ಮಾಲಿನ್ಯ ನಿಯಂತ್ರಣ ಸರ್ಟಿಫಿಕೇಟ್ ಇಲ್ಲದಿದ್ರೆ…ಪೆಟ್ರೋಲ್, ಡೀಸೆಲ್ ಇಲ್ಲ: ದೆಹಲಿ ಸರ್ಕಾರ
ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರದ ತುಂಬಾ ಮಹತ್ವದ ನೀತಿಯಾಗಿದೆ.
Team Udayavani, Jan 29, 2022, 12:43 PM IST
ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿನ ವಾಯುಗುಣಮಟ್ಟ ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ಇನ್ಮುಂದೆ ಪೆಟ್ರೋಲ್ ಬಂಕ್ ಗಳಲ್ಲಿ ಪೆಟ್ರೋಲ್, ಡೀಸೆಲ್ ಹಾಕಿಸಿಕೊಳ್ಳಲು ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಲು ದೆಹಲಿ ಸರ್ಕಾರ ಸಿದ್ಧತೆ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಚಿಕ್ಕಮಗಳೂರು : ಅರಣ್ಯ ಪ್ರದೇಶದಲ್ಲಿ ನವವಿವಾಹಿತೆ ಅನುಮಾನಾಸ್ಪದ ಸಾವು
ಇಂತಹ ಕ್ರಮಗಳನ್ನು ದೆಹಲಿ ಸರ್ಕಾರ ಇದೇ ಮೊದಲ ಬಾರಿಗೆ ಘೋಷಿಸಿಲ್ಲ, 2021ರ ಅಕ್ಟೋಬರ್ ನಲ್ಲಿಯೂ ಇಂತಹ ನಿಯಮವನ್ನು ಘೋಷಿಸಿದ್ದು, ವಾಹನ ಸವಾರರಿಗೆ ಅರಿವು ಮೂಡಿಸುವ ಅಭಿಯಾನ ನಡೆಸಿತ್ತು ಎಂದು ವರದಿ ಹೇಳಿದೆ.
ಪರಿಸರ ಖಾತೆ ಸಚಿವ ಗೋಪಾಲ್ ರೈ, ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರದ ತುಂಬಾ ಮಹತ್ವದ ನೀತಿಯಾಗಿದೆ. ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಭಾರೀ ವಾಯು ಮಾಲಿನ್ಯ ಸಮಸ್ಯೆಯನ್ನು ಎದುರಿಸುತ್ತಿದೆ. ಈ ನಿಟ್ಟಿನಲ್ಲಿ ದೆಹಲಿಯಲ್ಲಿ ವಾಹನಗಳಿಗೆ ಇನ್ನು ಮುಂದೆ ಪೆಟ್ರೋಲ್ ಬಂಕ್ ಗಳಲ್ಲಿ ಇಂಧನ ತುಂಬಿಸಿಕೊಳ್ಳಲು ಮಾಲಿನ್ಯ ನಿಯಂತ್ರಣ ಸರ್ಟಿಫಿಕೇಟ್ ಕಡ್ಡಾಯವಾಗಲಿದೆ ಎಂದು ತಿಳಿಸಿದ್ದಾರೆ.
ಈ ನೀತಿ ಜಾರಿಗೆ ತರುವುದರಿಂದ ಮಾಲಿನ್ಯಕಾರಕ ವಾಹನಗಳು ದೆಹಲಿಯಲ್ಲಿ ಸಂಚರಿಸದಂತೆ ತಡೆಯಲು ಸಾಧ್ಯವಾಗಲಿದೆ. ಅಷ್ಟೇ ಅಲ್ಲ ವಾಯು ಗುಣಮಟ್ಟ ಸುಧಾರಿಸಲು ಸಹಾಯಕವಾಗಲಿದೆ. ಈ ನೀತಿಯನ್ನು ಜಾರಿಗೊಳಿಸುವ ಮುನ್ನ ಸಾರ್ವಜನಿಕ ಅಭಿಪ್ರಾಯ ಪಡೆಯಲಾಗುವುದು ಎಂದು ಸಚಿವ ರೈ ಮಾಹಿತಿ ನೀಡಿದ್ದಾರೆ.