ಗೋ ಹತ್ಯೆ ನಿಷೇಧ ಕಾಯ್ದೆ ಕಟ್ಟುನಿಟ್ಟಿನ ಜಾರಿ: ಸಚಿವ ಪ್ರಭು ಚೌಹಾಣ್
Team Udayavani, Dec 4, 2022, 6:40 AM IST
ಬೆಂಗಳೂರು: ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ನಂತರ ಕಸಾಯಿಖಾನೆಗೆ ಹೋಗುವ ಗೋವುಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಹತ್ಯೆ ನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದ್ದೇವೆ. ಗೋ ಸಂತತಿ ಉಳಿವಿಗಾಗಿ ಗೋ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಡಿಸೆಂಬರ್ ವೇಳೆಗೆ 30 ಗೋ ಶಾಲೆಗಳು ಪ್ರಾರಂಭವಾಗಲಿವೆ. ಈಗಾಗಲೇ 12 ಗೋಶಾಲೆ ಸಿದ್ಧವಾಗಿದೆ ಎಂದು ತಿಳಿಸಿದರು.
ಗೋಹತ್ಯೆ ನಿಷೇಧದಿಂದ ಚರ್ಮ ಉದ್ಯಮಕ್ಕೆ ತೊಂದರೆಯಾಗಿದೆ ಎಂಬುದು ಸುಳ್ಳು. ಚರ್ಮ ಉದ್ಯಮ ಕರ್ನಾಟಕವನ್ನಷ್ಟೇ ನೆಚ್ಚಿಕೊಂಡಿಲ್ಲ ಎಂದು ಹೇಳಿದರು.
ಮೇವು ಖರೀದಿ ಹಗರಣ ಎಂದು ಸುಳ್ಳು ಹೇಳಲಾಗುತ್ತಿದೆ. ಅದು ಆಗಿರುವುದು ಸಮ್ಮಿಶ್ರ ಸರ್ಕಾರದಲ್ಲಿ. ನಾನು ಸಚಿವನಾದ ನಂತರ ಒಂದೇ ಒಂದು ಹಗರಣ ನಡೆದಿರುವ ದಾಖಲೆ ತೋರಿಸಲಿ ಎಂದು ಸವಾಲು ಹಾಕಿದರು.
ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರು ನನ್ನ ಮುಂದೆ ಗೋವು ಕಡಿದು ಸೇವನೆ ಮಾಡಿದರೂ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗುವುದು. ಅವರು ಅಧಿಕಾರಕ್ಕೆ ಬಂದರೆ ಗೊ ಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯುತ್ತೇವೆ ಅಂತಾರೆ, ಬಂದು ಪಡೆಯಲಿ ನೋಡೋಣ ಎಂದು ಹೇಳಿದರು.
12,89 ಲಕ್ಷ ರಾಸುಗಳಿಗೆ ಲಸಿಕೆ
ರಾಜ್ಯದಲ್ಲಿ 13,732 ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, 12,89 ಲಕ್ಷ ರಾಸುಗಳಿಗೆ ಲಸಿಕೆ ಹಾಕಲಾಗಿದೆ. 19.21 ಲಕ್ಷ ಡೋಸ್ ಲಸಿಕೆ ಬೇಡಿಕೆಯಿದ್ದು 11.92 ಲಕ್ಷ ದಾಸ್ತಾನು ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪುಣ್ಯ ಕೋಟಿ ದತ್ತು ಯೋಜನೆಗೆ ಉತ್ತಮ ಸ್ಪಂದನೆ ದೊರೆತಿದೆ. 2600 ಮಂದಿ ಮುಂದೆ ಬಂದಿದ್ದಾರೆ. 17 ಲಕ್ಷ ರೂ. ಸಂಗ್ರಹವಾಗಿದೆ. 200 ಗೋವು ದತ್ತು ಪಡೆಯಲಾಗಿದೆ. 212 ಖಾಸಗಿ ಗೋ ಶಾಲೆಗಳು ನೋಂದಣಿಯಾಗಿದ್ದು 177 ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ. 25496 ಗೋವುಗಳಿಗೆ ಆಶ್ರಯ ನೀಡಲಾಗಿದೆ.
– ಪ್ರಭು ಚೌಹಾಣ್ ಸಚಿವ