ಎಸ್ಡಿಪಿಐ ಬಿಜೆಪಿಯ “ಬಿ’ ಟೀಂ; ದಿನೇಶ್ ಗುಂಡೂರಾವ್ ತಿರುಗೇಟು
Team Udayavani, May 29, 2022, 9:40 PM IST
ಬೆಂಗಳೂರು: ಮುಸ್ಲಿಮರನ್ನು ವಿಭಜಿಸಿ, ಚುನಾವಣೆಯಲ್ಲಿ ತಮಗೆ ಅನುಕೂಲ ಮಾಡಿಕೊಡುತ್ತಿರುವ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಮತ್ತು ಓವೈಸಿಯ ಎಐಎಂಐಎಂ ಬಿಜೆಪಿಯ “ಬಿ’ ಟೀಂ ಆಗಿದೆ ಎಂದು ಎಐಸಿಸಿ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಎಸ್ಡಿಪಿಐ ಕಾಂಗ್ರೆಸ್ ಕೂಸು ಎಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಹೇಳಿಕೆಗೆ ಸರಣಿ ಟ್ವೀಟ್ ಮೂಲಕ ತಿರುಗೇಟು ನೀಡಿದ ಅವರು, “ಸಚಿವ ಪ್ರಹ್ಲಾದ್ ಜೋಶಿ ಯಾರ ಕಿವಿಗೆ ಹೂವು ಮುಡಿಸುತ್ತಿದ್ದಾರೆ? ಮುಸ್ಲಿಮರ ಮತ ವಿಭಜಿಸಿ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲ ಮಾಡಿಕೊಡುತ್ತಿರುವ ಎಸ್ಡಿಪಿಐ ಕಾಂಗ್ರೆಸ್ ಕೂಸು ಆಗಲು ಸಾಧ್ಯವೇ? ಅದು ಬಿಜೆಪಿಯ “ಬಿ’ ಟೀಂ ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ. ಈ ಬಗ್ಗೆ ಜೋಶಿಯವರು ಎದೆ ತಟ್ಟಿ ಹೇಳುತ್ತಾರೆಯೇ ಎಂದು ತಿರುಗೇಟು ನೀಡಿದ್ದಾರೆ.
ಪ್ರಹ್ಲಾದ್ ಜೋಶಿ ಅವರು ಗಾಳಿಯಲ್ಲಿ ಗುಂಡು ಹಾರಿಸುವ ಬದಲು ಎಸ್ಡಿಪಿಐ, ಓವೈಸಿಯ ಎಐಎಂಐಎಂ ಹಾಗೂ ನಾಗ್ಪುರ ನಡುವಿನ ಕನೆಕ್ಷನ್ ಏನು ಎಂಬುದನ್ನು ತಿಳಿಸಲಿ.
ಆರೆಸ್ಸೆಸ್ ಕೃಪಾಪೋಷಿತ ನಾಟಕ ಮಂಡಳಿಯಲ್ಲಿ ಎಸ್ಡಿಪಿಐ ಪಾತ್ರವೇನು? ಓವೈಸಿ ಪಾತ್ರ ಏನು ಎಂಬುದನ್ನು ದೇಶ ತಿಳಿಯಲಿ. ಈ ಸಂಘಟನೆಗಳಿಗೆ ನಾಗ್ಪುರದ ಕನೆಕ್ಷನ್ ಇಲ್ಲದಿದ್ದರೆ ಕೂಡಲೇ ಎಸ್ಡಿಪಿಐ ನಿಷೇಧಿಸಲಿ ಎಂದವರು ಸವಾಲು ಹಾಕಿದರು.