“ನಾವು ಬಿಜೆಪಿ ವಿರೋಧಿಗಳೇ ಹೊರತು ದೇಶ ವಿರೋಧಿಗಳಲ್ಲ : ಫಾರೂಕ್ ಅಬ್ದುಲ್ಲಾ
Team Udayavani, Oct 24, 2020, 8:51 PM IST
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಪುನಸ್ಥಾಪಿಸುವ ಉದ್ದೇಶದಿಂದ ಸ್ಥಾಪನೆಗೊಂಡಿರುವ ಪೀಪಲ್ಸ್ ಅಲಯನ್ಸ್ ಫಾರ್ ಗುಪ್ಕಾರ್ ಡಿಕ್ಲರೇಷನ್(ಪಿಎಜಿಡಿ)ನ ಅಧ್ಯಕ್ಷರಾಗಿ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ನೇಮಕಗೊಂಡಿದ್ದಾರೆ.
ಶನಿವಾರ ತಮ್ಮ ನೇಮಕದ ಬಳಿಕ ಮಾತನಾಡಿದ ಅವರು, “ಪಿಎಜಿಡಿಯನ್ನು ದೇಶವಿರೋಧಿ ಎಂದು ಬಿಜೆಪಿ ಕರೆಯಲಾರಂಭಿಸಿದೆ. ಆದರೆ, ಇದು ಸುಳ್ಳು. ಪಿಎಜಿಡಿ ಬಿಜೆಪಿ ವಿರೋಧಿಯೇ ಹೊರತು ದೇಶ ವಿರೋಧಿಯಲ್ಲ ಎಂದು ನಾನು ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ’ ಎಂದಿದ್ದಾರೆ. ಇದೇ ವೇಳೆ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಈ ಮೈತ್ರಿಗೆ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಇದಕ್ಕೂ ಮುನ್ನ ಫಾರೂಕ್ ಅಬ್ದುಲ್ಲಾ ಅವರು ಮಹಾನವಮಿ ಮತ್ತು ದುರ್ಗಾಷ್ಟಮಿ ಹಿನ್ನೆಲೆಯಲ್ಲಿ ಇಲ್ಲಿನ ದುರ್ಗಾ ನಾಗ್ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಇದನ್ನೂ ಓದಿ:ತನ್ನನ್ನು ಬೆಳೆಸಿದ ಪಕ್ಷಕ್ಕೆ ಯಾರು ದ್ರೋಹ ಬಗೆದಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ:ಡಿಕೆಶಿ
ಸಂಚನ್ನು ಸಹಿಸಲ್ಲ:
ಪಿಎಜಿಡಿ ವಿರುದ್ಧ ಜಮ್ಮು-ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ಹರಿಹಾಯ್ದಿದ್ದು, “ಗುಪ್ಕಾರ್ ಗ್ಯಾಂಗ್ನ ಸಂಚನ್ನು ಸಹಿಸಲಾಗದು. ದೇಶದ ಏಕತೆ ಮತ್ತು ಸಮಗ್ರತೆಗೆ ಸವಾಲೆಸೆಯುವವರನ್ನು ಜೈಲಿಗೆ ಅಟ್ಟಲಾಗುತ್ತದೆ’ ಎಂದು ಎಚ್ಚರಿಸಿದ್ದಾರೆ. ಜತೆಗೆ, ಯಾರಿಗೆ ಭಾರತದಲ್ಲಿ ಸುರಕ್ಷತೆಯ ಭಾವ ಮೂಡುತ್ತಿಲ್ಲವೋ, ಅವರು ಪಾಕಿಸ್ತಾನಕ್ಕೆ ಹೋಗಬಹುದು. ಸಂವಿಧಾನದ 370ನೇ ವಿಧಿಯನ್ನು ಪುನಸ್ಥಾಪಿಸಲು ಜಗತ್ತಿನ ಯಾವ ಶಕ್ತಿಗೂ ಸಾಧ್ಯವಿಲ್ಲ ಎಂದೂ ಅವರು ಹೇಳಿದ್ದಾರೆ.
ಮೆಹಬೂಬಾ ಬಂಧನಕ್ಕೆ ಬಿಜೆಪಿ ಆಗ್ರಹ
ಜಮ್ಮು ಮತ್ತು ಕಾಶ್ಮೀರದ ಧ್ವಜವನ್ನು ಮತ್ತು ವಿಶೇಷ ಸ್ಥಾನಮಾನವನ್ನು ಪುನಸ್ಥಾಪಿಸುವವರೆಗೂ ತ್ರಿವರ್ಣಧ್ವಜ ಹಿಡಿಯುವುದಿಲ್ಲ ಎಂಬ ಮೆಹಬೂಬಾ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅವರ ವಿರುದ್ಧ ದೇಶದ್ರೋಹದ ಕೇಸು ದಾಖಲಿಸಿ, ಬಂಧಿಸಬೇಕು ಎಂದು ಕೇಂದ್ರಾಡಳಿತ ಪ್ರದೇಶದ ಬಿಜೆಪಿ ಘಟಕ ಒತ್ತಾಯಿಸಿದೆ. ಇದೇ ವೇಳೆ, ಮೆಹಬೂಬಾ ಅವರು ತಮ್ಮ ಹೇಳಿಕೆ ಮೂಲಕ ದೇಶದ ಜನರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಹೇಳಿರುವ ಕಾಂಗ್ರೆಸ್, ಪ್ರಚೋದನಾತ್ಮಕ ಮತ್ತು ಬೇಜವಾಬ್ದಾರಿಯುತ ಹೇಳಿಕೆ ನೀಡುವುದನ್ನು ನಿಲ್ಲಿಸಿ ಎಂದು ಹೇಳಿದೆ.