ಲಖೀಂಪುರ ಹಿಂಸಾಚಾರ: ಕೇಂದ್ರ ಸಚಿವ ಮಿಶ್ರಾ ಮನೆಗೆ ಮತ್ತೊಂದು ನೋಟಿಸ್
Team Udayavani, Oct 8, 2021, 3:40 PM IST
ಲಕ್ನೋ: ಲಖೀಂಪುರ ಖೇರೀ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಮನೆಯ ಗೇಟ್ ಗೆ ಉತ್ತರಪ್ರದೇಶ ಪೊಲೀಸರು ಶುಕ್ರವಾರ ಇನ್ನೊಂದು ನೋಟಿಸ್ ಅಂಟಿಸಿದ್ದಾರೆ.
ಸಚಿವರ ಪುತ್ರ, ಪ್ರಮುಖ ಆರೋಪಿಯಾಗಿರುವ ಆಶಿಷ್ ಮಿಶ್ರಾ ಅವರನ್ನು ಅಕ್ಟೋಬರ್ 9 ರಂದು 11 ಗಂಟೆಯ ಒಳಗೆ ಪೋಲೀಸರ ಎದುರು ಹಾಜರಾಗಲು ಸೂಚಿಸಿ ನೋಟಿಸ್ ಅಂಟಿಸಲಾಗಿದೆ. ಹಾಜರಾಗದಿದ್ದಲ್ಲಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ನೋಟಿಸ್ ನಲ್ಲಿ ಬರೆಯಲಾಗಿದೆ.
ನೇಪಾಳಕ್ಕೆ ಪರಾರಿ ?
ಆಶಿಷ್ ಮಿಶ್ರ ನೇಪಾಳಕ್ಕೆ ತೆರಳಿಲ್ಲ. ಲಖೀಂಪುರದಲ್ಲೇ ಇದ್ದು, ಪೊಲೀಸರ ಎದುರು ಹಾಜರಾಗಲಿದ್ದಾರೆ ಎಂದು ಅವರ ಸಂಬಂಧಿ ಅಭಿಜಾತ್ ಮಿಶ್ರಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಇನ್ನೊಂದೆಡೆ ಶುಕ್ರವಾರ ಸುಪ್ರೀಂ ಕೋರ್ಟ್ ಮತ್ತೆ ಉತ್ತರಪ್ರದೇಶ ಸರಕಾರ ಹಿಂಸಾಚಾರ ಪ್ರಕರಣದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ತನಿಖೆ ನಡೆಸಬಹುದಾದ ಪರ್ಯಾಯ ಏಜೆನ್ಸಿಯ ಕುರಿತಾಗಿ ನ್ಯಾಯಾಲಯಕ್ಕೆ ತಿಳಿಸಿ ಎಂದು ಸರಕಾರವನ್ನು ಪ್ರಶ್ನಿಸಿದೆ.
ಲಖೀಂಪುರ ಖೇರಿಯಲ್ಲಿ ಎಷ್ಟು ಮಂದಿಯನ್ನು ಬಂಧಿಸಿದ್ದೀರಿ, ಯಾರ ವಿರುದ್ಧ ಎಫ್ಐ ಆರ್ ದಾಖಲಿಸಿದ್ದೀರಿ ಎಂದು ಉತ್ತ ರಪ್ರದೇಶ ಸರಕಾರಕ್ಕೆ ಗುರುವಾರ ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು. ನಾಳೆಯೇ ನಮಗೆ ಈ ಬಗ್ಗೆ ಸ್ಥಿತಿ ಗತಿ ವರದಿ ಸಲ್ಲಿಸಬೇಕು. ಹತ್ಯೆಗೀಡಾದ 8 ಮಂದಿ ಯಾರು? ಯಾರ ವಿರುದ್ಧ ಎಫ್ಐಆರ್ ದಾಖಲಾಗಿದೆ? ಎಷ್ಟು ಮಂದಿಯನ್ನು ಬಂಧಿಸಿದ್ದೀರಿ ಎಂಬೆಲ್ಲ ವಿವರವನ್ನೂ ನಮಗೆ ನೀಡ ಬೇಕು ಎಂದು ಸೂಚಿಸಿತ್ತು.