ಕಾರ್ಖಾನೆ ನುಂಗಿ ನೀರು ಕುಡಿದಿದ್ದ ಬಿಜೆಪಿ ಅಭ್ಯರ್ಥಿಗೆ ತಕ್ಕಪಾಠ ಕಲಿಸಿ : ಸಿದ್ದರಾಮಯ್ಯ
Team Udayavani, Oct 16, 2021, 3:44 PM IST
ಹಾನಗಲ್: ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶನಿವಾರ ಹಾನಗಲ್ ನ ಮಲಗುಂದ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ಪ್ರಚಾರ ನಡೆಸಿ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನ್ ವಿರುದ್ಧ ಕಿಡಿ ಕಾರಿದರು.
‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ದಿನಗಳಿಂದ ಕಾಂಗ್ರೆಸ್ ಸರಕಾರದ ಜನಪರ ಯೋಜನೆಗಳನ್ನು ಒಂದೊಂದಾಗಿ ಮೊಟಕುಗೊಳಿಸುತ್ತಾ ಬರುತ್ತಿದ್ದಾರೆ. ಕೇಂದ್ರದ ಮೋದಿ ಸ ಸರಕಾರ ಜನರಿಗೆ ಸುಳ್ಳು ಹೇಳಿ ಭ್ರಮಾ ಲೋಕ ಸೃಷ್ಟಿಸಿದ್ದು, ಜನರು ಇವರ ಮಾತಿನಿಂದ ಭ್ರಮ ನಿರಸಗೊಂಡಿದ್ದಾರೆ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇನೆಂದು ಹೇಳಿದ್ದರು.ಇದುವರೆಗೆ 14 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ ದೇಶದಲ್ಲಿ 12 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಯಾವುದೇ ಅಭಿವೃದ್ಧಿ ನಡೆದಿಲ್ಲ. ಅಚ್ಚೇ ದಿನ್ ಬರಲಿದೆ ಎಂದು ಅಧಿಕಾರಕ್ಕೆ ಬಂದ ಮೋದಿಯಿಂದಾಗಿ ಹಸಿವು, ಬಡತನ ಮತ್ತಷ್ಟು ಹೆಚ್ಚಿದೆ’ ಎಂದು ತೀವ್ರ ವಾಗ್ದಾಳಿ ನಡೆಸಿದರು.
‘ಸಂಗೂರು ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷರಾಗಿದ್ದಾಗ ಕಾರ್ಖಾನೆ ನುಂಗಿ ನೀರು ಕುಡಿದಿದ್ದ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನಗೆ ಈ ಉಪಚುನಾವಣೆಯಲ್ಲಿ ತಕ್ಕಪಾಠ ಕಲಿಸಿ’ ಎಂದು ಕರೆ ನೀಡಿದರು.
‘ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರ ಕ್ಕೆ ಬಂದರೆ 10 ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಸಚಿವರಾದ ಮನೋಹರ ತಹಶೀಲ್ದಾರ, ಯು.ಟಿ.ಖಾದರ್, ಸಂತೋಷ ಲಾಡ್ ಸೇರಿ ಕಾಂಗ್ರೆಸ್ ನಾಯಕರು ವೇದಿಕೆಯಲ್ಲಿದ್ದರು.