ನಾಯಿ ಹಾಗೆ ಬಿದ್ದಿರ್ತಾರೆ; ನಾನು ಎಲ್ಲಾ ಪೋಲೀಸರಿಗೆ ಹೇಳಿಲ್ಲ: ಆರಗ ಜ್ಞಾನೇಂದ್ರ
ಗೋ ಕಳ್ಳರ ಜೊತೆ ಕೆಲ ಪೊಲೀಸರು ಶಾಮೀಲಾಗಿದ್ದಾರೆ, ಇಲ್ಲಿ ನನ್ನ ಅಸಹಾಯಕತೆ ಇಲ್ಲ
Team Udayavani, Dec 3, 2021, 6:34 PM IST
ಬೆಂಗಳೂರು : ಲಂಚ ತಿಂದುಕೊಂಡು ನಾಯಿಯ ಹಾಗೆ ಬಿದ್ದಿರುತ್ತಾರೆ ಎನ್ನುವ ತಮ್ಮ ಹೇಳಿಕೆಯ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸ್ಪಷ್ಟನೆ ನೀಡಿದ್ದು,ನಾನು ಎಲ್ಲಾ ಪೋಲೀಸರ ಬಗ್ಗೆ ಮಾತನಾಡಿದ ಮಾತು ಇದಲ್ಲ ಎಂದಿದ್ದಾರೆ.
ಪೋಲಿಸ್ ಅಧಿಕಾರಿ ವಿರುದ್ಧ ಗೃಹ ಸಚಿವರು ಆಕ್ರೋಶ ವ್ಯಕ್ತಪಡಿಸಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಸಚಿವರು, ಹಸುಗಳ ಕಳ್ಳ ಸಾಗಾಣಿಕೆ ತಡೆದವರ ಮೇಲೆ ವಾಹನ ಹರಿಸಲಾಗಿತ್ತು, ಇದು ಅಮಾನುಷವಾದ ಕೆಲಸ. ಕಾಯ್ದೆ ಜಾರಿಗೆ ತಂದರೂ ಕೆಲ ಪೋಲಿಸರು ಶಾಮೀಲಾಗಿದ್ದಾರೆ. ಸಿಟ್ಟಿನಿಂದ ಈ ಮಾತನ್ನ ಹೇಳಿದ್ದೇನೆ. ಮಚ್ಚು ತೋರಿಸಿ ಹಸುಗಳನ್ನ ತೆಗೆದುಕೊಂಡು ಹೋಗುತ್ತಾರೆ. ಜೀವ ಬೇಕೋ ಹಸು ಬೇಕೋ ಅಂತ ಹೆದರಿಸುತ್ತಾರೆ. ಸಣ್ಣಪುಟ್ಟ ನ್ಯೂನ್ಯತೆ ಇದ್ದರೂ ಪೋಲಿಸರು ಅತ್ಯುತ್ತಮ ಕೆಲಸ ಮಾಡಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆಯಂತೆ ತಡೆಯುವ ಕೆಲಸ ಮಾಡಿದ್ದೇನೆ. ಕೆಲವರು ಗೋ ಕಳವು, ಕಡಿಯುವುದನ್ನ ಮಾಡುತ್ತಿದ್ದಾರೆ. ಇದು ಪೋಲಿಸರಿಗೆ ಗೊತ್ತಿಲ್ಲದೇ ಏನೂ ಇಲ್ಲ.ಅಂತಹವರ ಜೊತೆ ಪೋಲಿಸರು ಶಾಮೀಲಾಗಿದ್ದಾರೆ ಎಂದರು.
ಇದನ್ನೂ ಓದಿ :ಲಂಚ ತಿಂದುಕೊಂಡು ನಾಯಿಯಂತೆ ಬಿದ್ದಿರ್ತಾರೆ! ಗೃಹ ಸಚಿವರಿಂದ ಪೊಲೀಸರಿಗೆ ತರಾಟೆ;ವಿಡಿಯೋ ವೈರಲ್
ಇಲ್ಲಿ ನನ್ನ ಅಸಹಾಯಕತೆ ಇಲ್ಲ, ಆಕ್ರೋಶವನ್ನ ಹೊರ ಹಾಕಿದ್ದೇನೆ. ಈಗಾಗಲೇ ಪೋಲಿಸರಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದೇನೆ. ಪೊಲೀಸರ ಬಗ್ಗೆ ನನಗೆ ಗೌರವ ಇದೆ. ಶಾಮೀಲಾಗಿರೋದು ಹೇಸಿಗೆ ಮೂಡಿಸುವಂತಹದ್ದು. *ಕಾನೂನು ಉಲ್ಲಂಘಿಸುವವರ ಜೊತೆ ಶಾಮೀಲಾಗಿರುವ ಪೋಲಿಸರ ಬಗ್ಗೆ ಬೇಸರ ಇದೆ. ಬರುವ ದಿನಗಳಲ್ಲಿ ಕಡಿವಾಣ ಹಾಕಲು ಪ್ರಯತ್ನ ಮಾಡುತ್ತೇವೆ. ತಪ್ಪು ಮಾಡಬಾರದು, ಇಲ್ಲದೇ ಇದ್ದಲ್ಲಿ ಇದು ಎಚ್ಚರಿಕೆಯ ಗಂಟೆ ಎಂದರು.