ಲಸಿಕೆ ಉತ್ಪಾದನೆಯಲ್ಲಿ ನವಜಾತ ಕರುಗಳ ಸೀರಮ್ ಬಳಸದಂತೆ ನಿರ್ದೇಶಿಸಿ : ಡಿಸಿಜಿಐ ಗೆ ಪೆಟಾ ಪತ್ರ
ಡಿಸಿಜಿಐ ಡಾ.ವಿ.ಜಿ.ಸೋಮಾನಿ ಗೆ ಪತ್ರದ ಮೂಲಕ ಒತ್ತಾಯಿಸಿದ ಪೆಟಾ
Team Udayavani, Jun 17, 2021, 3:37 PM IST
ನವ ದೆಹಲಿ : ಕೋವಾಕ್ಸಿನ್ ಉತ್ಪಾದನೆಯಲ್ಲಿ ನವಜಾತ ಕರುಗಳ ಸೀರಮ್ (ಎನ್ ಬಿಸಿಎಸ್) ಬಳಕೆಯನ್ನು ಪ್ರಾಣಿ ಮುಕ್ತ ವಿಧಾನಕ್ಕೆ ಬದಲಾಯಿಸುವಂತೆ ಅನಿಮಲ್ ರೈಟ್ಸ್ ಆರ್ಗನೈಸೇಶನ್ ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೆಟಾ) ಸಂಸ್ಥೆಯು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಯನ್ನು ಒತ್ತಾಯಿಸಿದೆ.
ಕೋವ್ಯಾಕ್ಸಿನ್ ಲಸಿಕೆಯಲ್ಲಿ ನವಜಾತ ಕರುಗಳ ಸೀರಮ್ ನನ್ನು ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ಕಳೆದೆರಡು ದಿನಗಳಿಂದ ಕೇಳಿಬರುತ್ತಿರವ ಹಿನ್ನೆಲೆಯಲ್ಲಿ ಪೆಟಾ ಸಂಸ್ಥೆ ಡಿಸಿಜಿಐಗೆ ಪತ್ರದ ಮೂಲಕ ಲಸಿಕೆ ತಯಾರಿಕೆಯನ್ನು ಪ್ರಾಣಿ ಮುಕ್ತ ವಿಧಾನಕ್ಕೆ ಪರಿವರ್ತಿಸುವಂತೆ ಕೇಳಿಕೊಂಡಿದೆ.
ಇದನ್ನೂ ಓದಿ : ಗಾಜಿಯಾಬಾದ್ ಹಲ್ಲೆ ಕೇಸ್:ನಟಿ ಸ್ವರಾ ಭಾಸ್ಕರ್,ಟ್ವಿಟರ್ MD ವಿರುದ್ಧ ದೆಹಲಿ ಪೊಲೀಸರಿಗೆ ದೂರು
ಡಿಸಿಜಿಐ ಡಾ.ವಿ.ಜಿ.ಸೋಮಾನಿ ಗೆ ಪೆಟಾ ಪತ್ರ
ಈ ಕುರಿತಾಗಿ ಪೆಟಾ ಸಂಸ್ಥೆ ಡಿಸಿಜಿಐ ಡಾ.ವಿ.ಜಿ.ಸೋಮಾನಿ ಅವರನ್ನು ಉದ್ದೇಶಿಸಿ ಬರೆದ ಪತ್ರದಲಲ್ಲಿ ನವಜಾತ ಕರುಗಳ ಸೀರಮ್ (ಎನ್ಬಿಸಿಎಸ್) ಗೆ ಬದಲಾಗಿ ಕೋವಿಡ್ -19 ಲಸಿಕೆ ಉತ್ಪಾದನೆಯಲ್ಲಿ ಪ್ರಾಣಿ ಮುಕ್ತವಾದ ವಾಣಿಜ್ಯಿಕವಾಗಿ ಲಭ್ಯವಿರುವ ಮತ್ತು ರಾಸಾಯನಿಕವಾಗಿ ಪ್ರಯೋಗಾತ್ಮಕವಾಗಿ ದೃಢಪಟ್ಟ ಮೂಲಗಳನ್ನು ಬಳಸಿಕೊಳ್ಳುವಂತೆ ಲಸಿಕೆ ಉತ್ಪಾದಕರಿಗೆ ನಿರ್ದೇಶನ ನೀಡುವಂತೆ ಪೆಟಾ ಮನವಿ ಮಾಡಿಕೊಂಡಿದೆ.
ಡಿಸಿಜಿಐ ಲಸಿಕೆಯ ಉತ್ಪಾದಕರಿಗೆ ಪ್ರಾಣಿ ಮುಕ್ತ ವಿಧಾನವನ್ನು ಲಸಿಕೆ ತಯಾರಿಕೆಯನ್ನು ಬಳಸಿಕೊಳ್ಳುವಂತೆ ನಿರ್ದೇಶನ ನೀಡುತ್ತದೆ ಎಂಬ ನಂಬಿಕೆ ಪೆಟಾಗೆ ಇದೆ ಎಂದು ಕೂಡ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದು ಕರುಗಳ ಸಹಜ ಬೆಳವಣಿಗೆಗೆ ಅಡ್ಡಿ
ಈ ಕುರಿತಾಗಿ ಪ್ರತಿಕ್ರಿಯಿಸಿದ ಪೆಟಾದ ಸೈನ್ಸ್ ಪಾಲಿಸಿ ಅಡ್ವೈಸರ್ ಡಾ. ಅಂಕಿತ್ ಪಾಂಡೆ, ಸೀರಮ್ ನನ್ನು ಹೊರತೆಗೆಯುವ ಉದ್ದೇಶದಿಂದ ನವಜಾತ ಕರುಗಳನ್ನು ತಾಯಿ ಹಸುವಿನಿಂದ ಕರು ಜನಿಸಿದ ಕೆಲವೇ ಕೆಲವು ಸಮಯದ ಅಂತರದಲ್ಲೇ ಬೇರ್ಪಡಿಸಲಾಗುತ್ತದೆ. ಇದು ಅವುಗಳ ಸಹಜ ಬೆಳವಣಿಗೆಗೆ ತೊಂದರೆ ಉಂಟು ಮಾಡುತ್ತದೆ. ಮತ್ತು ಇದು ಅವುಗಳ ಸಂತತಿಗಳ ನಾಶಕ್ಕೂ ಕಾರಣವಾಗಬಹುದು ಎಂದು ಅವರು ಆತಂಕ ವ್ಯಕ್ತ ಪಡಿಸಿದ್ದಾರೆ.
ಇನ್ನು, ನವಜಾತ ಕರುವೊಂದರ ರಕ್ತದಿಂದ ಕೊವ್ಯಾಕ್ಸಿನ್ ಲಸಿಕೆಯನ್ನು ತಯಾರಿಸಲಾಗುತ್ತದೆ ಎಂಬ ಆರೋಪಗಳನ್ನು ಕೇಂದ್ರ ತಳ್ಳಿಹಾಕಿದೆ. ಕಾಂಗ್ರೆಸ್ ನ ಗೌತಮ್ ಪಾಂಧಿ, ಟ್ವಿಟರ್ ನಲ್ಲಿ ದಾಖಲೆಗಳ ಸಹಿತ ಮಾಡಿದ್ದ ಆರೋಪಕ್ಕೆ ಪ್ರತಿಯಾಗಿ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ ಜಾಲತಾಣದಲ್ಲಿ ಪ್ರಕಟನೆ ನೀಡಲಾಗಿದೆ.
ಸರ್ಕಾರ ಹೇಳಿದ್ದೇನು..?
ಲಸಿಕೆ ತಯಾರಿಕಾ ಪ್ರಕ್ರಿಯೆಯ ಮೊದಲ ಹಂತದಲ್ಲಿರುವಂತೆ ಕರುವಿನ ರಕ್ತದಿಂದ ವೆಲೋ ಜೀವಕಣ ಪಡೆದಿರುವುದು ನಿಜ. ಆದರೆ, ಅವುಗಳನ್ನು ಕೋವಿಡ್ ವೈರಾಣುಗಳು ಧ್ವಂಸ ಮಾಡಿ ಹೊರಬಂದ ಬಳಿಕ ಅವುಗಳ ಅಸ್ತಿತ್ವ ನಾಶವಾಗಿರುತ್ತದೆ. ಕೊವ್ಯಾಕ್ಸಿನ್ ತಯಾರಿಕೆಯ 3ನೇ ಹಂತದಲ್ಲಿ ಕಂಡುಬರುವ ಕೋವಿಡ್ ವೈರಾಣುಗಳಲ್ಲಿ ಕರುವಿನ ಜೀವಕಣದ ಲವಲೇಷವೂ ಇರುವುದಿಲ್ಲ. ಈ ವೈರಾಣುಗಳನ್ನು ಕೊಂದು ಅವುಗಳ ಭಾಗಶಃ ಅಂಶ ಪಡೆದು ಲಸಿಕೆ ತಯಾರಿಸಲಾಗಿದೆ ಎಂದು ಹೇಳಿದೆ.
ಇದನ್ನೂ ಓದಿ : ಮಹಾಕುಂಭಮೇಳ ಕೋವಿಡ್ 19 ಪರೀಕ್ಷೆ ಹಗರಣ: ಎಫ್ ಐಆರ್ ದಾಖಲಿಸಲು ಉತ್ತರಾಖಂಡ್ ಆದೇಶ