ಚೆನ್ನೈ ಟ್ರ್ಯಾಕ್ನಲ್ಲಿ ಬ್ಯಾಟಿಂಗ್ ಅಸಾಧ್ಯವಲ್ಲ: ಜಯವರ್ಧನೆ
Team Udayavani, Apr 20, 2021, 7:00 AM IST
ಚೆನ್ನೈ: ಇಲ್ಲಿನ “ಎಂ.ಎ. ಚಿದಂಬರಂ ಸ್ಟೇಡಿಯಂ’ ಟ್ರ್ಯಾಕ್ನಲ್ಲಿ ಬ್ಯಾಟಿಂಗ್ ಅಸಾಧ್ಯವೇನಲ್ಲ, ಆದರೆ ಇದು ನಿಧಾನ ಗತಿಯಿಂದ ವರ್ತಿಸುವುದರಿಂದ ಬ್ಯಾಟ್ಸ್ಮನ್ಗಳಿಗೆ ಸವಾಲಾಗಿ ಪರಿಣಮಿಸಿದೆ ಎಂದಿ ದ್ದಾರೆ ಮುಂಬೈ ಇಂಡಿಯನ್ಸ್ ತಂಡದ ಕೋಚ್ ಮಾಹೇಲ ಜಯವರ್ಧನೆ. ಜತೆಗೆ ಇಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಕ್ಕೆ ಅನುಕೂಲ ಜಾಸ್ತಿ ಎಂದೂ ಅಭಿಪ್ರಾಯಪಟ್ಟರು.
“ಇದೊಂದು ಉತ್ತಮ ಹಾಗೂ ಸ್ಮರ್ಧಾತ್ಮಕ ಪಿಚ್. ಇದಕ್ಕೆ ಒಗ್ಗಿಕೊಂಡು ಆಡುವುದು ಪ್ರತಿಯೊಬ್ಬ ಆಟಗಾ ರನಿಗೂ, ತಂಡಕ್ಕೂ ದೊಡ್ಡ ಸವಾಲು. ನಮ್ಮ ತಂಡ ಇದಕ್ಕೆ ಚೆನ್ನಾಗಿಯೇ ಹೊಂದಿಕೊಂಡಿದೆ’ ಎಂಬುದಾಗಿ ಜಯವರ್ಧನೆ ಹೇಳಿದರು.
ಚೆನ್ನೈಯಲ್ಲಿ ಈ ವರೆಗೆ ಆಡಲಾದ 6 ಪಂದ್ಯಗಳಲ್ಲಿ 3 ಸಲವಷ್ಟೇ ತಂಡಗಳು ನೂರೈವತ್ತರ ಗಡಿ ದಾಟಿವೆ. 5 ಸಲ ಮೊದಲು ಬ್ಯಾಟಿಂಗ್ ನಡೆಸಿದ ತಂಡ ಜಯ ಸಾಧಿಸಿದೆ. ರವಿವಾರದ ಹಗಲು ಪಂದ್ಯದಲ್ಲಿ ಆರ್ಸಿಬಿಯಂತೂ ಇಲ್ಲಿ ಇನ್ನೂರರ ಗಡಿ ದಾಟಿ ಮುನ್ನುಗ್ಗಿತ್ತು. ಪ್ರಸಕ್ತ ಋತುವಿನಲ್ಲಿ ಚೆನ್ನೈ ಅಂಗಳದಲ್ಲಿ ತಂಡವೊಂದು ಇನ್ನೂರರ ಗಡಿ ದಾಟಿದ ಮೊದಲ ನಿದರ್ಶನ ಇದಾಗಿದೆ.
ಹಾರ್ದಿಕ್ ಪಾಂಡ್ಯ ಬೌಲಿಂಗ್?
ಈ ಐಪಿಎಲ್ನಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಲು ಇನ್ನೂ ಸ್ವಲ್ಪ ಕಾಯಬೇಕಿದೆ ಎಂಬುದಾಗಿಯೂ ಜಯವರ್ಧನೆ ಹೇಳಿದರು.
“ಐಪಿಎಲ್ನಲ್ಲಿ ಪಾಂಡ್ಯ ಅವರನ್ನು ಆರಂಭದಲ್ಲೇ ಬೌಲಿಂಗಿಗೆ ಇಳಿಸ ಬೇಕೆಂಬುದು ನಮ್ಮ ಯೋಜನೆ ಯಾಗಿತ್ತು. ಆದರೆ ಇಂಗ್ಲೆಂಡ್ ಎದು ರಿನ ಕೊನೆಯ ಏಕದಿನ ಪಂದ್ಯದ ಬಳಿಕ ಅವರಿಗೆ ತುಸು ಸಮಸ್ಯೆ ಎದು ರಾಯಿತು. ಹೀಗಾಗಿ ಯಾವುದೇ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದು ನಿರ್ಧರಿಸಿದೆವು. ಮುಂದಿನ ಕೆಲವು ವಾರಗಳಲ್ಲಿ ಅವರು ಬೌಲಿಂಗ್ ಮಾಡ ಬಹುದು’ ಎಂದರು.