ತಳವಿಲ್ಲದ ಪಾತ್ರೆಗೆ ಎಷ್ಟು ತುಂಬಿದರೂ ಸಾಲದು
Team Udayavani, Apr 7, 2021, 2:30 AM IST
ಸಂಸಾರ ಅಂದರೆ ಈ ಜಗತ್ತು ಮನುಷ್ಯನ ಒಳಗೆ ಇರುವ ನಿರ್ವಾತ ವನ್ನು ತುಂಬಿ ಕೊಳ್ಳುವ ಪ್ರಯತ್ನ. ಈ ಶೂನ್ಯವನ್ನು ಹಣ, ಅಧಿಕಾರ, ಸ್ತ್ರೀಯರು, ಪುರುಷರು, ಬೆಲೆಬಾಳುವ ವಸ್ತುಗಳು, ಬಂಗಲೆ, ಕೀರ್ತಿ… ಹೀಗೆ ಯಾವುದರಿಂದಲಾದರೂ ತುಂಬಿ.
ಈ ನಿರ್ವಾತದೊಳಕ್ಕೆ ಎಲ್ಲವನ್ನೂ ಎಸೆಯುತ್ತ ಹೋಗಿ – ಅಂತಿಮವಾಗಿ ಒಂದು ದಿನ ನಾವು ಏನೂ ಅಲ್ಲ, ನಾವು ಯಕಶ್ಚಿತ್, ಪರಮ ಕ್ಷುಲ್ಲಕ ಎಂಬ ಪರಮ ಸತ್ಯ ಅನುಭವ ಬರಬಹುದು. ಆದರೆ ಅದು ಎಂದೂ ಸಂಭವಿಸುವುದಿಲ್ಲ, ಸಂಭವಿಸುವುದು ಸಾಧ್ಯವೂ ಇಲ್ಲ. ಏಕೆಂದರೆ, ಆ ಶೂನ್ಯ ತಳರಹಿತವಾದದ್ದು. ನಾವು ಅದರೊಳಕ್ಕೆ ಎಷ್ಟೇ ತುಂಬಿಸಿದರೂ ಅದು ಮಾಯವಾಗು ತ್ತದೆ. ಅದು ತುಂಬುವುದೇ ಇಲ್ಲ.
ಒಂದು ಸುಂದರ ಕಥೆಯಿದೆ.
ಒಂದು ದಿನ ರಾಜ ಬೆಳಗಿನ ವಾಯುವಿಹಾರ ಮುಗಿಸಿ ಅರಮನೆ ಯನ್ನು ಪ್ರವೇಶಿಸುವ ಹೊತ್ತಿಗೆ ಅಲ್ಲೊಬ್ಬ ಭಿಕ್ಷುಕ ನಿಂತಿದ್ದ. ರಾಜ ಸಹಜವಾಗಿ “ನಿನಗೇನು ಬೇಕು’ ಎಂದು ಕೇಳಿದ.
ಭಿಕ್ಷುಕ ಗಹಗಹಿಸಿ ನಕ್ಕು, “ನಾನು ಕೇಳಿದ್ದನ್ನು ಕೊಡುವವನಂತೆ ಮಾತ ನಾಡುತ್ತಿರುವೆಯಲ್ಲ’ ಎಂದ.
ಸಹಜವಾಗಿ ರಾಜನ ಪ್ರತಿಷ್ಠೆಗೆ ಏಟು ಬಿತ್ತು. “ಭಿಕ್ಷುಕನೊಬ್ಬನ ಆಸೆಯನ್ನು ಅರಸನಿಂದ ಈಡೇರಿಸಲು ಸಾಧ್ಯ ವಾಗದೆ! ಕೇಳು, ಏನು ನಿನ್ನ ಬೇಡಿಕೆ’ ಎಂದ.
“ಇನ್ನೊಂದು ಬಾರಿ ಯೋಚಿಸು’ ಎಂದು ಎಚ್ಚರಿಸಿದ ಭಿಕ್ಷುಕ.
ನಿಜವಾಗಿ ಅವನು ಸಾಮಾನ್ಯ ಭಿಕ್ಷುಕನಾಗಿರಲಿಲ್ಲ. ಪೂರ್ವಜನ್ಮದಲ್ಲಿ ಇದೇ ಅರಸನಿಗೆ ಗುರುವಾಗಿದ್ದ. ಮುಂದಿನ ಜನ್ಮದಲ್ಲಿ ಬಂದು ನಿನ್ನನ್ನು ಎಚ್ಚರಿಸುತ್ತೇನೆ ಎಂದು ಹೇಳಿದ್ದ. ಅದರಂತೆ ಬಂದಿದ್ದ. ಆದರೆ ರಾಜನಿಗೆ ಪೂರ್ವಜನ್ಮದ ಸ್ಮರಣೆ ಇರಲಿಲ್ಲ.
“ನನ್ನದೇನೂ ದೊಡ್ಡ ಬೇಡಿಕೆ ಅಲ್ಲ. ಈ ಭಿಕ್ಷಾಪಾತ್ರೆಯನ್ನು ನೋಡು. ಇದನ್ನು ತುಂಬಿಸಬಹುದೇ? ನಾನು ಅದೇ ಬೇಕು, ಇದೇ ಬೇಕು ಎಂದು ಆಗ್ರಹಿಸುವುದಿಲ್ಲ. ಏನೂ ಆಗಬಹುದು’ ಎಂದು ಕೇಳಿದ ಭಿಕ್ಷುಕ.
ಅರಸನಿಗೆ ಇವನೊಬ್ಬ ಮರುಳ ಅನ್ನಿಸಿತು. ಭಿಕ್ಷಾಪಾತ್ರೆಯನ್ನು ತುಂಬಿ ಸುವುದು ಕ್ಷಣಾರ್ಧದ ಕೆಲಸವಲ್ಲವೆ! ಅದರಲ್ಲಿ ಎಷ್ಟು ನಾಣ್ಯಗಳು ಹಿಡಿದಾವು ಎಂದು ಕೊಂಡ. ತನ್ನ ಕೋಶಾಧಿ ಕಾರಿಯನ್ನು ಕರೆದು ಒಂದು ಹಿಡಿ ನಾಣ್ಯ ಗಳನ್ನು ತರಲು ಹೇಳಿದ.
ಸುರಿದ ನಾಣ್ಯಗಳು ಮಾಯವಾದವು. . ಇನ್ನಷ್ಟು ನಾಣ್ಯಗಳನ್ನು ತಂದು ತುಂಬಿಸಲಾಯಿತು. ಅವೂ ಅದೃಶ್ಯ
ವಾದವು. ಮತ್ತಷ್ಟು, ಮಗ ದೊಂದಷ್ಟು, ಇನ್ನಷ್ಟು ನಾಣ್ಯಗಳು ಕೂಡ ಭಿಕ್ಷಾ ಪಾತ್ರೆಯೊಳಗೆ ಹೇಳಹೆಸರಿಲ್ಲದಂತೆ ಮಾಯವಾದವು.
ಈಗ ರಾಜನಿಗೆ ಅಂಜಿಕೆ ಆರಂಭ ವಾಯಿತು. ಅರಮನೆಯ ಪ್ರವೇಶ ದ್ವಾರದಲ್ಲಿ ನಡೆಯುತ್ತಿರುವ ವಿಸ್ಮಯದ ಸುದ್ದಿ ತಿಳಿದು ಊರಿಗೇ ಊರೇ ಅಲ್ಲಿ ನೆರೆಯಿತು. ಅರಮನೆಯ ಭಂಡಾರ ದಿಂದ ನಗನಾಣ್ಯಗಳು, ಬಂಗಾರ, ವಜ್ರವೈಢೂರ್ಯ, ಮುತ್ತುರತ್ನಗಳು – ಎಲ್ಲವನ್ನೂ ತಂದು ಸುರಿದರು. ಬೊಕ್ಕಸ ಬರಿದಾಯಿತೇ ವಿನಾ ಭಿಕ್ಷಾಪಾತ್ರೆ ತುಂಬಲಿಲ್ಲ.
ಸಂಜೆಯಾಯಿತು. ಕೊನೆಗೆ ರಾಜ ಶರಣಾಗತನಾಗಿ ಭಿಕ್ಷುಕನ ಕಾಲಿಗೆ ಬಿದ್ದ. ಭಿಕ್ಷುಕ ಗಹಗಹಿಸಿ ನಗುತ್ತ, “ನಿನಗೆ ನನ್ನ ನೆನಪಿಲ್ಲವೇ? ನನ್ನ ಕಣ್ಣುಗಳನ್ನು ನಿಟ್ಟಿಸು. ಪೂರ್ವಜನ್ಮದಲ್ಲಿ ನಾನು ನಿನ್ನ ಗುರುವಾಗಿದ್ದವನಲ್ಲವೇ? ಕಳೆದ ಜನ್ಮದಲ್ಲಿಯೂ ನಿನಗೆ ಇದನ್ನು ಹೇಳಿ ಕೊಟ್ಟಿದ್ದೆ. ಆಗ ಅರ್ಥ ಮಾಡಿಕೊಂಡಿ ರಲಿಲ್ಲ; ಈಗಲೂ ತಿಳಿದುಕೊಂಡಿಲ್ಲ. ಈ ಭಿಕ್ಷಾಪಾತ್ರೆಯಲ್ಲಿ ಜಾದೂ ಏನೂ ಇಲ್ಲ. ಇದು ಮನುಷ್ಯ ಹೃದಯದಿಂದ ಮಾಡಿರುವಂಥದ್ದು. ಮನುಷ್ಯ ಹೃದಯ ಹೇಗೆ ಕೆಲಸ ಮಾಡು ತ್ತದೆಯೋ ಹಾಗೆಯೇ ಇದು’ ಎಂದು ಹೇಳಿದ.
( ಸಾರ ಸಂಗ್ರಹ)