ಹುಬ್ಬಳ್ಳಿ-ಧಾರವಾಡಕ್ಕೆ ಎನ್ಎಫ್ಎಸ್ ವಿವಿ ಮಂಜೂರು: ಪ್ರಹ್ಲಾದ ಜೋಷಿ
Team Udayavani, Jan 13, 2023, 11:23 PM IST
ಹುಬ್ಬಳ್ಳಿ: ಕರ್ನಾಟಕಕ್ಕೆ ಬಹು ಅತ್ಯಾವಶ್ಯಕ ಎನಿಸಿದ್ದ ರಾಷ್ಟ್ರೀಯ ವಿಧಿವಿಜ್ಞಾನ ಶಾಸ್ತ್ರದ ವಿಶ್ವವಿದ್ಯಾಲಯದ ಕ್ಯಾಂಪಸ್ (National Forensic Science University) ಅನ್ನು ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸ್ಥಾಪಿಸಲು ಕೇಂದ್ರ ಸರಕಾರ ಮಂಜೂರಾತಿ ನೀಡಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ತಿಳಿಸಿದ್ದಾರೆ.
ಕೇಂದ್ರ ಗೃಹ ಇಲಾಖೆಯಿಂದ ಮಂಜೂರಾತಿ ಪ್ರತಿ ರಾಜ್ಯ ಸರಕಾರಕ್ಕೆ ಬಂದಿದ್ದು, ಒಂದು ಪ್ರತಿ ನನಗೂ ತಲುಪಿದೆ. ಕಳೆದ 2-3 ತಿಂಗಳ ಹಿಂದೆ ಕೇಂದ್ರ ಗೃಹ ಸಚಿವರಿಗೆ ಈ ಭಾಗದಲ್ಲಿ ಎನ್ಎಫ್ಎಸ್ ವಿವಿ ಕ್ಯಾಂಪಸ್ ಸ್ಥಾಪನೆಯ ಅಗತ್ಯದ ಕುರಿತು ಪತ್ರ ಬರೆದು ಮನವರಿಕೆ ಮಾಡಲಾಗಿತ್ತು. ಅನಂತರ ನಿರಂತರವಾಗಿ ಅವರೊಂದಿಗೆ ಸಂಪರ್ಕದಲ್ಲಿದ್ದ ಪರಿಣಾಮ ಅವಳಿ ನಗರಕ್ಕೆ ಇಂತಹ ಉನ್ನತ ಶೈಕ್ಷಣಿಕ ಸಂಸ್ಥೆ ದೊರೆಯುತ್ತಿರುವುದು ಹೆಮ್ಮೆಯ ವಿಷಯ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇಡೀ ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಕರ್ನಾಟಕದಲ್ಲಿ, ಅದರಲ್ಲೂ ಹುಬ್ಬಳ್ಳಿ-ಧಾರವಾಡ ನಗರಕ್ಕೆ ವಿಧಿವಿಜ್ಞಾನ ಶಾಸ್ತ್ರ ವಿಶ್ವವಿದ್ಯಾಲಯ ಸ್ಥಾಪಿಸಲು ಕೇಂದ್ರದ ಒಪ್ಪಿಗೆ ಸಿಕ್ಕಿರುವುದು ಸಂತಸದ ಸಂಗತಿ ಎಂದರು.