ಸಿದ್ದರಾಮೋತ್ಸವದಿಂದ ಬಿಜೆಪಿಗೆ ನಡುಕ: ಎಂ.ಬಿ.ಪಾಟೀಲ್
ಸಚಿವರು ಇರುವುದು ಯಾಕೆ? ನೆರೆ ಪ್ರದೇಶಕ್ಕೆ ಹೋಗಿ
Team Udayavani, Jul 11, 2022, 2:52 PM IST
ಬೆಂಗಳೂರು: ‘ಸಿದ್ದರಾಮೋತ್ಸವದಿಂದ ಬಿಜೆಪಿಗೆ ಭಯ ಶುರುವಾಗಿದ್ದು,ಎಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಸೇರುತ್ತಾರೆ ಎಂದು ನಡುಕ ಆರಂಭವಾಗಿರಬೇಕು.ಸಿದ್ದರಾಮಯ್ಯ ಪ್ರಭಾವ ಎಷ್ಟಿದೆ ಎಂದು ನಳಿನ್ ಕುಮಾರ್ ಕಟೀಲ್ ಕಾದು ನೋಡಲಿ, ಆಮೇಲೆ ಮಾತನಾಡಲಿ’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಸವಾಲು ಹಾಕಿದ್ದಾರೆ.
ಸಿದ್ದರಾಮೋತ್ಸವದಿಂದ ಕಾಂಗ್ರೆಸ್ ಇಬ್ಬಾಗ ಎಂಬ ಬಿಜೆಪಿ ಟೀಕೆ ವಿಚಾರಕ್ಕೆ ಟಾಂಗ್ ಕೊಟ್ಟ ಎಂ.ಬಿ.ಪಾಟೀಲ್, ಯಾವುದೇ ಒಬ್ಬ ವ್ಯಕ್ತಿಯ 50-75-100 ನೇ ಶತಾಬ್ದಿ ಎಲ್ಲವೂ ಮೈಲಿಗಲ್ಲು.ಸಾಮಾನ್ಯ ರೈತ ಕುಟುಂಬದಿಂದ ಬಂದು ಸಿಎಂ ಆಗಿದ್ದು, ಹಣಕಾಸು ಮಂತ್ರಿ ಆಗಿದ್ದು ಐತಿಹಾಸಿಕ, ಸಿದ್ದರಾಮಯ್ಯ ಒಬ್ಬ ಜನ ನಾಯಕ. ಅಮೃತ ಮಹೋತ್ಸವ ವನ್ನು ಜನರು ಬೆಂಬಲಿಗರು ಮಾಡುತ್ತಿರುವುದರಲ್ಲಿ ತಪ್ಪಿದೆಯಾ ಎಂದರು.
ಸರ್ಕಾರದ ವಿರುದ್ದ ಕಿಡಿ
ಯಾವ ಸಚಿವರೂ ನೆರೆ ಪ್ರದೇಶಕ್ಕೆ ಹೋಗಿದ್ದು ನೋಡಿಲ್ಲ, ಬರೀ ಕಾಟಾಚಾರಕ್ಕೆ ಹೇಳಿಕೆ ಕೊಡುತ್ತಾರೆ.ಬಿಜೆಪಿ ಸರ್ಕಾರ ಸಿಎಂ ಮಂತ್ರಿಗಳಿಗೆ ಜನರ ಬಗ್ಗೆ ಇರೋ ಬದ್ದತೆ ತೋರಿಸುತ್ತದೆ.ಮಳೆ ಆಗುವ ಸಮಯದಲ್ಲಿ ಯಾರೂ ಪ್ರವಾಸ ಮಾಡುತ್ತಿಲ್ಲ. ಸಂಬಂಧಿಸಿದ ಸಚಿವರು ಇರುವುದು ಯಾಕೆ? ಜನರ ನೆರವಿಗೆ ಬರಬೇಕು ಇವರು,ಬರೇ ಆ ಸಂದರ್ಭದಲ್ಲಿ ಅಷ್ಟು ಕೊಡುತ್ತೇವೆ, ಇಷ್ಡು ಕೊಡುತ್ತೇವೆ ಅಂತಾರೆ. ಕೃಷ್ಣ ನದಿ ಪಾತ್ರದಲ್ಲಿ ಮತ್ತೆ ಪ್ರವಾಹ ಭೀತಿ ಶುರುವಾಗಿದೆ. ಹಿಂದೆ ಆಗಿದ್ದಕ್ಕೂ ಯಾವ ಪರಿಹಾರ ಕೊಟ್ಟಿಲ್ಲ. ಜನರು ತತ್ತರಿಸಿ ಹೋಗಿದ್ದಾರೆ. ಜನರಿಗೆ ಏನೂ ಸಹಾಯ ಆಗಿಲ್ಲ ಬೇಕಿದ್ದರೆ ಫ್ಯಾಕ್ಟ್ ಚೆಕ್ ಮಾಡಿ. ಗಂಜಿ ಕೇಂದ್ರ ಆಗಿದ್ದು ಬಿಟ್ಟರೆ ಏನೂ ಆಗಿಲ್ಲ. ಇಂಥ ಸಂದರ್ಭದಲ್ಲಿ ನೀವು ಹೋಗದಿದ್ದರೆ ಇನ್ನು ಯಾವಾಗ ಹೋಗುತ್ತೀರಿ ಎಂದು ಸಚಿವರನ್ನು ಪ್ರಶ್ನಿಸಿದರು.