ಮಿತ್ರನ ರಾಜಕೀಯ ಮರುಪ್ರವೇಶಕ್ಕೆ ವೇದಿಕೆ: ರಾಮುಲು ದಿಲ್ಲಿ ಭೇಟಿಯ ಉದ್ದೇಶವೇನು?
Team Udayavani, Feb 3, 2022, 11:51 AM IST
ಬೆಂಗಳೂರು : ಸಂಪುಟ ವಿಸ್ತರಣೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಸಾರಿಗೆ ಸಚಿವ ಬಿ.ಶ್ರೀರಾಮುಲು ದಿಲ್ಲಿಗೆ ತೆರಳಿ ವರಿಷ್ಠರ ಭೇಟಿಗೆ ಪ್ರಯತ್ನ ನಡೆಸುತ್ತಿರುವುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಶ್ರೀರಾಮುಲು ಉಪಮುಖ್ಯಮಂತ್ರಿ ಸ್ಥಾನಕ್ಕೆ ಲಾಬಿ ನಡೆಸಲು ದಿಲ್ಲಿಗೆ ತೆರಳಿದ್ದಾರೋ ಅಥವಾ ಜನಾರ್ದನ ರೆಡ್ಡಿ ರಾಜಕೀಯ ಪ್ರವೇಶಕ್ಕೆ ವೇದಿಕೆ ಕಲ್ಪಿಸಲು ಭೇಟಿ ನೀಡಿದ್ದಾರೋ ? ಎಂಬ ಕುತೂಹಲ ಸೃಷ್ಟಿಯಾಗಿದೆ.
ಮೂಲಗಳ ಪ್ರಕಾರ ರಾಜಕೀಯ ಪುನರ್ ಪ್ರವೇಶಕ್ಕೆ ರೆಡ್ಡಿ ಯತ್ನಿಸುತ್ತಿದ್ದಾರೆ. ಇದಕ್ಕೆ ಹೈಕಮಾಂಡ್ ಅನುಮತಿ ನೀಡುತ್ತದೆಯೇ ಎಂಬ ಪ್ರಶ್ನೆ ಗಾಢವಾಗಿದೆ. ರಾಜ್ಯ ರಾಜಕೀಯದಲ್ಲಿ ಮತ್ತೆ ಬಳ್ಳಾರಿ ರಾಜಕೀಯ ಸಂಚಲನ ಮೂಡಿಸಿದೆ.
ಬಳ್ಳಾರಿಯಲ್ಲಿ ರಹಸ್ಯ ಸಭೆ ಮಾಡಿರುವ ಜನಾರ್ದನ ರೆಡ್ಡಿ ಆಪ್ತ ಸ್ನೇಹಿತ ಶ್ರೀರಾಮುಲು ಮೂಲಕ ಹೈಕಮಾಂಡ್ ಮನವೊಲಿಕೆಗೆ ಯತ್ನ ಮಾಡಿರುವ ವಿಚಾರ ತಿಳಿದು ಬಂದಿದೆ. ಬಿಜೆಪಿಗೆ ಬರಲು ರೆಡ್ಡಿ ಆಸಕ್ತಿ ತೋರಿದರೂ ಸಕ್ರಿಯ ರಾಜಕೀಯಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡುವುದು ಅನುಮಾನ ಎನ್ನಲಾಗುತ್ತಿದೆ. ರಾಮುಲು ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿಯಾಗಿದ್ದು, ಬಿಜೆಪಿ ವರಿಷ್ಠರ ಭೇಟಿಗೂ ಶ್ರೀರಾಮುಲು ಸಮಯ ಕೇಳಿದ್ದಾರೆ. ಶ್ರೀರಾಮುಲು ದೆಹಲಿ ಪ್ರವಾಸ ಕುತೂಹಲ ಮೂಡಿಸಿದೆ.