ಎಚ್ಚರ, ಕರಗುತಿಹುದು ಹಿಮದ ಜೋಳಿಗೆ…!


Team Udayavani, Feb 11, 2021, 7:20 AM IST

ಎಚ್ಚರ, ಕರಗುತಿಹುದು ಹಿಮದ ಜೋಳಿಗೆ…!

ಕೆಲವು ದಿನಗಳ ಹಿಂದೆ ಉತ್ತರಾಖಂಡದ ಚಮೋಲಿಯಲ್ಲಿ ಸಂಭವಿಸಿದ ನೀರ್ಗಲ್ಲು ಸ್ಫೋಟ ಪ್ರಕರಣ ಇಡೀ ದೇಶವನ್ನೇ ದಿಗ್ಭ್ರಾಂತವನ್ನಾಗಿಸಿದೆ. ಪ್ರಕೃತಿ ಮೈ ಕೊಡವಿ ನಿಂತರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವುದನ್ನು ಈ ಅನಿರೀಕ್ಷಿತ ಘಟನೆ ಮತ್ತೆ ಸಾಬೀತು ಪಡಿಸಿದೆ. ಈ ಘಟನೆಯ ಕಾರಣಗಳ ಬಗ್ಗೆ ಇನ್ನೂ ವಿಸ್ತೃತ ಸಂಶೋಧನೆಗಳಾಗಬೇಕಿದ್ದರೂ ಮೇಲ್ನೋಟಕ್ಕೆ ಇದು ಜಾಗತಿಕ ತಾಪಮಾನದ ಏರಿಕೆಯ ಪರಿಣಾಮ ಎಂದು ಬಹುತೇಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವರ್ಷದ ಹಿಂದೆ ಪತ್ರಿಕೆಗಳಲ್ಲಿ ಆಸಕ್ತಿದಾಯಕ ಸುದ್ದಿಯೊಂದು ಪ್ರಕಟವಾಗಿತ್ತು. ಇಟಲಿಯ ಪ್ರಸೆನಾ ಗ್ಲೆಸಿಯರ್‌ ಎಂಬ ಹಿಮಚ್ಛಾದಿತ ಪರ್ವತ ಶ್ರೇಣಿಯ ಮೇಲಿರುವ ಹಿಮ ಅತ್ಯಂತ ವೇಗವಾಗಿ ಕರಗುತ್ತಿದ್ದು, ಅದನ್ನು ತಡೆಗಟ್ಟಲು ಅಲ್ಲಿನ ಸರಕಾರ ಪ್ರತೀ ಬೇಸಗೆಯಲ್ಲಿಯೂ ಪರ್ವತವನ್ನು ಟರ್ಪಾಲಿನ್‌ನಿಂದ ಮುಚ್ಚುವ ಕೆಲಸ ಮಾಡುತ್ತಿದೆ ಎನ್ನುವುದು ಸುದ್ದಿಯ ಸಾರಾಂಶ.

1993ಕ್ಕೆ ಹೋಲಿಸಿದರೆ ಕಳೆದ ಇಪ್ಪತ್ತಾರು ವರ್ಷಗಳಲ್ಲಿ ಈ ಪರ್ವತದ ಮೇಲಿದ್ದ ಮೂರನೆಯ ಒಂದು ಭಾಗದಷ್ಟು ಹಿಮ ಕರಗಿ ಹೋಗಿದೆಯಂತೆ! ಈ ಹಿಮ ಕರಗುವಿಕೆಯನ್ನು ತಡೆಯುವ ನಿಟ್ಟಿನಲ್ಲಿ 2008 ರಲ್ಲಿ ಅಲ್ಲಿನ ಸರಕಾರ ಪ್ರತೀ ಬೇಸಗೆಯಲ್ಲೂ ಪರ್ವತದ ಮೇಲೆ ಟರ್ಪಾಲಿನ್‌ ಮುಚ್ಚುವ ಯೋಜನೆಯನ್ನು ಆರಂಭಿಸಿತು. 30,000 ಚದರ ಕಿ. ಮೀ. ವಿಸ್ತೀರ್ಣದಷ್ಟು ಜಾಗಕ್ಕೆ ಸೀಮಿತವಾಗಿದ್ದ ಈ ಯೋಜನೆ, ಪ್ರಸ್ತುತ ಒಂದು ಲಕ್ಷ ಚದರ ಕಿ. ಮೀ. ವ್ಯಾಪ್ತಿಗೆ ವಿಸ್ತರಿಸಲ್ಪಟ್ಟಿದೆ.

ಈ ಸಮಸ್ಯೆ ಕೇವಲ ಉತ್ತರಾಖಂಡ ಅಥವಾ ಇಟಲಿಯದ್ದಲ್ಲ. ಜಗತ್ತಿನ ಬಹುತೇಕ ಹಿಮ ಪರ್ವತಗಳ ಕಥೆ ಇದೇ ಆಗಿದೆ. ಅಂಟಾರ್ಟಿಕಾ ಖಂಡ ದಿನೇ ದಿನೆ ಕರಗುತ್ತಿದೆ. ಹಾಗಾದರೆ ಪರ್ವತಗಳ ಮೇಲಿನ ಹಿಮ ಕರಗಲೇಬಾರದೇ? ಖಂಡಿತಾ ಕರಗಬೇಕು. ಜಗತ್ತಿನಲ್ಲಿ ಅನೇಕ ನದಿಗಳ ಉಗಮದ ಕಾರಣವೇ ಈ ಹಿಮ ಕರಗುವಿಕೆ. ಆದರೆ ಈ ಕರಗುವಿಕೆ ಸಹಜವಾಗಿ ಆಗಬೇಕಾದದ್ದಕ್ಕಿಂತ ಹೆಚ್ಚಾದರೆ ಅನೇಕ ಸಮಸ್ಯೆಗಳು ತಲೆದೋರುತ್ತವೆ. ಈ ಅಸ್ವಾಭಾವಿಕ ಹಿಮಕರಗುವಿಕೆಗೆ ಪ್ರಮುಖ ಕಾರಣ ಭೂ ತಾಪ ಏರಿಕೆಯೇ ಎಂಬುದು ತಜ್ಞರ ಅಭಿಪ್ರಾಯ.

ಸೂರ್ಯನಿಂದ ಭೂಮಿಗೆ ಬರುವ ಬೆಳಕು ಭೂಮಿಯ ಮೇಲ್ಮೆ„ಗೆ ಬಿದ್ದಾಗ ಸ್ವಲ್ಪ ಪ್ರಮಾಣದ ಉಷ್ಣವನ್ನು ನೆಲ ಹೀರಿಕೊಂಡು, ಉಳಿದ ವಿಕಿರಣಗಳನ್ನು ಪ್ರತಿಫ‌ಲಿಸುತ್ತದೆ. ಹೀಗೆ ಪ್ರತಿಫ‌ಲಿಸಲ್ಪಟ್ಟ ವಿಕಿರಣಗಳ ತರಂಗದೂರ (wavelength) ಸೂರ್ಯನಿಂದ ನಮಗೆ ಬರುವ ಬೆಳಕಿನ ತರಂಗದೂರಕ್ಕಿಂತ ಭಿನ್ನವಾಗಿರುತ್ತದೆ. ಈ ತರಂಗದೂರದ ಬೆಳಕು ಕಾರ್ಬನ್‌ (ಇಂಗಾಲ) ಡೈ ಆಕ್ಸೆçಡ್‌ ಹಾಗೂ ಬೇರೆ ಕೆಲವು ಅನಿಲಗಳ ಮೂಲಕ ಹಾದು ಹೋಗಲಾರದು. ಭೂಮಿಯ ವಾತಾವರಣದಲ್ಲಿ ಕಾರ್ಬನ್‌ ಡೈ ಆಕ್ಸೆ„ಡ್‌ ಇರುವ ಕಾರಣ, ಭೂಮಿಯಿಂದ ಪ್ರತಿ ಫ‌ಲಿಸಲ್ಪಟ್ಟ ಈ ವಿಕಿರಣಗಳು ಸಂಪೂರ್ಣವಾಗಿ ವಾತಾವರಣ ದಿಂದ ಹೊರಹೋಗಲು ಸಾಧ್ಯವಾಗದೇ ವಾತಾವರಣದಲ್ಲೇ ಉಳಿದುಕೊಂಡು ವಾತಾವರಣವನ್ನು ಬಿಸಿಯಾಗಿಸುತ್ತವೆ. ಇದನ್ನು “ಹಸುರು ಮನೆ ಪರಿಣಾಮ’ (Green House Effect) ಎನ್ನುತ್ತಾರೆ. ಇದರ ಪರಿಣಾಮವಾಗಿಯೇ ಭೂಮಿಯ ಮೇಲಿನ ಉಷ್ಣಾಂಶ ಸಮತೋಲನದಲ್ಲಿದ್ದು, ಮನುಷ್ಯನೂ ಸೇರಿ ಹಲವು ಜೀವಿಗಳಿಗೆ ವಾಸಯೋಗ್ಯವಾಗಿದೆ.

ಒಂದು ವೇಳೆ ವಾತಾವರಣದಲ್ಲಿನ ಕಾರ್ಬನ್‌ ಡೈ ಆಕ್ಸೆ„ಡ್‌ ಮುಂತಾದ ಹಸುರು ಮನೆ ಅನಿಲಗಳು ಮಿತಿಗಿಂತಲೂ ಹೆಚ್ಚಾದರೆ? ಆಗ ಹೆಚ್ಚು ಹೆಚ್ಚು ವಿಕಿರಣಗಳು ನಮ್ಮ ವಾತಾವರಣದಿಂದ ಹೊರಹೋಗಲು ಸಾಧ್ಯವಾಗುವುದಿಲ್ಲ, ಪರಿಣಾಮ ಭೂಮಿಯ ಉಷ್ಣಾಂಶ ಹೆಚ್ಚುತ್ತಾ ಸಾಗುತ್ತದೆ. ಇದನ್ನೇ “ಗ್ಲೋಬಲ್‌ ವಾರ್ಮಿಂಗ್‌’ ಅಥವಾ “ಭೂತಾಪ ಏರಿಕೆ’ ಎನ್ನುತ್ತಾರೆ.

ನಮಗೆಲ್ಲ ತಿಳಿದಿರುವಂತೆ ಹತ್ತೂಂಬತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಯೂರೋಪಿನಲ್ಲಿ ಪ್ರಾರಂಭವಾದ ಕೈಗಾರಿಕಾ ಕ್ರಾಂತಿ ಕಾಲಕ್ರಮೇಣ ಇಡೀ ಜಗತ್ತನ್ನೇ ವ್ಯಾಪಿಸಿತು. ಇದು ಮಾನವಸ್ನೇಹಿಯಾಗಿ, ಮನುಷ್ಯನ ಕೆಲಸದ ಶ್ರಮವನ್ನು ಕಡಿಮೆ ಮಾಡಿ, ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿದ್ದರ ಜತೆಗೆ ಪರಿಸರಕ್ಕೆ ಮಾರಕವಾಗಿ ಪರಿಣಮಿಸಿತು. ಅತಿಯಾದ ಕಲ್ಲಿದ್ದಲು ಸುಡುವಿಕೆಯಿಂದ ಕೈಗಾರಿಕಾ ಘಟಕಗಳು ಅಪಾರ ಪ್ರಮಾಣದ ಕಾರ್ಬನ್‌ ಡೈ ಆಕ್ಸೆ„ಡ್‌ ಅನ್ನು ವಾತಾವರಣಕ್ಕೆ ಬಿಡಲಾರಂಭಿಸಿದವು. ಅನಂತರ ಬಂದ ವಾಹನಗಳಂತೂ ಇದರ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಿದವು.

ಸಂಶೋಧನೆಯೊಂದರ ಪ್ರಕಾರ ಕೈಗಾರಿಕಾ ಕ್ರಾಂತಿಯ ದಿನಗಳಿಂದ ಇಂದಿನವರೆಗೆ ಭೂಮಿಯ ತಾಪಮಾನ ಸರಾಸರಿ 1 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಿದೆ ಹಾಗೂ 2050ರ ವೇಳೆಗೆ ಅದು 2 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚುವುದೆಂದು ಅಂದಾಜಿಸಲಾಗಿದೆ.
ಇದರ ಪರಿಣಾಮವಾಗಿ ಅಂಟಾರ್ಟಿಕಾ ಮೊದಲಾದ ಪ್ರದೇಶದಲ್ಲಿರುವ ಹಿಮ ವೇಗವಾಗಿ ಕರಗಲಾರಂಭಿಸಿದೆ. ಹಿಮ ಕರಗಿದ ನೀರು ಸಮುದ್ರವನ್ನು ಸೇರಿ, ಸಮುದ್ರ ಮಟ್ಟ ಹೆಚ್ಚಿ, ಸಮುದ್ರ ರಾಜನಿಗೆ ತನ್ನ ವ್ಯಾಪ್ತಿ ಸಾಲದೇ ಭೂ ಭಾಗವನ್ನು ಆಕ್ರಮಿಸಲು ಪ್ರಾರಂಭಿಸಿದ್ದಾನೆ. ಕಡಲ್ಕೊರೆತ ನಿತ್ಯದ ಸುದ್ದಿಯಾಗಿದೆ. ತಾಪಮಾನ ಹೀಗೆಯೇ ಏರುತ್ತಲೇ ಸಾಗಿದರೆ 2050 ರ ವೇಳೆಗೆ ಜಗತ್ತಿನ ಹಲವು ಸಮುದ್ರ ತೀರದ ಮಹಾನಗರಗಳು ಮುಳುಗುವ ಪರಿಸ್ಥಿತಿ ಇಲ್ಲದಿಲ್ಲ. ಭಾರತದಲ್ಲೂ ಬಹುತೇಕ ಕರಾವಳಿ ಭಾಗ ಮುಳುಗಡೆಯಾಗಿ, ಮುಂಬಯಿ, ಚೆನ್ನೈಯಂತಹ ಮಹಾನಗರಗಳನ್ನು ಸೇರಿಸಿ ಅಂದಾಜು 5 ಕೋಟಿಗೂ ಅಧಿಕ ಜನರು ವಲಸೆ ಹೋಗಬೇಕಾಗಿ ಬರಬಹುದೆಂದು ಊಹಿಸಲಾಗಿದೆ.

ಜಾಗತಿಕ ತಾಪಮಾನ ಏರಿಕೆಯ ನೇರ ಪರಿಣಾಮ ಆಹಾರ ಬೆಳೆಗಳ ಮೇಲೂ ಆಗಲಿದೆ. ಹೆಚ್ಚಿದ ತಾಪಮಾನದಲ್ಲಿ ಹಲವು ಆಹಾರ ಬೆಳೆಗಳ ಇಳುವರಿ ಕುಂಠಿತಗೊಂಡು ಅಥವಾ ಗಿಡಗಳು ಬದುಕುವುದೇ ಕಷ್ಟವಾಗಿ ಆಹಾರ ಕ್ಷೋಭೆ ಉಂಟಾಗಬಹುದಾದ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹಲವು ಜೀವಿಗಳ ಬದುಕೂ ದುಸ್ತರವಾಗಿ ಜೀವ ಸರಪಳಿಯಲ್ಲಿ ಅಲ್ಲೋಲಕಲ್ಲೋಲವಾಗಲೂಬಹುದು. ತಣ್ಣಗಿನ ಹಿಮದಲ್ಲಿ ನಿಶ್ಚಿಂತೆಯಿಂದ ಜೀವಿಸುತ್ತಿದ್ದ ಹಿಮಕರಡಿಗಳ ಸಂತತಿ ಕ್ಷೀಣಿಸುತ್ತಿರುವುದು ಇದಕ್ಕೊಂದು ಉದಾಹರಣೆ. ಸಂಶೋಧನೆಗಳ ಪ್ರಕಾರ ವರ್ಷ ವರ್ಷ ಹೆಚ್ಚುತ್ತಿರುವ ಚಂಡಮಾರುತಗಳಿಗೆ ತಾಪಮಾನ ಏರಿಕೆಯೂ ಒಂದು ಕಾರಣ. ಉಷ್ಣಾಂಶ ಹೆಚ್ಚಾದಾಗ ಭೂಮಿಯ ಮೇಲ್ಮೆ„ಯಲ್ಲಿ ಗಾಳಿಯ ಒತ್ತಡದಲ್ಲಿ ವ್ಯತ್ಯಯ ಉಂಟಾಗಿ ಚಂಡಮಾರುತ ಹುಟ್ಟಿಕೊಳ್ಳುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ತಾಪಮಾನದ ಏರಿಕೆಯ ವಿರುದ್ಧದ ಕೂಗು ಬಲವಾಗಿ ಕೇಳಲಾರಂಭಿಸಿದೆ. 2015 ರಲ್ಲಿ ನಡೆದ ಪ್ಯಾರಿಸ್‌ ಒಪ್ಪಂದದ ಪ್ರಕಾರ ಭಾರತವೂ ಸೇರಿ ಸುಮಾರು ಇನ್ನೂರು ರಾಷ್ಟ್ರಗಳು ವಾತಾವರಣಕ್ಕೆ ಬಿಡುವ ಹಸುರು ಮನೆ ಅನಿಲಗಳ ಪ್ರಮಾಣವನ್ನು ತಗ್ಗಿಸುವ ಸಂಕಲ್ಪ ಮಾಡಿವೆ. ಇದರ ಪರಿಣಾಮ ಏನಾಗಲಿದೆ ಎಂದು ಕಾದು ನೋಡಬೇಕಿದೆ. ಪರಿಸರದ ಮೇಲಿನ ಬದ್ಧತೆ, ಕಾಳಜಿಗಳು ಕಾಗದದ ಮೇಲಿನ ಒಪ್ಪಂದಗಳಿಗೆ ಸೀಮಿತವಾಗದಿರಲಿ ಎಂದು ಹಾರೈಸೋಣ.

ನಮ್ಮ ಪರಿಸರವನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವೂ ಕೂಡ. ನಾವು ನಿತ್ಯ ಪ್ರಯಾಣಕ್ಕೆಂದು ಬಳಸುವ ಕ್ಯಾಬ್‌ ವಾರ್ಷಿಕ ಸರಾಸರಿ 4.6 ಮೆಟ್ರಿಕ್‌ ಟನ್‌ ಕಾರ್ಬನ್‌ ಡೈ ಆಕ್ಸೆ„ಡ್‌ ಅನ್ನು ವಾತಾವರಣಕ್ಕೆ ಬಿಡುತ್ತದಂತೆ. ಅದೇ ಒಂದು ಮರ ವಾರ್ಷಿಕ 48 ಪೌಂಡ್‌ಗಳಷ್ಟು ಕಾರ್ಬನ್‌ ಡೈ ಆಕ್ಸೆ„ಡ್‌ ಅನ್ನು ಹೀರಿಕೊಳ್ಳಲು ಮಾತ್ರ ಸಾಧ್ಯ. ನಮ್ಮ ಪರಿಸರದ ರಕ್ಷಣೆ ನಮ್ಮೆಲ್ಲರ ಹೊಣೆ. ತೇಜಸ್ವಿಯವರು ಹೇಳಿದಂತೆ, ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ, ನಾವು ಪ್ರಕೃತಿಯ ಭಾಗ, ಅಲ್ಲವೇ?

– ವೀರೇಂದ್ರ ನಾಯಕ್‌, ಚಿತ್ರಬೈಲು

ಟಾಪ್ ನ್ಯೂಸ್

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.