ಇಶಾನ್ ಕಿಶನ್ ಓಪನರ್ ವಿವಾದ: ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಸ್ಪಷನೆ
ರೋಹಿತ್ ಶರ್ಮಾಗೆ ಅದರ ಬಗ್ಗೆ ತಿಳಿದಿತ್ತು
Team Udayavani, Nov 3, 2021, 1:41 PM IST
ದುಬೈ : ಟಿ 20 ವಿಶ್ವಕಪ್ನ ನ್ಯೂಜಿಲ್ಯಾಂಡ್ ಎದುರಿನ ಪಂದ್ಯದಲ್ಲಿ ಇಶಾನ್ ಕಿಶನ್ ಅವರನ್ನು ಆರಂಭಿಕನಾಗಿ ಕಳುಹಿಸಿದ ವಿವಾದಕ್ಕೆ ಸಂಬಂಧಿಸಿ ಭಾರತ ತಂಡದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಸ್ಪಷನೆ ನೀಡಿದ್ದಾರೆ.
‘ಮೂರನೇ ಕ್ರಮಾಂಕದಲ್ಲಿ ಕಳುಹಿಸುವಲ್ಲಿ ರೋಹಿತ್ ಶರ್ಮಾ ಅವರನ್ನು ಸಂಪೂರ್ಣವಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ’ ಎಂದು ರಾಥೋರ್ ಹೇಳಿದ್ದಾರೆ.
‘ಮಧ್ಯಮ ಕ್ರಮಾಂಕದಲ್ಲಿ ಒಂದೇ ರೀತಿಯ ಆಟಗಾರರನ್ನು ಹೊಂದಿರುವುದಕ್ಕಿಂತ ಹೆಚ್ಚಾಗಿ ಎಡಗೈ ಆಟಗಾರರಾಗಿರುವ ಇಶಾನ್ ಅವರನ್ನು ಮೊದಲು ಕಳುಹಿಸುವುದು ನಮ್ಮ ಉದ್ದೇಶವಾಗಿತ್ತು’ ಎಂದರು.
‘ಪರಿಸ್ಥಿತಿ ಹೇಗಾಗಿತ್ತು ಎಂದರೆ, ಹಿಂದಿನ ರಾತ್ರಿ ಸೂರ್ಯಕುಮಾರ್ ಯಾದವ್ ಗೆ ಸ್ವಲ್ಪ ಬೆನ್ನು ನೋವಿತ್ತು,ಫೀಲ್ಡಿಂಗ್ ಮಾಡಲು ಅವರು ಅಷ್ಟೊಂದು ಫಿಟ್ ಆಗಿರಲಿಲ್ಲ. ಆ ಜಾಗಕ್ಕೆ ಸಹಜವಾಗಿ ಸೂಕ್ತವಾಗಿದ್ದ ಇನ್ನೊಬ್ಬ ಆಟಗಾರ ಇಶಾನ್ ಆಗಿದ್ದು, ಅವರು ಈ ಹಿಂದೆ ಉತ್ತಮ ಪ್ರದರ್ಶನ ನೀಡಿದ್ದರಿಂದ ಆರಂಭಿಕನಾಗಿ ಕಳುಹಿಸಲಾಯಿತು’ ಎಂದು ರಾಥೋರ್ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದ ಮೊದಲು ಹೇಳಿಕೆ ನೀಡಿದ್ದಾರೆ.
‘ಇಡೀ ಮ್ಯಾನೇಜ್ಮೆಂಟ್ ಕುಳಿತು ಆ ನಿರ್ಧಾರವನ್ನು ತೆಗೆದುಕೊಂಡಿದೆ. ಸಹಜವಾಗಿ, ರೋಹಿತ್ ಶರ್ಮಾ ಕೂಡ ಆ ನಿರ್ಧಾರದ ಭಾಗವಾಗಿದ್ದಾರೆ. ಅವರು ಆ ಚರ್ಚೆಯ ಭಾಗವಾಗಿದ್ದರು’ ಎಂದು ರಾಥೋರ್ ಸ್ಪಷ್ಟ ಪಡಿಸಿದ್ದಾರೆ.