ಮಂತ್ರಿಗಳ ಸಂಖ್ಯೆ ಹೆಚ್ಚಾದಂತೆ ಹೆಚ್ಚುವರಿ ಖಾತೆ ಬಿಟ್ಟು ಕೊಡಲೇಬೇಕು :ಮಾಧುಸ್ವಾಮಿ ಸ್ಪಷ್ಟನೆ
Team Udayavani, Feb 8, 2021, 7:10 PM IST
ಮಂಡ್ಯ: ಕಾನೂನು, ಸಂಸದೀಯ ವ್ಯವಹಾರ, ಸಣ್ಣ ನೀರಾವರಿ ಮೂರು ಖಾತೆಗಳನ್ನು ಕಿತ್ತುಕೊಂಡು ವೈದ್ಯಕೀಯ ಶಿಕ್ಷಣ ಖಾತೆ ನೀಡಿದಾಗ ಅಸಮಾಧಾನ ಆಗಿದ್ದು ನಿಜ. ಆದರೆ ಮತ್ತೆ ಸಣ್ಣ ನೀರಾವರಿ ಖಾತೆ ಪಡೆಯಲು ನಾನು ಯಶಸ್ವಿಯಾಗಿದ್ದೇನೆ ಅದರಂತೆ ಮಂತ್ರಿಗಳ ಸಂಖ್ಯೆ ಹೆಚ್ಚಾದಂತೆ ನಮ್ಮಲಿರುವ ಹೆಚ್ಚುವರಿ ಖಾತೆಗಳನ್ನು ಬಿಟ್ಟು ಕೊಡಲೇಬೇಕು ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಮೇಲುಕೋಟೆ ಕ್ಷೇತ್ರದ ವಿವಿಧ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳನ್ನು ಪರಿಶೀಲನೆ ನಡೆಸಿ ನಂತರ ಮಂಡ್ಯ ತಾಲೂಕಿನ ವಿ.ಸಿ.ಫಾರಂನ ಅತಿಥಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮತನಾಡಿದ ಅವರು, ಹಿಂದೆ ಎರಡೆರಡು ಖಾತೆಗಳಿದ್ದವು. ಅದನ್ನು ವಾಪಸ್ ಪಡೆದು ಸಣ್ಣ ನೀರಾವರಿ ಇಲಾಖೆಯ ಖಾತೆ ವಹಿಸಿದ್ದಾರೆ. ಇದರಲ್ಲಿ ನನಗೆ ಯಾವುದೇ ಬೇಸರವಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಕಾನೂನು, ಸಂಸದೀಯ ವ್ಯವಹಾರಗಳ ಸಚಿವರು ಸದನದಲ್ಲಿ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳಬೇಕು. ಇದೀಗ ನನಗೆ ಆ ಖಾತೆ ಇಲ್ಲದ್ದರಿಂದ ಹಿಂದಿನ ಸಾಲಿನಲ್ಲೇ ಕೂರಬೇಕು. ಇದು ನನಗೆ ಡಿ ಪ್ರಮೋಟ್ ಅಲ್ಲ. ಮಂತ್ರಿಗಳ ಸಂಖ್ಯೆ ಹೆಚ್ಚಾದಾಗ ಅನಿವಾರ್ಯವಾಗಿ ಖಾತೆಗಳನ್ನ ಬಿಟ್ಟುಕೊಡಲೇಬೇಕು ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ:ಕಂಗನಾ ರಾಣಾವತ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು: ಪಾಟೀಲ್
ಕುರುಬರ ಸಮಾವೇಶ ವಿವಾದವಿಲ್ಲ:
ಕುರುಬರ ಸಮಾವೇಶದ ಬಗ್ಗೆ ನನಗೆ ಗೊತ್ತಿಲ್ಲ. ಸರ್ಕಾರದ ಐವರು ಸಚಿವರು ಭಾಗಿಯಾಗಿರುವ ಬಗ್ಗೆ ಯಾವುದೇ ವಿವಾದವಿಲ್ಲ. ಅವರ ಅಭಿಪ್ರಾಯಗಳನ್ನು ವಿವಾದ ಎಂದು ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದರು.
ನೀರಾವರಿ ಸಮಸ್ಯೆ ಬಗೆಹರಿಸಲಾಗುವುದು:
ಮೈತ್ರಿ ಸರ್ಕಾರದಲ್ಲಿ ಸಣ್ಣ ನೀರಾವರಿ ಸಚಿವರಾಗಿದ್ದ ಸಿ.ಎಸ್.ಪುಟ್ಟರಾಜು ಅವರು ಮೇಲುಕೋಟೆ ವಿಧಾನಸಭಾ ಕ್ಷೇತ್ರ ಸೇರಿದಂತೆ ಮಂಡ್ಯ ಜಿಲ್ಲೆಗೆ ಇಲಾಖೆಗೆ ಸಂಬಂಧಿಸಿದಂತೆ ಅನೇಕ ಯೋಜನೆಗಳನ್ನು ರೂಪಿಸಿದ್ದರು. ಆ ಯಾವ ಕೆಲಸಗಳನ್ನು ಬಿಜೆಪಿ ಸರ್ಕಾರ ನಿಲ್ಲಿಸುವುದಿಲ್ಲ. ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಲು ನಾನು ಬದ್ಧ ಎಂದು ಭರವಸೆ ನೀಡಿದರು.
ಪುಟ್ಟರಾಜು ಅವರು ಸಚಿವರಾಗಿದ್ದ ಕಾಲದಲ್ಲಿ ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಳಘಟ್ಟ ವ್ಯಾಪ್ತಿಯ 56 ಕೆರೆ, ದುದ್ದ ಹೋಬಳಿಯ 58 ಕೆರೆ ಹಾಗೂ ನಾಮನಹಳ್ಳಿ ಭಾಗದ ಅನೇಕ ಕೆರೆಗಳ ಪುನರುಜ್ಜೀವನ ಕೆಲಸಕ್ಕೆ ಚಾಲನೆ ನೀಡಿದ್ದರು. ಇದೀಗ ಆ ಎಲ್ಲ ಕೆರೆಗಳನ್ನು ಅಭಿವೃದ್ಧಿಗೊಳಿಸಿ ಕೊಡುವ ನಿಟ್ಟಿನಲ್ಲಿ ಇಂದು ಸ್ಥಳ ಪರಿಶೀಲನೆ ನಡೆಸಿದ್ದು, ಶೀಘ್ರವೇ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದರು.