ಇಂದಿನಿಂದ ಆಮ್ಲಜನಕ ಎಕ್ಸ್ಪ್ರೆಸ್ : ಕೊರತೆ ನೀಗಿಸಲು ರೈಲ್ವೇ ಇಲಾಖೆ ಕ್ರಮ
Team Udayavani, Apr 19, 2021, 7:25 AM IST
ಹೊಸದಿಲ್ಲಿ: ದೇಶಾದ್ಯಂತ ವೈದ್ಯಕೀಯ ಆಮ್ಲಜನಕ ಕೊರತೆ ಆಗದಂತೆ ನೋಡಿಕೊಳ್ಳುವುದಕ್ಕಾಗಿ ರೈಲ್ವೇ ಇಲಾಖೆ ಮಹತ್ವದ ಹೆಜ್ಜೆ ಇರಿಸಿದ್ದು, ಆಮ್ಲಜನಕ ಎಕ್ಸ್ಪ್ರೆಸ್ ರೈಲು ಓಡಿಸಲು ಮುಂದಾಗಿದೆ. ಈ ಬಗ್ಗೆ ರೈಲ್ವೇ ಸಚಿವ ಪೀಯೂಷ್ ಗೋಯಲ್ ರವಿವಾರ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಆಸ್ಪತ್ರೆಗಳಿಗೆ ಕ್ಷಿಪ್ರ ವಾಗಿ ಆಮ್ಲಜನಕ ಲಭ್ಯ ವಾಗಲಿದೆ ಎಂದು ಅವರು ಹೇಳಿದ್ದಾರೆ.
ದ್ರವರೂಪದ ವೈದ್ಯಕೀಯ ಆಮ್ಲಜನಕ ಮತ್ತು ಆಮ್ಲಜನಕದ ಸಿಲಿಂಡರ್ಗಳನ್ನು ಈ ವಿಶೇಷ ರೈಲುಗಳಲ್ಲಿ ಕಳುಹಿಸಲಾಗುತ್ತದೆ. ಸೋಮವಾರದಿಂದ ಮುಂಬಯಿಯ ಕಲಂಬೋಲಿ ಮತ್ತು ಬೊಯಿಸಾರ್ ನಿಲ್ದಾಣಗಳಿಂದ ವಿಶಾಖಪಟ್ಟಣ, ಜಮ್ಶೆಡ್ಪುರ, ರೂರ್ಕೆಲಾ ಮತ್ತು ಬೊಕಾರೋಗಳಿಗೆ ಈ ವಿಶೇಷ ರೈಲುಗಳು ತೆರಳಲಿವೆ.
ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಸರಕಾರಗಳು ರೈಲುಗಳ ಮೂಲಕ ವೈದ್ಯಕೀಯ ಆಮ್ಲಜನಕ ಪೂರೈಸಲು ಮನವಿ ಮಾಡಿದ್ದವು. ರವಿವಾರ ಸಭೆ ನಡೆಸಿ ವಿಶೇಷ ರೈಲು ಓಡಿಸಲು ನಿರ್ಧರಿಸಲಾಯಿತು.