ಸಂಗೊಳ್ಳಿ ರಾಯಣ್ಣ ಪ್ರತಿಮೆ ಗೆಜೆಟ್ ನೋಟಿಫಿಕೇಶನ್ಗೆ ಕ್ರಮ: ರಮೇಶ್
Team Udayavani, Aug 30, 2020, 6:00 AM IST
ಬೆಳಗಾವಿ: ಪೀರನವಾಡಿಯಲ್ಲಿ ಉಲ್ಬಣಿಸಿದ್ದ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ವಿವಾದ ಸುಖಾಂತ್ಯ ಕಂಡಿದ್ದು, ಈ ಕುರಿತು ಗೆಜೆಟ್ ನೋಟಿಫಿಕೇಶನ್ ಹೊರಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಶಿವಾಜಿ ಮಹಾರಾಜರು ಹಾಗೂ ರಾಯಣ್ಣ ಅವರು ಜಾತಿಗೆ ಸೀಮಿತರಲ್ಲ. ಇವರಿಬ್ಬರೂ ನಮ್ಮ ಸಮಾಜದ ಆಸ್ತಿ. ಇಂಥ ವೀರ ಪುರುಷರಿಗೆ ಅವಮಾನ ಆಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು.
ಮರಾಠಿಗರು ಸೌಹಾರ್ದದಿಂದ ಬಾಳಲು ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಇಲ್ಲಿನ ಮರಾಠಿಗರು ಹೊರಗಿನವರಲ್ಲ. ಮರಾಠಿ ಭಾಷಿಕ ಕನ್ನಡಿಗರು. ಹೀಗಾಗಿ ಭಾಷೆ, ಜಾತಿಯ ಜಗಳಗಳು ನಮ್ಮ ನಡುವೆ ಇಲ್ಲ. ಸೌಹಾರ್ದದಿಂದ ಬಾಳಲು ಬದ್ಧರಾಗಿದ್ದೇವೆ ಎಂದರು.
ಕನ್ನಡ ಸಂಘಟನೆಯವರ ಮೇಲಿನ ಪ್ರಕರಣಗಳ ಕುರಿತು ಮುಖ್ಯಮಂತ್ರಿ ಜತೆಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಇಂಥ ವಿಷಯಗಳ ಬಗ್ಗೆ ನಾನೊಬ್ಬನೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಪ್ರಕರಣ ಹಿಂಪಡೆ ಯುವಂತೆ ಸಿಎಂಗೆ ಮನವಿ ಮಾಡುವುದಾಗಿ ಹೇಳಿದರು.
ಜಾರಕಿಹೊಳಿಗೆ ಈಶ್ವರಪ್ಪ ಅಭಿನಂದನೆ
ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ವಿವಾದ ಸುಖಾಂತ್ಯ ಕಂಡಿದ್ದರಿಂದ ಶನಿವಾರ ನಗರಕ್ಕೆ ಆಗಮಿಸಿದ್ದ ಸಚಿವ ಕೆ.ಎಸ್. ಈಶ್ವರಪ್ಪ ಅವರು ಸಚಿವ ರಮೇಶ ಜಾರಕಿಹೊಳಿ ಅವರ ಕೈ ಕುಲುಕಿ, ಬೆನ್ನು ತಟ್ಟಿ ಅಭಿನಂದಿಸಿದರು.
ಸಂಧಾನ ಸಭೆಯಲ್ಲಿ ಎರಡೂ ಕಡೆಯವರು ಒಪ್ಪಿಗೆ ಸೂಚಿಸಿದ್ದರಿಂದ ಸಚಿವ ರಮೇಶ ಜಾರಕಿಹೊಳಿ ಅವರನ್ನು ಆಲಂಗಿಸಿದ ಈಶ್ವರಪ್ಪ ಅಭಿನಂದನೆ ಸಲ್ಲಿಸಿದರು. ರಾಯಣ್ಣ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಆಶೀರ್ವಾದ ನಿಮ್ಮ ಮೇಲಿರಲಿ ಎಂದು ಹಾರೈಸಿದರು.
ಸಚಿವತ್ರಯರಿಂದ ಮಾಲಾರ್ಪಣೆ
ಬೆಳಗಾವಿ, ಆ. 29: ರಾಯಣ್ಣ ಹಾಗೂ ಶಿವಾಜಿ ಪ್ರತಿಮೆ ಸಂಘರ್ಷ ಸುಖಾಂತ್ಯ ಕಾಣುತ್ತಿದ್ದಂತೆ, ಸಚಿವ ತ್ರಯರು ಎರಡೂ ಪ್ರತಿಮೆಗಳಿಗೆ ಗೌರವ ಸಲ್ಲಿಸಿದರು.
ನಗರಕ್ಕೆ ಭೇಟಿ ನೀಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವ ಕೆ. ಎಸ್. ಈಶ್ವರಪ್ಪ ಹಾಗೂ ಅಬಕಾರಿ ಸಚಿವ ಎನ್. ನಾಗೇಶ್ ಅವರು ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರೊಂದಿಗೆ ಶುಕ್ರವಾರ ಪೀರನವಾಡಿಗೆ ಭೇಟಿ ನೀಡಿ ಉಭಯ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು.