ಕಾಂಗ್ರೆಸ್ನಿಂದ ಉದ್ಯೋಗ ಸೃಷ್ಟಿ ಯಾತ್ರೆ: ಡಿ.ಕೆ. ಶಿವಕುಮಾರ್
Team Udayavani, Sep 10, 2022, 11:30 PM IST
ಬೆಂಗಳೂರು: ಮಹಿಳೆಯರ ಸಬಲೀಕರಣ ಹಾಗೂ ರಾಜ್ಯದಲ್ಲಿ ಭ್ರಷ್ಟಾ ಚಾರ ನಿರ್ಮೂಲನೆ ವಿಚಾರ ಇಟ್ಟುಕೊಂಡು ಯುವ ಉದ್ಯೋಗ ಸೃಷ್ಟಿ ಯಾತ್ರೆ ಆಯೋಜಿಸುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಮಾತು ಕೊಟ್ಟಿದ್ದ ಪ್ರಧಾನ ಮಂತ್ರಿಗಳು ನುಡಿದಂತೆ ನಡೆದಿಲ್ಲ. ಈಗ ನಿರ್ಮಲಾ ಸೀತಾರಾಮನ್ ಅವರು 60 ಲಕ್ಷ ಉದ್ಯೋಗ ಸೃಷ್ಟಿಸುವ ಬಗ್ಗೆ ಆಲೋಚಿಸುತ್ತಿದ್ದೇವೆ ಎಂದಿದ್ದಾರೆ. ಹೀಗಾಗಿ, ನಮ್ಮ ರೈತರು, ಕಾರ್ಮಿಕರ ಬದುಕಿಗೂ ನ್ಯಾಯ ಒದಗಿಸಿಕೊಡಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಜನರ ಧ್ವನಿಯಾಗಲು ಹೊರಟಿದೆ ಎಂದು ಹೇಳಿದರು.
ಯುವಕರ ನಿರುದ್ಯೋಗ ಸಮಸ್ಯೆ ಬಗ್ಗೆ ಕೇವಲ ಟೀಕೆ ಮಾಡದೆ ಉದ್ಯೋಗ ಸೃಷ್ಟಿಗೆ ಅವರ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದ್ದೇವೆ. ಇಡೀ ರಾಜ್ಯದಲ್ಲಿ ನಿರುದ್ಯೋಗಿ ಯುವಕರಿಗೆ ನೋಂದಣಿ ಮಾಡಿಕೊಳ್ಳಲು ಅವ ಕಾಶ ನೀಡಲಾಗಿದೆ. ಯಾವುದೇ ಪಕ್ಷ, ವರ್ಗ, ಜಾತಿ, ಧರ್ಮ ಭೇದವಿಲ್ಲದೆ, ವಿದ್ಯಾರ್ಹತೆ ಆಧರಿಸಿ ಎಲ್ಲರಿಗೂ ನೋಂದಣಿ ಅವಕಾಶ ನೀಡುತ್ತಿ ದ್ದೇವೆ. ಈಗಾಗಲೇ ಯುವ ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ಹೋಗಿ 40 ಸಾವಿರ ನಿರುದ್ಯೋಗಿಗಳ ಹೆಸರು ನೋಂದಣಿ ಮಾಡಿಸಿದ್ದಾರೆ ಎಂದು ಹೇಳಿದರು.
ಯುವಧ್ವನಿ ನಮ್ಮ ಧ್ವನಿ
ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ ಯಾತ್ರೆ ಮಾಡುವಾಗ ಎರಡು ಕಡೆಗಳಲ್ಲಿ ನಿರುದ್ಯೋಗಿ ಯುವಕರ ಜತೆ ಚರ್ಚೆಗೆ ಅವಕಾಶ ನೀಡುತ್ತಿದ್ದೇವೆ. ಯುವಧ್ವನಿ ನಮ್ಮ ಧ್ವನಿಯಾಗಬೇಕು ಎಂದು ನಾವು ಇಂದು ಈ ವೆಬ್ಸೈಟ್ ಉದ್ಘಾಟಿಸುತ್ತಿದ್ದೇವೆ. 21 ದಿನಗಳ ಯಾತ್ರೆಯಲ್ಲಿ ಪ್ರತಿನಿತ್ಯ ರೈತರು, ಮಹಿಳೆಯರು, ಪರಿಶಿಷ್ಟರು, ಕಾರ್ಮಿಕರು ಸಹಿತ ಎಲ್ಲ ವರ್ಗದವರಿಗೂ ರಾಹುಲ್ ಭೇಟಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದರು.
ನಾವು ಬಿಜೆಪಿಯನ್ನು ತಡೆಯು ತ್ತಿಲ್ಲ, ಜನರೇ ತಡೆಯುತ್ತಿದ್ದಾರೆ. ಭ್ರಷ್ಟ ಸರಕಾರ ತೊಲಗಿದರೆ ಸಾಕು ಎಂದು ಹೇಳುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ಇವರಿಗೆ ರ್ಯಾಂಕಿಂಗ್ ನೀಡಬೇಕಾಗಿದೆ ಎಂದು ಹೇಳಿದರು. ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಮಾತನಾಡಿದರು.