ಶ್ರೀಕೃಷ್ಣಮಠ ಪಾರ್ಕಿಂಗ್ ಪ್ರದೇಶ : ಗೂಡಂಗಡಿಗಳಿಗೆ ವ್ಯವಸ್ಥಿತ ರೂಪ ಕೊಡುವ ಯತ್ನ
Team Udayavani, Mar 1, 2021, 5:40 AM IST
ಉಡುಪಿ: ಶ್ರೀಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ಇದ್ದ ಗೂಡಂಗಡಿಗಳಿಗೆ ಏಕರೂಪತೆ ಕೊಡುವ ಪ್ರಯತ್ನ ನಡೆಯುತ್ತಿದೆ.
ಇಲ್ಲಿ 14 ಚಿಕ್ಕ ಅಂಗಡಿಗಳು ಜೋಪಡಿ ಗಳಂತೆ ಇದ್ದವು. ಎಲ್ಲ ಅಂಗಡಿಗಳೂ ಒಂದೇ ರೀತಿ ಇದ್ದರೆ ಉತ್ತಮವಾಗಿ ತೋರುತ್ತದೆ. ಬಂದ ಪ್ರವಾಸಿಗರಿಗೂ ಉತ್ತಮ ಗುಣಮಟ್ಟದ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂಬ ಕಾರಣಕ್ಕೆ ಶ್ರೀಕೃಷ್ಣಮಠ ಪರಿಸರ ಪ್ರತಿಷ್ಠಾನ ಹೊಸ ಏಕರೂಪಿ ಅಂಗಡಿಗಳನ್ನು ನಿರ್ಮಿಸಿ ಕೊಡಲು ನಿರ್ಧರಿಸಿದೆ.
ಇಲ್ಲಿ ವಿವಿಧ ಪಾನೀಯ, ಹಣ್ಣು, ತಿನಿಸುಗಳ ಅಂಗಡಿಗಳಿವೆ. ಪುನಾರಚಿತ ಅಂಗಡಿಗಳಿಗೆ ವಿದ್ಯುತ್, ನೀರಿನ ಸಂಪರ್ಕವನ್ನು ಕಲ್ಪಿಸುವುದಿಲ್ಲ. ಇದುವರೆಗೆ ಇವರು ದಿನಕ್ಕೆ 100 ರೂ. ಬಾಡಿಗೆ ಕೊಡುತ್ತಿದ್ದರೆ, ಮುಂದೆ 150 ರೂ. ನಿಗದಿಪಡಿಸಿದ್ದಾರೆ. ಸುಮಾರು ಒಂದು ತಿಂಗಳಿಂದ ಕೆಲಸ ನಡೆಯುತ್ತಿದ್ದು ಹತ್ತು ದಿನಗಳ ಹಿಂದೆ ಕೆಲವರು ನಗರಸಭೆಗೆ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ದೂರು ನೀಡಿದ ಕಾರಣ ನಗರಸಭೆಯವರು ಕಾಮಗಾರಿಯನ್ನು ನಿಲ್ಲಿಸಿದ್ದಾರೆ. ಈ ವಿಷಯ ನಗರಸಭೆ ಅಧಿವೇಶನದಲ್ಲಿಯೂ ಪ್ರಸ್ತಾವಗೊಂಡಿತು. ಇದರ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸಲಾಗಿದೆ ಎಂದು ನಗರಸಭಾಧ್ಯಕ್ಷರು ತಿಳಿಸಿದ್ದರು.
“ಈ ವ್ಯಾಪಾರಸ್ಥರೆಲ್ಲ ಮನಸೋ ಇಚ್ಛೆ ಅಂಗಡಿ ಕಟ್ಟಿಕೊಂಡಿದ್ದರು. ಇದು ಶ್ರೀಕೃಷ್ಣಮಠಕ್ಕೂ ಶೋಭೆ ತರುವುದಿಲ್ಲ. ಇದನ್ನು ವ್ಯವಸ್ಥಿತಗೊಳಿಸಬೇಕೆಂದು ಪರಿಸರ ಪ್ರತಿಷ್ಠಾನದವರು ನಿರ್ಧರಿಸಿ ಮುಂದಡಿ ಇಟ್ಟಿದ್ದಾರೆ. ಇದು ಉತ್ತಮ ಬೆಳವಣಿಗೆ. ನಾವು ಈಗಾಗಲೇ ಅಲ್ಲಿದ್ದ ವ್ಯಾಪಾರಸ್ಥರೆಲ್ಲರನ್ನು ಮಂಗಳವಾರ ನಗರಸಭೆ ಕಚೇರಿಗೆ ಕರೆದುಕೊಂಡು ಹೋಗಿ ಅನುಮತಿ ಕೋರಿ ಅರ್ಜಿ ಸಲ್ಲಿಸಲಿದ್ದೇವೆ’ ಎಂದು ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವ ಸಲಹೆಗಾರ ರಾಧಾಕೃಷ್ಣ ಶೆಟ್ಟಿ ತಿಳಿಸಿದ್ದಾರೆ.