳು, ನಿರ್ಬಂಧಗಳು ಕೈಗಾರಿಕ ಸಿಬಂದಿಗೆ ಅವರವರ ಪಾಳಿಗಳ ಕರ್ತವ್ಯಕ್ಕೆ ಹಾಜರಾಗಲು ಅಡ್ಡಿಯಾಗದಂತೆ ಸರಕಾರಗಳು ಸೂಚನೆ ನೀಡಬೇಕೆಂದು ಮನವಿ ಮಾಡಿದ್ದಾರೆ.