ರಾಜ್ಯದಲ್ಲಿ ಕೋವಿಡ್ ಬಗ್ಗೆ ಯಾವುದೇ ಆತಂಕ ಬೇಡ
Team Udayavani, Nov 30, 2022, 6:40 AM IST
ಬೆಂಗಳೂರು: ಚೀನದಲ್ಲಿ ಕೋವಿಡ್ ಮತ್ತೆ ಉಲ್ಬಣಗೊಂಡು ಜನಜೀವನ ಸಂಕಷ್ಟ ಎದುರಿಸುತ್ತಿದ್ದು, ರಾಜ್ಯದಲ್ಲಿ ಕೋವಿಡ್ ಬಗ್ಗೆ ಜನಸಾಮಾನ್ಯರು ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ತಿಳಿಸಿದ್ದಾರೆ.
ಚೀನದಲ್ಲಿ ಸಾಮೂಹಿಕವಾಗಿ ಜನ ಸಾಮಾನ್ಯರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಒಬ್ಬರು ಸೋಂಕಿಗೆ ಒಳಗಾದರೆ ಆ ಕಟ್ಟಡ, ಆಸುಪಾಸಿನಲ್ಲಿ ವಾಸಿಸುವ ಜನರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ಕಾರಣದಿಂದ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ಕಂಡು ಬರುತ್ತಿವೆ. ಭಾರತದಲ್ಲಿ ಸದ್ಯ ಈ ಮಾದರಿಯ ಪರೀಕ್ಷಾ ಪದ್ಧತಿ ಇಲ್ಲ.
ಹವಾಮಾನ ವೈಪರೀತ್ಯದಿಂದ ಕೆಲವರು ಜ್ವರ ಪೀಡಿತರಾಗುತ್ತಿದ್ದಾರೆ. ರಾಜ್ಯದಲ್ಲಿ ಕೆಲವೆಡೆ ಆಗಾಗ ಕೋವಿಡ್ ಪ್ರಕರಣ ಕಂಡುಬಂದರೂ ಸೋಂಕಿತರು ಕೊರೊನಾ ಲಕ್ಷಣ ರಹಿತರಾಗುತ್ತಿದ್ದಾರೆ. ಹೀಗಾಗಿ ಸೋಂಕಿತರ ಸಂಪರ್ಕಿತರಿಗೆ ಪರೀಕ್ಷೆ ಮಾಡುತ್ತಿಲ್ಲ. ಪರೀಕ್ಷೆಗಳ ಸಂಖ್ಯೆಯನ್ನೂ ಇಳಿಕೆ ಮಾಡಲಾಗಿದೆ.
ನಿಯಂತ್ರಣದಲ್ಲಿದೆ
ಕೋವಿಡ್ ಸಂಬಂಧಿತ ಆಸ್ಪತ್ರೆ ದಾಖಲಾತಿ ವಿರಳವಾಗಿದ್ದು, ಮರಣವೂ ನಿಯಂತ್ರಣವಾಗಿದೆ. ಇಲ್ಲಿ ಯಾವುದೇ ನಿರ್ಬಂಧ ವಿಧಿಸುವುದಿಲ್ಲ. ತೀವ್ರ ಉಸಿರಾಟದ ಸಮಸ್ಯೆ (ಸಾರಿ), ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ (ಐಎಲ್ಐ) ರೋಗಿಗಳ ಮೇಲೆ ನಿಗಾ ಇಡಲಾಗಿದ್ದು, ಇಂತಹ ಮಾದರಿಯ ಪ್ರಕರಣಗಳೂ ಏರಿಕೆಯಾಗಿಲ್ಲ ಎಂದು ಹೇಳಿದ್ದಾರೆ.