“ಕೈ” ಜತೆ ವಿಲೀನ: ಸುಪ್ರೀಂಕೋರ್ಟ್ ನಲ್ಲಿ 6 ಬಿಎಸ್ಪಿ ಶಾಸಕರ ಅರ್ಜಿ ವಿಚಾರಣೆ
ಬಿಎಸ್ಪಿ ಶಾಸಕರನ್ನು ಅನರ್ಹಗೊಳಿಸಬೇಕು ಎಂಬ ಮನವಿಯನ್ನು ರಾಜಸ್ಥಾನ ಸ್ಪೀಕರ್ ಸಿಪಿ ಜೋಶಿ ಜುಲೈ 29ರಂದು ತಿರಸ್ಕರಿಸಿದ್ದರು.
Team Udayavani, Aug 11, 2020, 8:22 AM IST
ನವದೆಹಲಿ:ತಮ್ಮ ಅನರ್ಹತೆ ಪ್ರಕರಣದ ಅರ್ಜಿಯನ್ನು ರಾಜಸ್ಥಾನ ಹೈಕೋರ್ಟ್ ನಿಂದ ಸುಪ್ರೀಂಕೋರ್ಟ್ ಗೆ ವರ್ಗಾಯಿಸಬೇಕೆಂದು ಕೋರಿ ಆರು ಮಂದಿ ಮಾಜಿ ಬಿಎಸ್ಪಿ ಶಾಸಕರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಮಂಗಳವಾರ (ಆಗಸ್ಟ್ 11-2020) ಸುಪ್ರೀಂಕೋರ್ಟ್ ನಲ್ಲಿ ನಡೆಯಲಿದೆ.
2019ರಲ್ಲಿ ಆರು ಮಂದಿ ಬಹುಜನ ಸಮಾಜವಾದಿ ಪಕ್ಷದ ಶಾಸಕರು ಕಾಂಗ್ರೆಸ್ ಪಕ್ಷದ ಜತೆ ವಿಲೀನಗೊಂಡಿದ್ದರು. ಏತನ್ಮಧ್ಯೆ ಆರು ಮಂದಿ ಬಿಎಸ್ಪಿ ಶಾಸಕರು ಕಾಂಗ್ರೆಸ್ ಪಕ್ಷದ ಜತೆ ವಿಲೀನವಾಗಿರುವುದನ್ನು ಪ್ರಶ್ನಿಸಿ ಬಿಜೆಪಿ ಶಾಸಕ ಮದನ್ ದಿಲಾವರ್ ಕೋರ್ಟ್ ಮೆಟ್ಟಿಲೇರಿದ್ದರು.
ಬಿಎಸ್ಪಿ ಶಾಸಕರನ್ನು ಅನರ್ಹಗೊಳಿಸಬೇಕು ಎಂಬ ಮನವಿಯನ್ನು ರಾಜಸ್ಥಾನ ಸ್ಪೀಕರ್ ಸಿಪಿ ಜೋಶಿ ಜುಲೈ 29ರಂದು ತಿರಸ್ಕರಿಸಿದ್ದರು. ಈ ಬೆಳವಣಿಗೆ ನಂತರ ದಿಲಾವರ್ ರಾಜಸ್ಥಾನ ಹೈಕೋರ್ಟ್ ಮೆಟ್ಟಿಲೇರಿದ್ದರು. ಜುಲೈ 30ರಂದು ಜೋಶಿ ಅವರಿಗೆ ಕೋರ್ಟ್ ನೋಟಿಸ್ ಜಾರಿಗೊಳಿಸಿತ್ತು. ಆದರೆ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲ್ಲ ಎಂದು ಉತ್ತರ ನೀಡಿರುವುದಾಗಿ ವರದಿ ತಿಳಿಸಿದೆ.
ಈ ಬೆಳವಣಿಗೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಹೈಕೋರ್ಟ್ ಮೆಟ್ಟಿಲೇರಿದೆ. ಅಲ್ಲದೇ ಮಂಗಳವಾರ ಹೈಕೋರ್ಟ್ ನಲ್ಲಿಯೂ ಪ್ರಕರಣದ ವಿಚಾರಣೆ ನಡೆಯಲಿದೆ. ಇದರೊಂದಿಗೆ ಆರು ಮಂದಿ ಬಿಎಸ್ಪಿ ಶಾಸಕರ ಭವಿಷ್ಯ (ಸಂದೀಪ್ ಯಾದವ್, ವಾಜಿಬ್ ಅಲಿ, ದೀಪ್ ಚಾಂದ್ ಖೇರಿಯಾ, ಲಖನ್ ಸಿಂಗ್ ಮೀನಾ ಮತ್ತು ರಾಜೇಂದ್ರ ಗುಧಾ) ನಿರ್ಧಾರವಾಗಲಿದೆ ಎಂದು ವರದಿ ತಿಳಿಸಿದೆ.