ವರ್ಗಾವಣೆ ಬೆನ್ನಲ್ಲೇ ಸಿಎಂ ಭೇಟಿಗೆ ದೌಡಾಯಿಸಿದ ರೋಹಿಣಿ ಸಿಂಧೂರಿ
Team Udayavani, Jun 6, 2021, 10:46 AM IST
ಬೆಂಗಳೂರು: ಮೈಸೂರಿನ ಇಬ್ಬರು ಐಎಎಸ್ ಅಧಿಕಾರಿಗಳ ಗಲಾಟೆ ಈಗ ಮತ್ತೊಂದು ಸ್ವರೂಪ ಪಡೆದಿದೆ. ಜಿಲ್ಲಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಮತ್ತು ಪಾಲಿಕೆ ಆಯಕ್ತೆಯಾಗಿದ್ದ ಶಿಲ್ಪಾ ನಾಗ್ ಅವರನ್ನು ಕಳೆದ ಶನಿವಾರ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಆದರೆ ರೋಹಿಣಿ ಸಿಂಧೂರಿ ಅವರು ಇಂದು ಮುಂಜಾನೆ ಬೆಂಗಳೂರಿಗೆ ಆಗಮಿಸಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು.
ಸಿಎಂ ಸರ್ಕಾರಿ ನಿವಾಸ ಕಾವೇರಿಗೆ ನಿವಾಸಕ್ಕೆ ಇಂದು ಬೆಳಗ್ಗೆ ತಮ್ಮ ಖಾಸಗಿ ವಾಹನದಲ್ಲಿ ಆಗಮಿಸಿದ ರೋಹಿಣಿ ಸಿಂಧೂರಿ ಅವರು ಸಿಎಂ ರನ್ನು ಭೇಟಿಯಾಗಿ ವರ್ಗವಾಣೆ ಆದೇಶವನ್ನು ಹಿಂಪಡೆಯುವಂತೆ ಮನವಿ ಮಾಡಿದ್ದಾರೆ. ಪ್ರಕರಣದಲ್ಲಿ ತನ್ನದೇನು ತಪ್ಪಿಲ್ಲ, ವರ್ಗಾವಣೆಯಾದರೆ ತನ್ನದೇ ತಪ್ಪು ಎಂದು ಬಿಂಬಿಸಿದಂತಾಗುತ್ತದೆ ಎಂದು ರೋಹಿಣಿ ಸಿಂಧೂರಿಯವರು ಹೇಳಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಕನ್ನಡ, ಕರ್ನಾಟಕಕ್ಕೆ ಅಪಚಾರ ಮಾಡಲು ಪಟ್ಟಭದ್ರ ಹಿತಾಸಕ್ತಿ ಕೆಲಸ ಮಾಡುತ್ತಿವೆ:ಎಚ್ ಡಿಕೆ ಕಿಡಿ
ರೋಹಿಣಿ ಸಿಂಧೂರಿಯವರು ಸುಮಾರು ಅರ್ಧ ಗಂಟೆಗಳ ಕಾಲ ಸಿಎಂ ನಿವಾಸದಲ್ಲಿದ್ದರು. ಆದರೆ ಯಾವುದೇ ಕಾರಣಕ್ಕೂ ವರ್ಗಾವಣೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ಸಿಎಂ ಬಿಎಸ್ ವೈ ಹೇಳಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ನಿರಾಸೆಯಿಂದಲೇ ರೋಹಿಣಿ ಸಿಂಧೂರಿ ಸಿಎಂ ನಿವಾಸದಿಂದ ತೆರಳಿದ್ದಾರೆ.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಹಿಂದೂ ಮತ್ತು ಧಾರ್ಮಿಕ ದತ್ತಿ ಇಲಾಖೆಗೆ ವರ್ಗಾವಣೆ ಮಾಡಲಾಗಿದ್ದರೆ, ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರನ್ನು ಗ್ರಾಮೀಣಾಭಿವೃದ್ದಿ ಇಲಾಖೆಯ ಇ ಆಡಳಿತದ ನಿರ್ದೇಶಕಿಯಾಗಿ ವರ್ಗ ಮಾಡಲಾಗಿದೆ. ಡಾ. ಬಗಾದಿ ಗೌತಮ್ ಅವರಿಗೆ ಮೈಸೂರು ಜಿಲ್ಲಾಧಿಕಾರಿ ಹೊಣೆ ಮತ್ತು ಲಕ್ಷ್ಮಕಾಂತ್ ರೆಡ್ಡಿ ಅವರನ್ನು ಪಾಲಿಕೆಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.