ಅಮಿತ್ ಶಾ ಭೇಟಿಗೆ ಸಮಯ ಕೇಳಿದ 15ಕ್ಕೂ ಹೆಚ್ಚು ಅತೃಪ್ತ ಶಾಸಕರು
Team Udayavani, Jan 16, 2021, 8:45 PM IST
ಬೆಳಗಾವಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿ ಜನಸೇವಕ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಜ.17ರಂದು ನಗರಕ್ಕೆ ಆಗಮಿಸುತ್ತಿರುವ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರನ್ನು ಭೇಟಿ ಮಾಡಲು ಅತೃಪ್ತ ಶಾಸಕರು ಉದ್ದೇಶಿಸಿದ್ದು, ಈ ಭೇಟಿಯತ್ತ ಎಲ್ಲರ ದೃಷ್ಟಿ ನೆಟ್ಟಿದೆ.
ಸಂಪುಟ ವಿಸ್ತರಣೆ ವೇಳೆ ಪಕ್ಷದ ನಿಷ್ಠರನ್ನು ಕಡೆಗಣಿಸಿ ಪ್ರಭಾವಿಗಳಿಗೆ ಮಣೆ ಹಾಕಲಾಗಿದೆ ಎಂಬ ಅಸಮಾಧಾನದ ಮಧ್ಯೆ ಅಮಿತ್ ಶಾ ಅವರ ಬೆಳಗಾವಿ ಭೇಟಿ ಮಹತ್ವ ಪಡೆದುಕೊಂಡಿದೆ. ಶಾ ಅವರ ಭೇಟಿಗೆ 15ಕ್ಕೂ ಹೆಚ್ಚು ಅಸಮಾಧಾನಿತ ಶಾಸಕರು ಸಮಯ ಕೇಳಿರುವುದು ಕುತೂಹಲ ಮೂಡಿಸಿದೆ. ಮೂಲಗಳ ಪ್ರಕಾರ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ, ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ, ಚಿತ್ರದುರ್ಗ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ, ಧಾರವಾಡ ಶಾಸಕ ಅರವಿಂದ ಬೆಲ್ಲದ ಹಾಗೂ ಪರಿಷತ್ ಸದಸ್ಯ ಎಚ್. ವಿಶ್ವನಾಥ ಸೇರಿ ಹಲವರು ಅಮಿತ್ ಶಾ ಅವರನ್ನು ಭೇಟಿ ಮಾಡಲು ಉದ್ದೇಶಿಸಿದ್ದಾರೆ.
ಇದನ್ನೂ ಓದಿ:ಗೋವಾ ಚಿತ್ರೋತ್ಸವಕ್ಕೆ ಸುದೀಪ್ ಚಾಲನೆ : ಕನ್ನಡದಲ್ಲೇ ಮಾತು ಆರಂಭಿಸಿದ ಕಿಚ್ಚ
ರವಿವಾರ ಮಧ್ಯಾಹ್ನ ಬೆಳಗಾವಿಗೆ ಆಗಮಿಸಿ ಜನಸೇವಕ ಸಮಾವೇಶದಲ್ಲಿ ಭಾಗವಹಿಸಲಿರುವ ಅಮಿತ್ ಶಾ, ಸಂಜೆ 7 ಗಂಟೆವರೆಗೆ ಇಲ್ಲಿಯೇ ಇರಲಿದ್ದಾರೆ. ಈ ಮಧ್ಯೆ ಅವರು ಪಕ್ಷದ ಪ್ರಮುಖ ಮುಖಂಡರ ಹಾಗೂ ಪದಾಧಿಕಾರಿಗಳ ಸಭೆ ನಡೆಸಲಿದ್ದು, ಇದೇ ಸಮಯದಲ್ಲಿ ಅತೃಪ್ತ ಶಾಸಕರು ಶಾ ಅವರನ್ನು ಕಾಣಲು ಬಯಸಿದ್ದಾರೆ. ಅತೃಪ್ತರ ಭೇಟಿಗೆ ಸಮ್ಮತಿಸಿ ಅಸಮಾಧಾನಕ್ಕೆ ಪರಿಹಾರ ನೀಡುವರೆ ಎಂಬ ಕಾತರ ಪಕ್ಷದಲ್ಲಿ ಮೂಡಿದೆ.