ಹೊತ್ಕಂಡ್ ಹೋದ ನಾಯಿ ಶಿಕಾರಿ ಮಾಡುತ್ತಾ?: ಕಾಂಗ್ರೆಸ್ ಅಭಿಯಾನಕ್ಕೆ ಸಿ.ಟಿ.ರವಿ ಲೇವಡಿ
ಕಾಂಗ್ರೆಸ್ಸಿಗೆ ಕ್ಯಾನ್ಸರ್ ವ್ಯಾಪಿಸಿದೆ... ಸಿದ್ದರಾಮಯ್ಯ ಪಕ್ಷ ಬಿಟ್ಟರೂ ಆಶ್ಚರ್ಯವಿಲ್ಲ
Team Udayavani, Mar 12, 2022, 6:02 PM IST
ಚಿಕ್ಕಮಗಳೂರು : ಆಸೆ ಆಮಿಷ ತೋರಿಸಿ ಸದಸ್ಯತ್ವ ಮಾಡಿಸಿದರೆ ಪಕ್ಷದ ಮೇಲೆ ಬದ್ಧತೆ ಎಲ್ಲಿರುತ್ತದೆ, ವಿಚಾರಧಾರೆ, ನಾಯಕತ್ವದ ಮೇಲೆ ನಂಬಿಕೆ, ವಿಶ್ವಾಸದ ಮೇಲೆ ಸದಸ್ಯರಾಗುವವರು ಉಳಿಯುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ ಸದಸ್ಯತ್ವದ ಅಭಿಯಾನವನ್ನು ಶನಿವಾರ ಲೇವಡಿ ಮಾಡಿದ್ದಾರೆ.
ಆಸೆ ತೋರಿಸಿ ಸದಸ್ಯರನ್ನಾಗಿಸಿದರೆ ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಮಾವನ ಕಡೆ ಅಂತ ಹೋಗುತ್ತಾರೆ. ನಾಳೆ ಮತ್ಯಾರೋ ಮಿಕ್ಸಿ ಕೊಡುತ್ತೇವೆ ಅಂದ್ರೆ ಆ ಕಡೆ ಹೋಗುತ್ತಾರೆ ಎಂದರು.
2023 ಮಾರ್ಚ್ ಬಳಿಕವೇ ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತದೆ. ಜನರಿಗೆ ಕೊಟ್ಟಿರುವ ಆಶ್ವಾಸನೆ ಈಡೇರಿಸಿ, ಆಡಳಿತಕ್ಕೆ ಚುರುಕು ಮುಟ್ಟಿಸಿದ ಬಳಿಕವೇ ಚುನಾವಣೆಗೆ ಹೋಗುತ್ತೇವೆ. ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲವೇ ಇಲ್ಲ. ನಾನು ಕಾರ್ಯಕರ್ತ ಅಷ್ಟೆ, ಜಮ್ಮು, ಪಶ್ಚಿಮಬಂಗಾಳ, ಗುಜರಾತ್ ಎಲ್ಲಿಗೆ ಹಾಕಿದರೂ ಹೋಗುತ್ತೇನೆ. ಕಾರ್ಯಕರ್ತನಿಗೆ ಕಾರ್ಯ ಮಾಡುವುದಷ್ಟೆ ಕೆಲಸ, ಅದೇ ಜವಾಬ್ದಾರಿ, ಕರ್ತವ್ಯ ಎಂದರು.
ಈಗ ಕಾಂಗ್ರೆಸ್ಸಿಗೆ ಕ್ಯಾನ್ಸರ್ ವ್ಯಾಪಿಸಿದೆ, ಅದಕ್ಕೆ ಚಿಕಿತ್ಸೆ ಇಲ್ಲ. ಕ್ಯಾನ್ಸರ್ ವ್ಯಾಪಿಸಿದ ಮೇಲೆ ಇಡೀ ದೇಹವನ್ನ ತಿನ್ನುತ್ತದೆ. ಜಾತಿವಾದ, ಪರಿವಾರವಾದ, ಭ್ರಷ್ಟಾಚಾರದಲ್ಲೇ ಮುಳುಗಿರುತ್ತದೋ ಅಲ್ಲಿಯವರೆಗೆ ಚಿಕಿತ್ಸೆ ಇಲ್ಲ. ಕಾಂಗ್ರೆಸ್ನಲ್ಲಿ ಯಾರು ಉಳಿಯುತ್ತಾರೆ, ಸಿದ್ದರಾಮಯ್ಯ ಕಾಂಗ್ರೆಸ್ ಬಿಟ್ಟರೂ ಆಶ್ಚರ್ಯವಿಲ್ಲ. ಅವರ ಆಪ್ತ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ಬಿಟ್ಟಿದ್ದಾರೆ. ಅವರು ಎಂತಹಾ ದೋಸ್ತ್ ಎಂದು ರಾಜ್ಯಕ್ಕೆ ಗೊತ್ತು. ಚಡ್ಡಿ ದೋಸ್ತ್, ಕ್ಲಾಸು-ಗ್ಲಾಸು ಎಂತೆಂತದ್ದೋ ಹೇಳುತ್ತಾರೆ. ಎಲ್ಲರನ್ನೂ ಮುಂದೆ ಕಳಿಸಿ ನಾಳೆ ಅವರು ಬಿಟ್ಟು ಬಂದರೂ ಬರಬಹುದು ಎಂದರು.
ಕರ್ನಾಟಕ ಸೇರಿ ಅಲ್ಲಲ್ಲೇ ಗುಟುಕು ಜೀವ ಇಟ್ಟುಕೊಂಡಿದೆ. ಪಕ್ಷದ ಬೆಳವಣಿಗೆಗೆ ನೇತೃತ್ವ-ನೀತಿ ಕಾರಣವಾಗುತ್ತೆ. ಇಂದು ಕಾಂಗ್ರೆಸ್ ನೇತೃತ್ವ-ನೀತಿ ಹೀನವಾಗಿದೆ. ನೇತೃತ್ವ-ನೀತಿ ಹೀನ ಪಕ್ಷದ ಮೇಲೆ ಜನ ಹೇಗೆ ವಿಶ್ವಾಸವಿಡುತ್ತಾರೆ ಎಂದು ಪ್ರಶ್ನಿಸಿದರು.