ಪಣಜಿ ಕ್ಷೇತ್ರದಿಂದ ಸ್ಪರ್ಧೆ: ಬಿಜೆಪಿ ಟಿಕೆಟ್ ಕೇಳಿದ ಪರೀಕರ್ ಪುತ್ರ
Team Udayavani, Nov 3, 2021, 3:50 PM IST
ಪಣಜಿ: ಗೋವಾದ ಮಾಜಿ ಮುಖ್ಯಮಂತ್ರಿ ದಿ. ಮನೋಹರ್ ಪರೀಕರ್ ರವರ ಪುತ್ರ ಉತ್ಪಲ್ ಪರೀಕರ್ ರವರು ಪ್ರಸಕ್ತ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಪಣಜಿ ಮತಕ್ಷೇತ್ರದಿಂದ ಸ್ಫರ್ಧಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಈ ಕುರಿತು ಪಣಜಿಯಲ್ಲಿ ಸುದ್ಧಿಗಾರರಿಗೆ ಪ್ರತಿಕ್ರಿಯೆ ನೀಡಿದ ಉತ್ಪಲ್ ಪರೀಕರ್, ”ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಪಣಜಿ ವಿಧಾನಸಭಾ ಕ್ಷೇತ್ರದಿಂದ ಸ್ಫರ್ಧಿಸುವ ನನ್ನ ನಿರ್ಣಯ ದೃಢವಾಗಿದೆ. ಈ ಕುರಿತ ಕಲ್ಪನೆಯನ್ನು ಬಿಜೆಪಿಗೆ ಈಗಾಗಲೇ ನೀಡಿದ್ದೇನೆ. ನಾನು ಚುನಾವಣೆಯಲ್ಲಿ ಸ್ಫರ್ಧಿಸಬೇಕು ಎನ್ನುವುದು ಪಣಜಿಯಲ್ಲಿ ಹಲವರ ಇಚ್ಛೆಯಾಗಿದೆ. ಬಿಜೆಪಿಯಿಂದ ಪಣಜಿ ಕ್ಷೇತ್ರದಲ್ಲಿ ಸ್ಫರ್ಧಿಸಲು ನನಗೆ ಟಿಕೇಟ್ ಲಭಿಸಲಿದೆ ಎಂಬ ಸಂಪೂರ್ಣ ವಿಶ್ವಾಸವಿದೆ. ನನ್ನ ಕ್ಷೇತ್ರದಲ್ಲಿ ಈಗಾಗಲೇ ಮತದಾರರನ್ನು ಭೇಟಿ ಮಾಡುವ ಕಾರ್ಯ ಆರಂಭಿಸಿದ್ದೇನೆ” ಎಂಬ ಮಾಹಿತಿ ನೀಡಿದರು.
ಗೋವಾ ರಾಜಧಾನಿ ಪಣಜಿ ಮತಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ರಕ್ಷಣಾಮಂತ್ರಿ ದಿ. ಮನೋಹರ್ ಪರೀಕರ್ ರವರು 1994 ರಿಂದ 2012 ರ ವರೆಗೆ ಸತತವಾಗಿ ಜಯಗಳಿಸಿದ್ದರು, 2017 ರಲ್ಲಿ ಮತ್ತೆ ಗೆಲುವು ಸಾಧಿಸಿದ್ದರು. ಪಣಜಿ ಕ್ಷೇತ್ರವು ಬಿಜೆಪಿಯ ಭಧ್ರಕೋಟೆ ಎಂದೇ ಹೇಳಬಹುದಾಗಿದೆ.
ಉತ್ಪಲ್ ಪರೀಕರ್ ರವರಿಗೆ ಬಿಜೆಪಿ ಟಿಕೆಟ್ ನೀಡದಿದ್ದರೆ ಅವರು ಪಕ್ಷೇತರರಾಗಿ ಚುನಾವಣೆಗೆ ಸ್ಫರ್ಧಿಸುವುದನ್ನೂ ಅಲ್ಲಗಳೆಯುವಂತಿಲ್ಲ ಎನ್ನಲಾಗಿದೆ.