ಕುಂದಾಪುರದಲ್ಲಿ ಪಂಚಾಯತ್ ಎಂಜಿನಿಯರಿಂಗ್ ಉಪವಿಭಾಗ ಕಚೇರಿ ತೆರೆಯಲು ಪ್ರಯತ್ನ : ಈಶ್ವರಪ್ಪ
Team Udayavani, Mar 17, 2021, 7:45 PM IST
ವಿಧಾನಸಭೆ: ಕುಂದಾಪುರದಲ್ಲಿ ಪಂಚಾಯತ್ ಎಂಜಿನಿಯರಿಂಗ್ ಉಪವಿಭಾಗದ ಕಚೇರಿಯನ್ನು ಶೀಘ್ರವೇ ತೆರೆಯಲು ವ್ಯವಸ್ಥೆ ಮಾಡಲಾಗುವುದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಭರವಸೆ ನೀಡಿದರು.
ಬುಧವಾರ ಬಿಜೆಪಿಯ ಸುಕುಮಾರ ಶೆಟ್ಟಿ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರ ಇತ್ತೀಚೆಗೆ ಹೊಸದಾಗಿ ರಚನೆಯಾಗಿರುವ ತಾಲ್ಲೂಕುಗಳಿಗೆ ಹೊಸದಾಗಿ ಪಂಚಾಯತ್ರಾಜ್ ಎಂಜಿನಿಯರಿಂಗ್ ಉಪವಿಭಾಗ ಕಚೇರಿ ಪ್ರಾರಂಭಿಸಲು ಹಾಗೂ ಹುದ್ದೆ ಸೃಷ್ಟಿಸುವ ಪ್ರಸ್ತಾವನೆಗೆ ಆರ್ಥಿಕ ನಿರ್ಬಂಧದ ಕಾರಣ ಮುಂದಿನ ನಾಲ್ಕು ವರ್ಷ ಮುಂದೂಡುವಂತೆ ಆರ್ಥಿಕ ಇಲಾಖೆ ತಿಳಿಸಿದೆ. ಆದರೂ ಶಾಸಕರ ಮನವಿಯಂತೆ ಶೀಘ್ರವಾಗಿ ವ್ಯವಸ್ಥೆ ಮಾಡಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ ಸುಕುಮಾರ ಶೆಟ್ಟಿ, ಕುಂದಾಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಪಂಚಾಯತ್ ಎಂಜಿನಿಯರಿಂಗ್ ಉಪವಿಭಾಗ ಕಚೇರಿ ತೆರೆಯುವ ಅಗತ್ಯವಿದೆ. ಬೈಂದೂರಿನಿಂದ ಕುಂದಾಪುರಕ್ಕೆ 35 ಕಿ.ಮೀ. ಅಂತರವಿದ್ದು, ಕುಂದಾಪುರದಲ್ಲಿ ಕಚೇರಿ ತೆರೆದರೆ 45 ಗ್ರಾಮ ಪಂಚಾಯ್ತಿಗಳಿಗೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.
ಇದನ್ನೂ ಓದಿ :ಐಶಾರಾಮಿ ಆಸ್ಪತ್ರೆ ಬದಲು ಬಡವರಿಗಾಗಿ ಗ್ರಾಮದಲ್ಲೇ 10 ರೂ.ಶುಲ್ಕದ ಕ್ಲಿನಿಕ್ ಸ್ಥಾಪಿಸಿದ ನೂರಿ