ಈ ಬಾರಿ ಆರ್ಸಿಬಿ ಅದೃಷ್ಟ ಬದಲಿಸಬಲ್ಲರೇ ಮಾರಿಸ್, ಫಿಂಚ್ ?
Team Udayavani, Sep 16, 2020, 8:05 PM IST
ಐಪಿಎಲ್ ಇತಿಹಾಸದ ಅತ್ಯಂತ ನತದೃಷ್ಟ ತಂಡವೆಂದರೆ ಅದು ಆರ್ಸಿಬಿ. ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್, ಕ್ರಿಸ್ ಗೇಲ್ ಅವರಂಥ ವಿಶ್ವ ದರ್ಜೆಯ ಬ್ಯಾಟ್ಸ್ಮನ್ಗಳನ್ನು ಹೊಂದಿಯೂ ಒಮ್ಮೆ ಕೂಡ ಕಿರೀಟ ಏರಿಸಿಕೊಳ್ಳಲು ಸಾಧ್ಯವಾಗದ ತಂಡವಿದು. ಅಭಿಮಾನಿಗಳು “ಕಪ್ ನಮ್ದೇ ‘ ಎಂದು ಪ್ರತೀ ವರ್ಷ ಹೇಳಿಕೊಂಡು ಕುಣಿದಾಡುವುದನ್ನು ಬಿಟ್ಟರೆ ಕಪ್ ಮಾತ್ರ ಪರರ ಪಾಲಾಗುತ್ತಲೇ ಇದೆ!
ಫೈನಲ್ನಲ್ಲಿ ಮೂರು ಸೋಲು
ಈ ವರೆಗೆ 3 ಸಲ ಐಪಿಎಲ್ ಫೈನಲ್ಗೆ ಲಗ್ಗೆ ಇರಿಸಿದ ಆರ್ಸಿಬಿ ಮೂರೂ ಸಲ ಎಡವಿದೆ. 2009ರಲ್ಲಿ ಡೆಕ್ಕನ್ ಚಾರ್ಜರ್ ವಿರುದ್ಧ 6 ರನ್ ಸೋಲು, 2011ರಲ್ಲಿ ಚೆನ್ನೈ ವಿರುದ್ಧ 58 ರನ್ ಸೋಲು ಹಾಗೂ 2016ರಲ್ಲಿ ಹೈದರಾಬಾದ್ ಎದುರು 8 ರನ್ ಸೋಲು ಕೊಹ್ಲಿ ಬಳಗವನ್ನು ಕಂಗೆಡಿಸಿದೆ. ಕಳೆದ 3 ಋತುಗಳಲ್ಲಂತೂ ಹೀನಾಯ ನಿರ್ವಹಣೆ. 8ನೇ, 6ನೇ ಹಾಗೂ ಕಟ್ಟಕಡೆಯ ಸ್ಥಾನಕ್ಕೆ ಕುಸಿತ. ಇಲ್ಲಿಂದ ಒಮ್ಮೆಲೇ ಮೇಲೇರಿ ಚಾಂಪಿಯನ್ ಎನಿಸಿಕೊಳ್ಳುವ ಮಟಕ್ಕೆ ಆರ್ಸಿಬಿ ಏರೀತೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ!
ಹೆಚ್ಚು ಸಂತುಲಿತ ತಂಡ
2016ರ ಬಳಿಕ ಆರ್ಸಿಬಿ ಹೆಚ್ಚು ಸಂತುಲಿತ ತಂಡವನ್ನು ಹೊಂದಿದೆ ಎಂಬುದು ಕ್ರಿಕೆಟ್ ಪಂಡಿತರ ಅನಿಸಿಕೆ. ಇದಕ್ಕೆ ಮುಖ್ಯ ಕಾರಣ, ಆಸ್ಟ್ರೇಲಿಯದ ಸೀಮಿತ ಓವರ್ಗಳ ತಂಡದ ನಾಯಕ ಆರನ್ ಫಿಂಚ್ ಮತ್ತು ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಕ್ರಿಸ್ ಮಾರಿಸ್ ಅವರ ಸೇರ್ಪಡೆ. ಇವರಿಬ್ಬರು ಆರ್ಸಿಬಿಯ ಅದೃಷ್ಟವನ್ನು ಬದಲಿಸಬಲ್ಲರೇ ಎಂಬುದು ಅಭಿಮಾನಿಗಳ ನಿರೀಕ್ಷೆ.
2017ರಲ್ಲಿ ಕ್ರಿಸ್ ಗೇಲ್ ಬೇರ್ಪಟ್ಟ ಬಳಿಕ ಆರ್ಸಿಬಿ ಬ್ಯಾಟಿಂಗ್ ಕೊಹ್ಲಿ ಮತ್ತು ಎಬಿಡಿ ಅವರನ್ನೇ ಹೆಚ್ಚು ಅವಲಂಬಿಸಿತ್ತು. ಈ ಬಾರಿ ಫಿಂಚ್ ಬಂದಿರುವುದರಿಂದ ಅಗ್ರ ಕ್ರಮಾಂಕಕ್ಕೆ ಹೆಚ್ಚಿನ ಶಕ್ತಿ ಲಭಿಸುವುದು ಖಂಡಿತ. ಇವರೊಂದಿಗೆ ಸ್ವತಃ ಕೊಹ್ಲಿ, ದೇವದತ್ತ ಪಡಿಕ್ಕಲ್ ಅಥವಾ ಪಾರ್ಥಿವ್ ಪಟೇಲ್ ಇನ್ನಿಂಗ್ಸ್ ಆರಂಭಿಸಬಹುದು.
ವಿದೇಶಿಗರ ಆಯ್ಕೆಯೇ ಸಮಸ್ಯೆ!
ಮಾರಿಸ್ ಅವರೊಂದಿಗಿರುವ ಮತ್ತೋರ್ವ ಸವ್ಯಸಾಚಿಯೆಂದರೆ ಮೊಯಿನ್ ಅಲಿ. ಪೇಸರ್ ಕೇನ್ ರಿಚರ್ಡ್ಸನ್ ಬದಲು ಬಂದಿರುವ ಆ್ಯಡಂ ಝಂಪ ಪ್ರಮುಖ ಸ್ಪಿನ್ನರ್ ಆಗಿದ್ದಾರೆ. ವೇಗಿ ಡೇಲ್ ಸ್ಟೇನ್ ಮತ್ತೂಂದು ಅಸ್ತ್ರ. ಲಂಕೆಯ ಇಸುರು ಉದಾನ ಡೆತ್ ಓವರ್ಗಳಲ್ಲಿ ಅಪಾಯಕಾರಿಯಾಗಬಲ್ಲರು. ಹೀಗಾಗಿ 4 ಮಂದಿ ವಿದೇಶಿ ಕ್ರಿಕೆಟಿಗರನ್ನು ಆರಿಸುವುದೇ ಆರ್ಸಿಬಿಗೆ ದೊಡ್ಡ ಸಮಸ್ಯೆ ಆಗಬಹುದು!
ಚಹಲ್, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ ಆರ್ಸಿಬಿಯ ಪ್ರಮುಖ ದೇಶಿ ಬೌಲರ್ಗಳು. ಮೈಕ್ ಹೆಸನ್ ಮತ್ತು ಸೈಮನ್ ಕ್ಯಾಟಿಚ್ ನೂತನ ಕೋಚಿಂಗ್ ಸಿಬಂದಿಯಾಗಿದ್ದಾರೆ. ಹೀಗೆ ಎಲ್ಲ ರೀತಿಯಲ್ಲೂ ಆರ್ಸಿಬಿ ಒಂದು ಸಂತುಲಿತ ತಂಡ. ಅಲ್ಲದೇ ಇದು ಕರ್ನಾಟಕದ ಫ್ರಾಂಚೈಸಿ ಎಂಬ ಕಾರಣಕ್ಕೆ ಅಭಿಮಾನಿಗಳ ಸಂಖ್ಯೆಯೂ ಜಾಸ್ತಿ. ಆದರೆ ಕರ್ನಾಟಕದ ಕ್ರಿಕೆಟಿಗರು ಮಾತ್ರ ಪಂಜಾಬ್ ತಂಡದಲ್ಲಿ ತುಂಬಿಕೊಂಡಿರುವುದು ಬೇರೆ ವಿಷಯ!
ಸೆ. 21ರಂದು ಸನ್ರೈಸರ್ ಹೈದರಾಬಾದ್ ವಿರುದ್ಧ ಆಡುವ ಮೂಲಕ ಆರ್ಸಿಬಿ ತನ್ನ ಅಭಿಯಾನ ಆರಂಭಿಸಲಿದೆ.
ತಂಡ: ವಿರಾಟ್ ಕೊಹ್ಲಿ (ನಾಯಕ), ಆರನ್ ಫಿಂಚ್, ದೇವದತ್ತ ಪಡಿಕ್ಕಲ್, ಪಾರ್ಥಿವ್ ಪಟೇಲ್, ಎಬಿ ಡಿ ವಿಲಿಯರ್, ಗುರುಕೀರತ್ ಸಿಂಗ್, ಶಿವಂ ದುಬೆ, ಕ್ರಿಸ್ ಮಾರಿಸ್, ವಾಷಿಂಗ್ಟನ್ ಸುಂದರ್, ಶಾಬಾಜ್ ಅಹ್ಮದ್, ನವದೀಪ್ ಸೈನಿ, ಡೇಲ್ ಸ್ಟೇನ್, ಯಜುವೇಂದ್ರ ಚಹಲ್, ಆ್ಯಡಂ ಝಂಪ, ಇಸುರು ಉದಾನ, ಮೊಯಿನ್ ಅಲಿ, ಜೋಶ್ ಫಿಲಿಪ್, ಪವನ್ ನೇಗಿ, ಪವನ್ ದೇಶಪಾಂಡೆ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್.