ಮೀಸಲಿಗೀಗ ಒಕ್ಕಲಿಗರ ಗಡುವು: ಜ.23ರ ಒಳಗೆ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿ
Team Udayavani, Nov 28, 2022, 7:00 AM IST
ಬೆಂಗಳೂರು: ರಾಜ್ಯದಲ್ಲೀಗ ಮೀಸಲಾತಿ ಕೂಗು ಜೋರಾಗಿದ್ದು, ಪಂಚಮಸಾಲಿ ಸಮುದಾಯವನ್ನು 2ಎ ಗೆ ಸೇರ್ಪಡೆಗೊಳಿಸುವಂತೆ ಒತ್ತಾಯಿಸಿ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರುವ ತಂತ್ರ ನಡೆಯುತ್ತಿರುವ ಬೆನ್ನೆಲ್ಲೆ ಒಕ್ಕಲಿಗ ಸಮುದಾಯ ತನ್ನ ಮೀಸಲಾತಿ ಪ್ರಮಾಣವನ್ನು ಶೇ.4ರಿಂದ 12ಕ್ಕೆ ಹೆಚ್ಚಳ ಮಾಡುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಮೀಸಲಾತಿ ಬೇಡಿಕೆ ಸಂಬಂಧದ ನಡೆದ ಸಭೆಯಲ್ಲಿ ಒಕ್ಕಲಿಗ ಸ್ವಾಮೀಜಿಗಳು ರಾಜ್ಯ ಸರ್ಕಾರಕ್ಕೆ ಜ.23ರ ಗಡುವು ನೀಡಿದ್ದಾರೆ.
ಒಂದು ವೇಳೆ ಅಂದು ಬೇಡಿಕೆ ಈಡೇರಿಕೆ ಮಾಡಿದರೆ ವಿಜಯೋತ್ಸವ ಇಲ್ಲದೆ, ಇದ್ದರೆ ಬೀದಿ ಹೋರಾಟಕ್ಕೆ ಕರೆ ನೀಡುತ್ತೇವೆ ಎಂದು ಸಚಿವ ಆರ್.ಅಶೋಕ್ ಅವರಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ಒಕ್ಕಲಿಗ ಸಮುದಾಯದ ಶ್ರೀಗಳು ಸರ್ಕಾರ ಎಚ್ಚರಿಕೆ ಸಂದೇಶ ರವಾನಿಸಿದರು.
ಭಾನುವಾರ ರಾಜ್ಯ ಒಕ್ಕಲಿಗರ ಸಂಘ, ಕುವೆಂಪು ಸಭಾಂಗಣದಲ್ಲಿ ಆದಿಚುಚಂನಗಿರಿಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ , ನಂಜವಧೂತಶ್ರೀ, ಚಂದ್ರಶೇಖರನಾಥ ಸ್ವಾಮೀಜಿ ಸಮ್ಮುಖದಲ್ಲಿ ಹಮ್ಮಿಕೊಂಡಿದ್ದ ಒಕ್ಕಲಿಗ ಸಮುದಾಯದ ಮುಖಂಡರುಗಳ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಸಚಿವರಾದ ಆರ್.ಅಶೋಕ್, ಡಾ.ಸುಧಾಕರ್, ಗೋಪಾಲಯ್ಯ, ಒಕ್ಕಲಿಗ ಅಭಿವೃದ್ದಿ ನಿಗಮದ ಅಧ್ಯಕ್ಷ ಕೃಷ್ಣಪ್ಪ, ಶಾಸಕ ಎಂ.ಕೃಷ್ಣಪ್ಪ, ಒಕ್ಕಲಿಗ ಸಂಘದ ರಾಜ್ಯಾಧ್ಯಕ್ಷ ಬಾಲಕೃಷ್ಣೇಗೌಡ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ಶೇ.14ಕ್ಕೆ ಏರಿಕೆ ಮಾಡಿ
ನಿರ್ಮಲಾನಂದ ನಾಥ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ ಶೇ.19ರಷ್ಟು ಒಕ್ಕಲಿಗ ಸಮುದಾಯದವರು ಇದ್ದಾರೆ. ಈ ಸಮುದಾಯ ಪ್ರವರ್ಗ 3ಎ ನಲ್ಲಿ ಸೇರುವ ಹಿನ್ನೆಲೆಯಲ್ಲಿ ಅಲ್ಲಿರುವ ಉಪಪಂಗಡಗಳು ಸೇರಿದಂತೆ ಒಟ್ಟು ಈ ಸಂಖ್ಯೆ ಶೇ.21 ಏರಿಕೆ ಆಗಲಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿರುವ ಸಮುದಾಯಕ್ಕೆ ಸರ್ಕಾರ ಶೇ.4ರಷ್ಟು ಮೀಸಲಾತಿ ಪ್ರಮಾಣ ನೀಡಿದೆ. ಆದರೆ ಅದರಲ್ಲಿ ಒಕ್ಕಲಿಗರಿಗೆ ಸಿಗುವುದು ಕೇವಲ ಶೇ.3ರಷ್ಟು ಪ್ರಮಾಣ ಮಾತ್ರ. ಈ ಹಿನ್ನೆಲೆಯಲ್ಲಿ ಮೀಸಲಾತಿ ಪ್ರಮಾಣವನ್ನು ಶೇ.14ಕ್ಕೆ ಏರಿಕೆ ಮಾಡುವಂತೆ ಆಗ್ರಹಿಸಿದರು.
ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಇದ್ದ ಶೇ.50 ಮೀಸಲಾತಿಯನ್ನು ಹೆಚ್ಚಿಸಿ ಎಸ್ಸಿ ವರ್ಗಕ್ಕೆ ಶೇ.2 ಮತ್ತು ಎಸ್ಟಿ ವರ್ಗಕ್ಕೆ ಶೇ.4 ರಷ್ಟು ಮೀಸಲಾತಿ ಹೆಚ್ಚಿಸಿ ಮೀಸಲಾತಿ ಅಸಮತೋಲನದ ಅನ್ಯಾಯವನ್ನು ಸರಿಪಡಿಸಿದೆ. ಆದರೆ ರೀತಿಯ ಜನಸಂಖ್ಯೆಯ ಅನುಗಣವಾಗಿ ಮೀಸಲಾತಿ ಏರಿಕೆ ಮಾಡಿ ಒಕ್ಕಲಿಗ ಸಮುದಾಯಕ್ಕೆ ನ್ಯಾಯ ನೀಡುವಂತೆ ಮನವಿ ಮಾಡಿದರು. ಸರ್ಕಾರಕ್ಕೆ ಜ.23ರ ಗಡುವು ನೀಡಲಾಗಿದೆ. ಸರ್ಕಾರ ನಮ್ಮ ಬೇಡಿಕೆ ಈಡೇರಿಸುವ ಭರವಸೆ ಇದೆ. ಇಲ್ಲದಿದ್ದರೆ ದೊಡ್ಡಮಟ್ಟದ ಹೋರಾಟಕ್ಕೆ ಕರೆನೀಡುವುದಾಗಿ ಎಚ್ಚರಿಸಿದರು.
ಡಬಲ್ ಎಂಜಿನ್ ಸರ್ಕಾರ ಸ್ಪಂದಿಸಿದರೆ ವಿಜಯೋತ್ಸವ:
ಸ್ಪಟಿಕ ಪುರಿ ಮಠದ ಶ್ರೀ ನಂಜವಧೂತ ಸ್ವಾಮೀಜಿ ಮಾತನಾಡಿ, ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಡಬಲ್ ಎಂಜಿನ್ ಸರ್ಕಾರವಿದೆ. ಸರ್ಕಾರ ಬೇಡಿಕೆಗೆ ಸ್ಪಂದಿಸದಿದ್ದರೆ ಜ.23ರಂದು ವಿಜಯೋತ್ಸವ ಆಚರಣೆ, ಇಲ್ಲದೆ ಇದ್ದರೆ ಬೀದಿ ಹೋರಾಟ. ಈ ಹೋರಾಟಕ್ಕೆ ರಾಜ್ಯ ವಿವಿಧ ಭಾಗಗಳಲ್ಲಿರುವ ಒಕ್ಕಲಿಗ ಸಮುದಾಯಗಳು ಸಿದ್ದರಿರುವಂತೆ ಕರೆ ನೀಡಿದರು. ಈಗಾಗಲೇ ಸುಪ್ರೀಂ ಕೋರ್ಟ್ ಮೇಲ್ಜಾತಿಯಲ್ಲಿ ಆರ್ಥಿಕ ಹಿಂದುಳಿದ ವರಿಗೆ ಮೀಸಲಾತಿ ನೀಡಿದೆ. ಆದರೆ ರೀತಿಯಲ್ಲಿ ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ಒಕ್ಕಲಿಗ ಸಮುದಾಯದ ಬಡವರಿಗೂ ಮೀಸಲಾತಿ ನೀಡಬೇಕು ಎಂದು ಮನವಿ ಮಾಡಿದರು.
ಸದ್ಯ ಒಕ್ಕಲಿಗ ಸಮುದಾಯದ ಕೆಲವು ಉಪಪಂಗಡಗಳು ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಇಲ್ಲ. ಅವುಗಳನ್ನು ಕೂಡಲೇ ಆ ಪಟ್ಟಿಗೆ ಸೇರುವ ಕೆಲಸ ಆಗಬೇಕು. ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಕೊಡಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಮೇಲೆ ಸಮುದಾಯದ ಸಚಿವರು ಒತ್ತಡ ಹೇರಬೇಕು ಎಂದರು.
ಮೀಸಲಾತಿ ಕೇಳುವುದು ನಮ್ಮ ಹಕ್ಕು
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಮೀಸಲಾತಿ ಕೇಳುವುದು ಒಕ್ಕಲಿಗರ ಹಕ್ಕು, ಅದನ್ನು ಕೇಳುತ್ತಿದ್ದೇವೆ. ಈ ವಿಚಾರದಲ್ಲಿ ರಾಜಕೀಯ ಬೆರೆಸದೇ ಎಲ್ಲರೂ ಒಗ್ಗಟ್ಟು ಪ್ರದರ್ಶಿಸುವಂತೆ ಮನವಿ ಮಾಡಿದರು. ನಾವು ನಮ್ಮ ಹಕ್ಕನ್ನು ಸುಮ್ಮನೆ ಕೇಳುತ್ತಿಲ್ಲ. ಈಗಾಗಲೇ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಹಂಚಿಕೆ ಮಾಡಲಾಗಿದೆ. ಆದೇ ರೀತಿಯಲ್ಲಿ ನಮಗೂ ಜನಸಂಖ್ಯೆ ಆಧಾರದ ಮೇಲೆಯೆ ಮೀಸಲಾತಿ ನೀಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದರು. ಈ ವಿಚಾರದಲ್ಲಿ ಸ್ವಾಮೀಜಿಗಳು ತೆಗೆದುಕೊಳ್ಳುವ ಎಲ್ಲ ತೀರ್ಮಾನಗಳಿಗೂ ಬದ್ಧವಾಗಿರುವುದಾಗಿ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಡಿ.ವಿ.ಸಂದಾನಂದಗೌಡ ಮಾತನಾಡಿ, ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ನೇತೃತ್ವದಲ್ಲಿ ಈ ಸಂಬಂಧ ನಿಯೋಗ ಕೊಂಡೊಯ್ದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡುವುದಾಗಿ ಹೇಳಿದರು. ಇದಕ್ಕೆ ಒಕ್ಕಲಿಗ ಸಂಘ ಕೂಡ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಚಿವ ಆರ್.ಅಶೋಕ್ ಮಾತನಾಡಿ, ಹಲವು ವರ್ಷಗಳ ನಂತರ ಸಮುದಾಯ ಒಗ್ಗಟ್ಟು ಪ್ರದರ್ಶಿಸಿದೆ. ಕಚ್ಚಾಟಗಳನ್ನು ಮರೆತು ಗುರಿ ಸಾಧಿಸುವ ವರೆಗೂ ಹೋರಾಟ ನಡೆಸುವಂತೆ ಮನವಿ ಮಾಡಿದರು.
ಈಗಾಗ ಲೇ ಸ್ವಾಮೀಜಿಗಳು ಕೂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮಾತನಾಡಿದ್ದಾರೆ ಒಕ್ಕಲಿಗ ಸಮುದಾಯದ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಿ, ಬೇಡಿಕೆ ಈಡೇರಿಕೆಗೆ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಮೀಸಲಾತಿ ವಿಚಾರದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಸಾಗಿದೆ. ಈ ವಿಚಾರದಲ್ಲಿ ಸರ್ಕಾರ ಸಾಮಾಜಿಕ ನ್ಯಾಯ ಕಾಪಾಡಲಿದೆ. ಬಹಳ ವರ್ಷಗಳ ನಂತರ ಒಕ್ಕಲಿಗ ಸಮುದಾಯ ಒಗ್ಗಟ್ಟು ಪ್ರದರ್ಶಿಸಿರುವುದು ಖುಷಿ ಸಂಗತಿ. ಆದರೆ ಸರ್ಕಾರಕ್ಕೆ ನೀಡಿರುವ ದಿನಾಂಕದ ಗಡುವನ್ನು ವಿಸ್ತರಣೆ ಮಾಡಬೇಕು.
-ಡಾ.ಸುಧಾಕರ್, ಆರೋಗ್ಯ ಸಚಿವ