ಕೊಲ್ಲಮೊಗ್ರು: ವೃದ್ಧೆಗೆ ನೆರವಾದ ವಿಪತ್ತು ನಿರ್ವಹಣ ತಂಡ : ಟಾರ್ಪಾಲು ಮಾಡಿನ ಮನೆಯ ದುರಸ್ತಿ
Team Udayavani, Mar 17, 2021, 4:50 AM IST
ಸುಬ್ರಹ್ಮಣ್ಯ: ಕೊಲ್ಲಮೊಗ್ರು ಗ್ರಾಮದ ಕಟ್ಟ ಎಂಬಲ್ಲಿ ಒಂಟಿ ವೃದ್ಧೆಯ ಮನೆಯೊಂದನ್ನು ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣ ತಂಡದ ಸದಸ್ಯರು ದುರಸ್ತಿ ಮಾಡುವ ಮೂಲಕ ಮಾದರಿ ಕಾರ್ಯ ನಡೆಸಿದ್ದಾರೆ.
ಚನಿಯ ಅವರ ಪತ್ನಿ 70 ವರ್ಷ ಪ್ರಾಯದ ಮಾನಿಕಾ ಎಂಬ ವೃದ್ಧೆಯ ಮನೆಯ ಮಾಡು ಮುರಿದು ಬಿದ್ದು ಹಾನಿಗೊಳಗಾಗಿತ್ತು. ಬಳಿಕ ಒಂಟಿಯಾಗಿ ಟಾರ್ಪಾಲು ಮಾಡಿನ ಮನೆಯಲ್ಲಿ ವಾಸಿಸುತ್ತಿದ್ದರು.
ಮನೆ ದುರಸ್ತಿ
ಮಾಹಿತಿ ಅರಿತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣ ತಂಡದ ಸದಸ್ಯರು ಚರ್ಚಿಸಿ, ಮನೆ ದುರಸ್ತಿಗೆ ಬೇಕಾದ ಸಲಕರಣೆಗಳನ್ನು ಸಂಗ್ರಹಿಸಿ ಅಪಾಯದ ಸ್ಥಿತಿಯಲ್ಲಿದ್ದ ಮನೆಯ ಮಾಡನ್ನು ತೆರವು ಗೊಳಿಸಿ, ಹೊಸ ಮಾಡನ್ನು ಮನೆಯವರ ಸಹಾಯ ಸೇರಿ ನಿರ್ಮಿಸಿದ್ದಾರೆ. ವೃದ್ಧೆ ಸರಕಾರದಿಂದ ಬರುವ ಮಾಸಿಕ ಹಣದಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಬರುವ ವಿಪತ್ತು ನಿರ್ವಹಣ ತಂಡವು ತರಬೇತಿ ಪಡೆದ ತಂಡವಾಗಿದ್ದು, ಇದು ವಿಪತ್ತು ನಿರ್ವ ಹಣೆಯಲ್ಲಿ ಕಾರ್ಯಾಚರಿಸಲು ರಚಿಸಲ್ಪಟ್ಟಿದೆ. ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣ ತಂಡವು ಈವರೆಗೆ ಅನೇಕ ಸಮಾಜ ಮುಖೀ ಕಾರ್ಯಗಳನ್ನು ನಡೆಸಿದೆ. ಕಿಂಡಿ ಅಣೆಕಟ್ಟು ಸ್ವತ್ಛತೆ, ಸೇತುವೆ ದುರಸ್ತಿ, ಸೇರಿದಂತೆ ಹಲವು ಕಾರ್ಯ ನಿರ್ವಹಿಸಿದೆ.
ಮಾನಿಕಾ ಅವರ ಮನೆ ದುರಸ್ತಿಯಲ್ಲಿ ವಿಪತ್ತು ನಿರ್ವಹಣ ತಂಡದ ಸಂಯೋಜಕ ಸತೀಶ್ ಮಣಿಕಂಠ ಕಟ್ಟ, ಸದಸ್ಯರಾದ ಕೆ. ಮಣಿಕಂಠ, ಲಕ್ಷ್ಮ¾ಣ ಕುಂಜತ್ತಾಡಿ ಐನೆಕಿದು, ಕುಸುಮಾಧರ, ಯಶವಂತ, ಚಂದ್ರಶೇಖರ ಕೋನಡ್ಕ, ಮುತ್ತಪ್ಪ ಕೆ., ಸದಾಶಿವ, ಶ್ರೀನಿವಾಸ ಕೆ., ಕೆ.ಹರ್ಷ, ಕುಶಾಲಪ್ಪ ಜಾಲು, ಬಾಲಸುಬ್ರಹ್ಮಣ್ಯ, ಅಶೋಕ ಮಿತ್ತೋಡಿ, ಜಯಪ್ರಕಾಶ್ ಪಾಲ್ಗೊಂಡಿದ್ದರು.
ಸಹಕರಿಸಿದ್ದೇವೆ
ಮಾನಿಕಾ ಅವರ ಮನೆ ದುಃಸ್ಥಿತಿ ಬಗ್ಗೆ ಮಾಹಿತಿ ತಿಳಿದು, ತಂಡದ ಸದಸ್ಯ ರೊಂದಿಗೆ ಚರ್ಚಿಸಿ, ಮನೆ ದುರಸ್ತಿ ಮಾಡಿದ್ದೇವೆ. ನಮ್ಮ ವಿಪತ್ತು ನಿರ್ವ ಹಣ ತಂಡದಿಂದ ಸಮಾಜಮುಖೀ ಕಾರ್ಯ ನಡೆಸಲಾಗಿದೆ. ಪ್ರತೀ 2ನೇ ಶನಿವಾರ ನಮ್ಮ ತಂಡದಿಂದ ಸಮಾಜಮುಖೀ ಕಾರ್ಯ ನಡೆಸಲಾಗುತ್ತಿದೆ.
– ಕೆ.ಹರ್ಷ ಅಟ್ನೂರುಮಜಲು, ಸದಸ್ಯರು, ವಿಪತ್ತು ನಿರ್ವಹಣ ತಂಡ