ಎಟಿಎಂನಲ್ಲಿ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ : ಅಪರಾಧಿ ಮಧುಕರ್ ರೆಡ್ಡಿಗೆ ಶಿಕ್ಷೆ
Team Udayavani, Feb 2, 2021, 10:02 PM IST
ಬೆಂಗಳೂರು: ಇಡೀ ದೇಶದಲ್ಲೇ ತಲ್ಲಣಗೊಳಿಸಿದ ಬೆಂಗಳೂರಿನ ರಾಷ್ಟ್ರೀಕೃತ ಬ್ಯಾಂಕ್ನ ಎಟಿಎಂ ಕೇಂದ್ರದಲ್ಲಿ ಮಹಿಳೆ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣದ ಅಪರಾಧಿ ಆಂಧ್ರಪ್ರದೇಶ ಮೂಲದ ಮಧುಕರ್ ರೆಡ್ಡಿಯನ್ನು 65ನೇ ಸೆಷನ್ಸ್ ನ್ಯಾಯಾಲಯ ದೋಷಿ ಎಂದು ಮಂಗಳವಾರ ಘೋಷಿಸಿದ್ದು, ಆರೋಪಿಗೆ ಹತ್ತು ವರ್ಷ ಜೈಲು ಶಿಕ್ಷೆ, 10 ಸಾವಿರ ರೂ. ದಂಡ ಹಾಗೂ ಸಾಕ್ಷ್ಯ ನಾಶ ಪಡಿಸಿದ ಆರೋಪದ ಮೇಲೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ಎರಡು ಸಾವಿರ ರೂ. ದಂಡ ವಿಧಿಸಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರುಪಡಿಸಲಾಗಿತ್ತು. 2013ರಲ್ಲಿ ಬಿಬಿಎಂಪಿ ಪ್ರಧಾನ ಕಚೇರಿ ಸಮೀಪದಲ್ಲಿರುವ ಕಾರ್ಪೊರೇಷನ್ ವೃತ್ತದ ಎಟಿಎಂ ಕೇಂದ್ರದಲ್ಲಿ ಮಹಿಳಾ ಬ್ಯಾಂಕ್ ಉದ್ಯೋಗಿ ಜ್ಯೋತಿ ಅವರ ಮೇಲೆ ಮಧುಕರ್ ರೆಡ್ಡಿ ಭೀಕರ ಹಲ್ಲೆ ನಡೆಸಿದ್ದ. ಈ ಪ್ರಕರಣ ಸಂಬಂಧ ಕೋರ್ಟ್ ಸುದೀರ್ಘ 8 ವರ್ಷ ವಿಚಾರಣೆ ನಡೆಸಿತ್ತು. ಪ್ರಕರಣ ಸಂಬಂಧ ಆರೋಪಿಯ ವಿರುದ್ಧ ತನಿಖಾಧಿಕಾರಿಗಳು ಸೂಕ್ತ ಸಾಕ್ಷಾಧಾರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಅಂಶಗಳನ್ನು ಪರಿಗಣಿಸಿದ ಕೋರ್ಟ್ ಮಧುಕರ್ ರೆಡ್ಡಿಯನ್ನು ದೋಷಿ ಎಂದು ಘೋಷಿಸಿ ಶಿಕ್ಷೆ ಪ್ರಮಾಣ ಪ್ರಕಟಿಸಿದೆ. ಸರ್ಕಾರದ ಪರವಾಗಿ ಅಭಿಯೋಜಕರಾದ ಎಂ.ವಿ.ತ್ಯಾಗರಾಜ್ ವಾದ ಮಂಡಿಸಿದ್ದರು.
ವಿಚಾರಣೆ ಸಂದರ್ಭದಲ್ಲಿ “ಜ್ಯೋತಿ ಉದಯ್ ಮೇಲೆ ಹಲ್ಲೆ ನಡೆಸಿದ್ದು ನಾನೇ’ ಎಂದು ಮಧುಕರ್ ರೆಡ್ಡಿ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೆ, “ಈ ಪ್ರಕರಣದಲ್ಲಿ ಹೆಚ್ಚಿನ ವಿಚಾರಣೆ ಅಗತ್ಯವಿಲ್ಲ. ಕೂಡಲೇ ಶಿಕ್ಷೆ ನೀಡಿ. ನನ್ನ ಪರವಾಗಿ ಯಾವುದೇ ವಕೀಲರು ವಾದ ಮಂಡಿಸುವುದು ಬೇಡ. ನನಗೆ ಹೆಂಡತಿ, ಮಕ್ಕಳಿದ್ದು, ಆದಷ್ಟು ಬೇಗ ವಾಪಸ್ ಹೋಗಬೇಕು. ಹೀಗಾಗಿ ಕೂಡಲೇ ನನಗೆ ಶಿಕ್ಷೆ ನೀಡಿ’ ಎಂದು ತನಿಖಾಧಿಕಾರಿಗಳಿಗೆ ಮನವಿ ಮಾಡಿದ್ದ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಮಂಡ್ಯ : ಅತ್ಯಾಚಾರ ಎಸಗಿ ಮಹಿಳೆಯ ಹತ್ಯೆ : ಆರೋಪಿಗಳ ಪತ್ತೆಗೆ ಪೊಲೀಸರ ಕಾರ್ಯಾಚರಣೆ
ಆಂಧ್ರಪ್ರದೇಶದಲ್ಲಿ ಬಂಧನ: 2013ರಲ್ಲಿ ಕೃತ್ಯ ಎಸಗಿದ ಆರೋಪಿ ಕಬ್ಬನ್ ಪಾರ್ಕ್ನಲ್ಲಿ ಒಂದೆರಡು ದಿನಗಳ ಕಾಲ ಕಳೆದು ಅನಂತರ ಆಂಧ್ರಪ್ರದೇಶದ ಕಡೆ ತಲೆಮರೆಸಿಕೊಂಡಿದ್ದ.
2017ರ ಫೆಬ್ರವರಿ ಕೊನೇ ವಾರದಲ್ಲಿ ಆಂಧ್ರದ ಮದನಪಲ್ಲಿ ಠಾಣೆ ಪೊಲೀಸರ ಕಾರ್ಯಾಚರಣೆವೊಂದರಲ್ಲಿ ಮಧುಕರ್ ರೆಡ್ಡಿಯನ್ನು ಬಂಧಿಸಲಾಗಿತ್ತು. ಆಂಧ್ರ ಮತ್ತು ತೆಲಂಗಾಣದಲ್ಲಿ ನಡೆದ ಮೂರು ಕೊಲೆ ಮತ್ತು ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮಧುಕರ್, ಹೈದ್ರಾಬಾದ್, ಕಡಪ, ಅನಂತಪುರ, ಕೇರಳ ಹೀಗೆ ಐದಾರು ತಿಂಗಳಿಗೆ ಒಮ್ಮೆ ಸ್ಥಾನ ಬದಲಿಸುತ್ತಿದ್ದ ಎಂಬ ವಿಚಾರ ಬೆಳಕಿಗೆ ಬಂದಿತ್ತು.
ಪ್ರಕರಣದ ಹಿನ್ನೆಲೆ: 2013ರ ನ.19 ರ ಬೆಳಗ್ಗೆ 7 ಗಂಟೆ ಸುಮಾರಿಗೆ ನಗರದ ಕಾರ್ಪೊರೇಷನ್ ಸರ್ಕಲ್ನಲ್ಲಿರುವ ಬ್ಯಾಂಕ್ ಎಟಿಎಂನಲ್ಲಿ ಮಗಳ ಜನ್ಮ ದಿನಾಚರಣೆಗಾಗಿ ಅದೇ ಬ್ಯಾಂಕ್ ಉದ್ಯೋಗಿ ಜ್ಯೋತಿ ಉದಯ್, ಹಣ ಡ್ರಾ ಮಾಡಲು ಎಟಿಎಂ ಕೇಂದ್ರಕ್ಕೆ ಬಂದಿದ್ದರು. ಈ ವೇಳೆ ಒಳ ನುಗ್ಗಿದ್ದ ಆರೋಪಿ ಜ್ಯೋತಿ ಉದಯ್ಗೆ ಹಣ ನೀಡುವಂತೆ ಬೆದರಿಸಿದ್ದ. ಅದಕ್ಕೆ ನಿರಾಕರಿಸಿದಾಗ ಭೀಕರವಾಗಿ ಹಲ್ಲೆ ನಡೆಸಿ, ಪರಾರಿಯಾಗಿದ್ದ. ಈ ದೃಶ್ಯಗಳು ಎಟಿಎಂನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸುದೀರ್ಘ ಚಿಕಿತ್ಸೆ ನಂತರ ಅವರು ಸದ್ಯ ಗುಣಮುಖರಾಗಿದ್ದಾರೆ.
ಇದನ್ನೂ ಓದಿ :16.30 ಗಂಟೆಯಲ್ಲಿ 74 ಟನ್ ಕಬ್ಬನ್ನು ಟ್ರ್ಯಾಕ್ಟರ್ ಗೆ ತುಂಬಿ ಸಾಧನೆ ಮಾಡಿದ ಯುವಕ
ಇನ್ನೂ ಕಠಿಣ ಶಿಕ್ಷೆಯಾಗಬೇಕಿತ್ತು-ಜ್ಯೋತಿ ಉದಯ್
ಕೋರ್ಟ್ ಆದೇಶದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಹಲ್ಲೆಗೊಳಗಾಗಿದ್ದ ಜ್ಯೋತಿ ಉದಯ್, ಕೋರ್ಟ್ ಆದೇಶ ಸಂತಸ ತಂದಿದೆ. ಕೊನೆಗೂ ಆತನಿಗೆ ಶಿಕ್ಷೆಯಾಗಿದೆ. ಆದರೆ, ಇನ್ನೂ ಕಠಿಣ ಶಿಕ್ಷೆಯಾಗಬೇಕಿತ್ತು. ಆದರೂ ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇನೆ. ಈಗಲೂ ನಾನು ಆ ಎಂಟಿಎಂ ಕೇಂದ್ರಕ್ಕೆ ಹೋಗುವುದಿಲ್ಲ. ಜತೆಗೆ ಮಹಿಳೆಯರು ಎಟಿಎಂ ಕೇಂದ್ರಕ್ಕೆ ಹೋಗುವಾಗ ತುಂಬ ಎಚ್ಚರಿಕೆ ವಹಿಸಿ ಎಂದು ಮನವಿ ಮಾಡಿದರು.
ಹತ್ತು ವರ್ಷ ಶಿಕ್ಷೆ
ಆರೋಪಿಯ ಕೃತ್ಯಕ್ಕೆ ಹತ್ತು ವರ್ಷ ಶಿಕ್ಷೆ ಮತ್ತು ಹತ್ತು ಸಾವಿರ ರೂ. ದಂಡ ಹಾಗೂ ಸಾಕ್ಷ್ಯ ನಾಶಪಡಿಸಿದ ಆರೋಪದ ಮೇಲೆ ಎರಡು ವರ್ಷ ಶಿಕ್ಷೆ ಹಾಗೂ ಎರಡು ಸಾವಿರ ರೂ. ದಂಡ ವಿಧಿಸಿದೆ. ಎರಡು ಶಿಕ್ಷೆಯನ್ನು ಜತೆಯಲ್ಲೇ ಅನುಭವಿಸಬೇಕಿರುವುದರಿಂದ ಮಧುಕರ್ ರೆಡ್ಡಿ ಹತ್ತು ವರ್ಷ ಶಿಕ್ಷೆ ಅನುಭವಿಸಬೇಕು. ಈಗಾಗಲೇ ಆರೋಪಿ ಮೂರು ವರ್ಷ ಶಿಕ್ಷೆ ಅನುಭವಿಸಿದ್ದು, ಇನ್ನು ಏಳು ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ ದಂಡ ಪಾವತಿಸಬೇಕಿದೆ.