ಪಕ್ಷಾಂತರ ಪಕ್ಕಾ?:ಶಾಸಕರು ಸಂಪರ್ಕದಲ್ಲಿರುವುದು ಸತ್ಯ ಎಂದ ಸಿದ್ದರಾಮಯ್ಯ
ಸಿಎಂ ಬೊಮ್ಮಾಯಿ ತಿರುಗೇಟು
Team Udayavani, Jan 25, 2022, 12:32 PM IST
ಬೆಂಗಳೂರು : ಬಿಜೆಪಿ ಹಾಗೂ ಜೆಡಿ ಎಸ್ ಶಾಸಕರು ತಮ್ಮಜತೆ ಸಂಪರ್ಕದಲ್ಲಿರುವುದು ಸತ್ಯ. ಆದರೆ ಅವರ ಹೆಸರನ್ನು ಬಹಿರಂಗಗೊಳಿಸಲು ಸಾಧ್ಯವೇ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮಂಗಳವಾರ ಹೇಳಿದ್ದಾರೆ.
ಬಿಜೆಪಿಯ ಕೆಲ ಸಚಿವರು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಜತೆಗೆ ಸಂಪರ್ಕ ದಲ್ಲಿದ್ದಾರೆ. ಸೀಟ್ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ ಹೇಳಿಕೆ ನೀಡಿದ ಬೆನ್ನಲ್ಲೇ ಸಿದ್ದರಾಮಯ್ಯ ಅವರ ಮಾತಿಗೆ ಈಗ ಮಹತ್ವ ಲಭಿಸಿದೆ.
ಷರತ್ತುಗಳಿಲ್ಲದೆ ಪಕ್ಷಕ್ಕೆ ಬರಬೇಕು. ನಮಗೆ ಸಿದ್ಧಾಂತ ಒಪ್ಪುವವರು ಬೇಕು. ಸಿದ್ಧಾಂತ, ನಾಯಕತ್ವ ಒಪ್ಪಿ ಬಂದರೆ ಸ್ವಾಗತ ಎಂದು ಬಾದಾಮಿಯಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ : ತೀವ್ರವಾದ ಉಸ್ತುವಾರಿ ವಿವಾದ: ‘ಪಕ್ಷದ ರಾಜಕೀಯ ನೀತಿ’ ಎಂದ ಸಿಎಂ ಬೊಮ್ಮಾಯಿ
ಎರಡು ಪಕ್ಷದ ಮುಖಂಡರು ನಮ್ಮಜತೆ ಸಂಪರ್ಕದಲ್ಲಿರುವುದು ಸತ್ಯ. ಆದರೆ ಅವರುಗಳ ಹೆಸರನ್ನು ಈ ಹಂತದಲ್ಲಿ ಬಹಿರಂಗಗೊಳಿಸುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸಿಎಂ ಬೊಮ್ಮಾಯಿ ತಿರುಗೇಟು
ಕಾಂಗ್ರೆಸ್ ಗೆ ಎಷ್ಟು ಅಭದ್ರತೆ ಕಾಡುತ್ತಿದೆ ಅಂತ ಗೊತ್ತಾಗುತ್ತಿದೆ.ಇಬ್ಬರು ನಾಯಕರ ನಡುವೆ ಫೈಟ್ ಇದೆ. ನನ್ನ ಜೊತೆ ಅವರು ಇದ್ದಾರೆ ,ನಿನ್ನ ಜೊತೆ ಇನ್ನೊಬ್ಬರು ಇದ್ದಾರೆ ಅಂತ ಹೇಳ್ತಿದ್ದಾರೆ. ಬಿಜೆಪಿಯಿಂದ ಯಾರು ಹೋಗುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಬೇಡ ಅಂತ ಹೇಳಿ ಈ ಕಡೆ ಬಂದಿದ್ದಾರೆ, ಆ ಕಡೆ ಹೋಗುವ ಪ್ರಶ್ನೆ ಎಲ್ಲಿಂದ ಎಂದು ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ಅದರ ಪರಿಣಾಮ ವನ್ನ ನೀವೇ ಮುಂದೆ ನೋಡುತ್ತೀರಿ. ಕೆಲವೇ ದಿನಗಳಲ್ಲಿ ಬಿಜೆಪಿ ಯಾವ ರೀತಿ ಬಲವರ್ಧನೆ ಆಗುತ್ತದೆ ಅಂತ ಕಾಯಿರಿ ಎಂದು ಸಿಎಂ ತಿರುಗೇಟು ನೀಡಿದ್ದಾರೆ.
ಸಂಪುಟ ವಿಸ್ತರಣೆ ಸಂಬಂಧ ಹೇಳಿಕೆ ನೀಡಿದ್ದ ಯತ್ನಾಳ್, ಉತ್ತರ ಪ್ರದೇಶದ ರೀತಿಯಲ್ಲಿ ವಲಸಿಗರು ಅಧಿಕಾರಕ್ಕಾಗಿ ಬಿಜೆಪಿಗೆ ಬಂದಿದ್ದಾರೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜೀನಾಮೆ ಕೊಟ್ಟು ಹೋಗುತ್ತಾರೆ. ಹೀಗಾಗಿ ಈಗಲೇ ಬದಲಾವಣೆ ಮಾಡುವಂತೆ ಆಗ್ರಹಿಸಿದ್ದರು.