‘ನೀರಾವರಿ ಎಂದರೆ ಕೇವಲ ಕೃಷ್ಣಾ ಮೇಲ್ದಂಡೆಯೇ?’ ಎಂದ ಶಿವಲಿಂಗೇಗೌಡಗೆ ಉ.ಕ ಶಾಸಕರ ತರಾಟೆ
Team Udayavani, Mar 28, 2022, 4:53 PM IST
ಬೆಂಗಳೂರು: ನೀರಾವರಿ ಎಂದರೆ ಕೇವಲ ಕೃಷ್ಣಾ ಮೇಲ್ದಂಡೆ ಮಾತ್ರವೇ? ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಪ್ರಶ್ನೆ ಮಾಡಿರುವುದು ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಹಾಗೂ ಹಳೆ ಮೈಸೂರು ಭಾಗದ ಶಾಸಕರ ಮಧ್ಯೆ ಕೆಲ ಕಾಲ ವಾಗ್ವಾದ ನಡೆಯುವುದಕ್ಕೆ ಕಾರಣವಾಯಿತು.
ಜಲಸಂಪನ್ಮೂಲ ಇಲಾಖೆ ಬೇಡಿಕೆಯ ಚರ್ಚೆಗೆ ಸಚಿವ ಗೋವಿಂದ ಕಾರಜೋಳ ಅವರು ಉತ್ತರ ನೀಡುವ ಸಂದರ್ಭದಲ್ಲಿ ಶಿವಲಿಂಗೇಗೌಡ ಈ ಪ್ರಶ್ನೆ ಕೇಳಿದರು.
ಇದಕ್ಕೆ ಉತ್ತರ ಕರ್ನಾಟಕ ಭಾಗದ ಶಾಸಕರು ಪಕ್ಷಾತೀತವಾಗಿ ವಿರೋಧ ವ್ಯಕ್ತಪಡಿಸಿದರು. ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್, ಕಾಂಗ್ರೆಸ್ ನ ಶಿವಾನಂದ ಪಾಟೀಲ್ ಏರಿದ ಸ್ವರದಲ್ಲಿ ತರಾಟೆಗೆ ತೆಗೆದುಕೊಂಡಾಗ ಶಿವಲಿಂಗೇಗೌಡರು ಮೌನಕ್ಕೆ ಶರಣಾದರು.
ಇದನ್ನೂ ಓದಿ:ಅಂಕೆ ತಪ್ಪಿದ ಹೇಳಿಕೆ ಸಿದ್ದರಾಮಯ್ಯನವರಿಗೆ ತುಟ್ಟಿಯಾಯ್ತೇ?
“ಗೌಡರೇ ರಾಜ್ಯದ ಒಟ್ಟು ನೀರಾವರಿ ಯೋಜನೆಯ ಶೇ.57 ರಷ್ಟು ಕೃಷ್ಣಾ ಭಾಗ್ಯ ಜಲ ನಿಗಮದ ವ್ಯಾಪ್ತಿಯಲ್ಲಿ ಬರುತ್ತದೆ. ಮೈಸೂರು ಮಹಾರಾಜರು ಕನ್ನಂಬಾಡಿ ಕಟ್ಟಿ ಹೋಗಿದ್ದಕ್ಕೆ ನೀವು ಬದುಕಿದ್ದೀರಿ” ಎಂದು ಟೀಕಿಸಿದರು.
ಆಗ ಮಧ್ಯ ಪ್ರವೇಶ ಮಾಡಿದ ಕಾರಜೋಳ, ಗೌಡರೇ ನಮ್ಮದು ಎಲ್ಲ ಭಾಗವನ್ನೂ ಸಮಾನವಾಗಿ ನೋಡುತ್ತದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಈ ಬಾರಿ 5000, ಭದ್ರಾ ಮೇಲ್ದಂಡೆಗೆ 3000, ಎತ್ತಿನಹೊಳೆಗೆ 3000, ಮೇಕೆದಾಟು 1000, ಮಹದಾಯಿಗೆ 1000 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಆದರೆ ಇದಕ್ಕೆ ಒಪ್ಪದ ಬಸನಗೌಡ ಪಾಟೀಲ್, ಕೃಷ್ಣೆಯ ಕಣ್ಣೀರಿಗೆ ಕೊನೆ ಎಂದು? ಈ ಯೋಜನೆ ಪೂರ್ಣಗೊಳಿಸುವುದಕ್ಕೆ ಎಷ್ಟು ಶತಮಾನ ಬೇಕು? ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ನಲ್ಲಿ ಮಾಡಿದ ರೀತಿ ಕೃಷ್ಣಾ ಯೋಜನೆ ಅಭಿವೃದ್ಧಿ ಮಾಡಬೇಕು. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು.