ಕೋವಿಡ್ ನಿಂದ ಸಾವನ್ನಪ್ಪಿದ ಯೋಧರಿಗೆ ಗೌರವ ಸಿಗಲಿ : ಡಾ| ಮಂಜುನಾಥ್ ಆಶಯ
Team Udayavani, Oct 18, 2020, 7:05 AM IST
ಮೈಸೂರು: ಕೋವಿಡ್-19 ನಿಯಂತ್ರಣಕ್ಕಾಗಿ ಹೋರಾಡಿ ಮೃತಪಡುವ ಕೊರೊನಾ ಯೋಧರನ್ನೂ “ಹುತಾತ್ಮ’ರೆಂದು ಪರಿಗಣಿಸಬೇಕು…
ಇದು ಮೈಸೂರು ದಸರೆಯನ್ನು ಉದ್ಘಾಟಿಸಿ ಭಾಷಣ ಮಾಡಿದ ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ| ಸಿ.ಎನ್. ಮಂಜುನಾಥ್ ಅವರ ಆಶಯ.
ಕೊರೊನಾ ಗಂಭೀರತೆ, ವಹಿಸಬೇಕಾದ ಎಚ್ಚರಿಕೆಗಳ ಬಗ್ಗೆ ಮಾತನಾಡಿದ ಅವರು, ಸೋಂಕಿನ ವಿರುದ್ಧ ಹೋರಾಡುತ್ತಲೇ ದೇಶದಲ್ಲಿ 550 ಮತ್ತು ರಾಜ್ಯದಲ್ಲಿ 50ಕ್ಕೂ ಹೆಚ್ಚು ವೈದ್ಯರು ಅಸುನೀಗಿದ್ದಾರೆ. ಇವರೆಲ್ಲರಿಗೂ ಸಂತಾಪ ಸೂಚಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ದಸರೆಗೆ ವಿಧ್ಯುಕ್ತ ಚಾಲನೆ
ಶನಿವಾರ ಬೆಳಗ್ಗೆ ಚಾಮುಂಡಿ ಬೆಟ್ಟದಲ್ಲಿ ಡಾ|ಮಂಜುನಾಥ್, ಸಿಎಂ ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರ ಉಪಸ್ಥಿತಿಯಲ್ಲಿ ನಾಡದೇವತೆ ಚಾಮುಂಡಿ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರೆಗೆ ವಿಧ್ಯುಕ್ತ ಚಾಲನೆ ನೀಡಲಾಯಿತು.
ಕೊರೊನಾ ಸದ್ಯಕ್ಕೆ ಇಳಿಮುಖವಾಗುವ ಲಕ್ಷಣ ಕಾಣಿಸುತ್ತಿಲ್ಲ. ಲಸಿಕೆಯ ಹಲವಾರು ಪ್ರಯೋಗ ಗಳು ಮೂರನೇ ಹಂತ ತಲುಪಿದ್ದು, ಬಹುಶಃ ಮುಂದಿನ ವರ್ಷ ಲಸಿಕೆ ಸಿಗುವ ಸಾಧ್ಯತೆ ಇದೆ. ಅಲ್ಲಿಯ ವರೆಗೆ ಜನಸಾಮಾನ್ಯರು ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.
-ಡಾ| ಸಿ.ಎನ್. ಮಂಜುನಾಥ್, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ ನಿರ್ದೇಶಕ
ಕೊರೊನಾ ಮತ್ತು ನೆರೆಯಿಂದ ಜನರು ಸಂಕಷ್ಟದಲ್ಲಿರುವ ಈ ಹೊತ್ತಿನಲ್ಲಿ ನಾಡಹಬ್ಬದ ಐತಿಹ್ಯಕ್ಕೆ ಕುಂದು ಉಂಟಾಗದಂತೆ ಆಚರಿಸ ಲಾಗುತ್ತಿದೆ. ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ನಿಂದ ಕೊರೊನಾ ಮಾಹಾಮಾರಿ ವಿರುದ್ಧ ಸಂಘಟಿತರಾಗಿ ಹೋರಾಡೋಣ.
-ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ