ಈ ಬಾರಿ ದಸರಾ ಜಂಬೂಸವಾರಿಯಲ್ಲಿ 5 ಆನೆಗಳಿಗೆ ಮಾತ್ರ ಅವಕಾಶ
ವಿಶ್ವ ವಿಖ್ಯಾತ ದಸರಾ ಜಂಬೂಸವಾರಿಗೆ ಕ್ಷಣಗಣನೆ
Team Udayavani, Oct 14, 2021, 8:49 AM IST
ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಉತ್ಸವದ ಪ್ರಮುಖ ಘಟ್ಟವಾದ ಜಂಬೂ ಸವಾರಿ ಅ.15ರಂದು ಸಾಯಂಕಾಲ ಅರಮನೆ ಅಂಗಳದಲ್ಲಿ ಸರಳವಾಗಿ ಜರುಗಲಿದೆ.
ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಚಾಮುಂಡೇಶ್ವರಿಯ ಅಗ್ರಪೂಜೆ ಯೊಂದಿಗೆ ಸರಳವಾಗಿ ಆರಂಭವಾಗಿದ್ದ ನಾಡಹಬ್ಬ ದಸರಾ ಮಹೋತ್ಸವ ಅಂತಿಮ ಹಂತ ತಲುಪಿದೆ. ಚಾಮುಂಡಿಬೆಟ್ಟದಲ್ಲಿ ಉದ್ಘಾಟನೆ ಹಾಗೂ ಅರಮನೆ ಅಂಗಳದಲ್ಲಿ ಜಂಬೂ ಸವಾರಿಗೆ ಸೀಮಿತವಾಗಿದ್ದ 411ನೇ ದಸರಾ ಉತ್ಸವ ಸಂಪನ್ನದೆಡೆಗೆ ಸಾಗಿದೆ.
ಕಳೆದ 7 ದಿನಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಯಾಗಿದ್ದ ಅರಮನೆ ಅಂಗಳ ಅ.15ರಂದು ಶುಕ್ರವಾರ ನಡೆಯುವ ಜಂಬೂ ಸವಾರಿಗೆ ಸಕಲ ರೀತಿಯಲ್ಲೂ ಸಜ್ಜಾಗಿದೆ.
ಉತ್ಸವಕ್ಕೆ ಸಕಲ ಸಿದ್ಧತೆ: ಈಗಾಗಲೇ ಜಂಬೂಸವಾರಿ ಮೆರವಣಿಗೆಗೆ ಅಂಬಾರಿ ಹೊರಲಿರುವ ಅಭಿಮನ್ಯು ನೇತೃತ್ವದ ಗಜಪಡೆ, ಅಶ್ವರೋಹಿಪಡೆಗಳು ತಾಲೀ ಮಿನೊಂದಿಗೆ ಸಜ್ಜಾಗಿವೆ. ಅರಮನೆ ಎದುರು ವಿಶಾಲವಾದ ಶಾಮಿಯಾನ ಹಾಕಿ, ಗಣ್ಯರು, ಅಧಿ ಕಾರಿಗಳು ಮತ್ತು ಮಾಧ್ಯಮದವರಿಗೆ ಸಾಮಾಜಿಕ ಅಂತರ ಕಾಪಾಡುವ ಉದ್ದೇಶದಿಂದ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಅರಮನೆ ಮುಂಭಾಗ ಪುಷ್ಪಾರ್ಚನೆ ವೇಳೆ ಗೌರವ ವಂದನೆ ಸಲ್ಲಿಸುವ ಅಭಿಮನ್ಯು ನೇತೃತ್ವದ ಗಜಪಡೆ ಬಲರಾಮ ದ್ವಾರದವರೆಗೆ ಮೆರವಣಿಗೆಯಲ್ಲಿ ಸಾಗಲಿದೆ. ಬಳಿಕ ವಾಪಸ್ ರಾಜಮನೆತನದವರು ಇರುವ ನಿವಾಸಕ್ಕೆ ಬಂದ ಮೇಲೆ ಅಂಬಾರಿ ಇಳಿಸಲಾಗುತ್ತದೆ.
5 ಆನೆಗಳಿಗೆ ಮಾತ್ರ ಅವಕಾಶ
ಅರಮನೆಗೆ ಸೀಮಿತವಾದಂತೆ ಸರಳವಾಗಿ ದಸರಾ ಉತ್ಸವ ನಡೆಯುತ್ತಿರುವುದರಿಂದ ಈ ಬಾರಿ 5 ಆನೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅಂಬಾರಿ ಆನೆಯಾಗಿ ಅಭಿಮನ್ಯು, ಕುಮ್ಕಿ ಆನೆಗಳಾಗಿ ಕಾವೇರಿ ಮತ್ತು ಚೈತ್ರಾ, ನಿಶಾನೆ ಆನೆಗಳಾಗಿ ಧನಂಜಯ ಮತ್ತು ಅಶ್ವತ್ಥಾಮ, ನೌಪತ್ ಆನೆಯಾಗಿ ಗೋಪಾಲಸ್ವಾಮಿ ಭಾಗವಹಿಸಲಿದ್ದಾನೆ.
ಲಕ್ಷ್ಮೀ ಆನೆ ಇದೇ ಮೊದಲ ಬಾರಿಗೆ ದಸರಾ ಉತ್ಸವಕ್ಕೆ ಆಗಮಿಸಿರುವುದರಿಂದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ವಿಕ್ರಮ ಆನೆಗೆ ಮದ ಇಳಿಯದ ಕಾರಣ ಜಂಬೂ ಸವಾರಿಯಿಂದ ದೂರ ಉಳಿಯಲಿದೆ.