ರಾಯಚೂರು ಸಿಡಿಲು ಬಡಿದು ನಾಲ್ಕು ಜಾನುವಾರು ಸಾವು
Team Udayavani, May 27, 2020, 11:13 AM IST
ರಾಯಚೂರು: ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಬಿರುಗಾಳಿ ಸಹಿತ ಮಳೆಗೆ ಸಾಕಷ್ಟು ಅವಾಂತರ ಸೃಷ್ಟಿಯಾಗಿದ್ದು, ತಾಲೂಕಿನ ಅರಸಿಗೇರಾ ಗ್ರಾಮದಲ್ಲಿ ಸಿಡಿಲು ಬಡಿದು ನಾಲ್ಕು ಜಾನುವಾರು ಸಾವನ್ನಪ್ಪಿವೆ. ರೈತ ಶೇಖರಯ್ಯ ಎನ್ನುವವರಿಗೆ ಸೇರಿದ ಎರಡು ಎತ್ತು ಒಂದು ದನ ಮತ್ತು ಆಕಳು ಸಿಡಿಲಿಗೆ ಬಲಿಯಾಗಿವೆ. ಜಮೀನಿನಲ್ಲಿ ಜೋಪಡಿ ಹಾಕಿ ಅಲ್ಲಿಯೇ ಜಾನುವಾರುಗಳನ್ನು ಕಟ್ಟಿ ಹಾಕಲಾಗಿತ್ತು.
ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದ್ದು, ಜೀವನಕ್ಕೆ ಆಸರೆಯಾಗಿದ್ದ ಜಾನುವಾರು ಮೃತಪಟ್ಟಿರುವುದು ರೈತನಿಗೆ ಸಂಕಷ್ಟಕ್ಕೀಡು ಮಾಡಿದೆ. ಇನ್ನು ರಾತ್ರಿ ಬೀಸಿದ ಭಾರೀ ಗಾಳಿಗೆ ಜಿಲ್ಲೆಯಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ. ನಗರದ ಇಂಜಿನಿಯರ್ ಕಾಲನಿಯಲ್ಲಿ ವಿದ್ಯುತ್ ವೈಯರ್ ಗಳು ಒಂದಕ್ಕೊಂದು ಸ್ಪರ್ಶಗೊಂಡರೆ, ತಾಲೂಕಿನ ಶಕ್ತಿನಗರದ ಯಾದವ ಕಾಲನಿಯಲ್ಲಿ ಮರ ಗಿಡಗಳು ಧರೆಗುರುಳಿವೆ, ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಂಬಗಳು ನೆಲಕಚ್ಚಿವೆ. ವಿದ್ಯುತ್ ವ್ಯತ್ಯಯವಾಗಿದೆ.