ಕಳೆದ ಮಳೆಗಾಲದಲ್ಲಿ ಕುಸಿದ ಮನೆಗೆ ಬಂದ ಪರಿಹಾರ ಕೇವಲ 3,200 ರೂ.!
Team Udayavani, Dec 26, 2020, 11:03 AM IST
ನಂಜನಗೂಡು: ಕಳೆದ ಮಳೆಗಾಲದಲ್ಲಿ ಕುಸಿದ ಮನೆಗೆ ಸರ್ಕಾರ ನೀಡಿರುವ ಪರಿಹಾರ ಎಷ್ಟು ಗೊತ್ತೆ?. ಕೇವಲ 3.200 ರೂ.ಮಾತ್ರ!.
ತಾಲೂಕಿನ ಹುಲ್ಲಹಳ್ಳಿಯ ಪುಟ್ಟತಾಯಮ್ಮನ ಮನೆ ಮಳೆಗಾಲದಲ್ಲಿ ಕುಸಿದಿತ್ತು. ಮನೆಯ ಮಣ್ಣಿನ ಗೋಡೆ ಕುಸಿತಕ್ಕೊಳಗಾಗಿ ಆಕೆ ನಿರಾಶ್ರಿತಳಾಗಿದ್ದರು. ಕುಸಿದ ಮನೆಗೆ ಸರ್ಕಾರ ಈಗ 3200 ರೂ.ಗಳ ಪರಿಹಾರ ನಿಗದಿಪಡಿಸಿ ಚೆಕ್ ನೀಡಿದೆ. ಮನೆ
ಕುಸಿತಕ್ಕೊಳಗಾದ ಆಕೆ ಕುಟುಂಬ ತಕ್ಷಣ ವಾಸವನ್ನು ಬಾಡಿಗೆ ಮನೆಗೆ ಸ್ಥಳಾಂತರಿಸಿದೆ.
ಆಗ ಸ್ಥಳಕ್ಕೆ ಬಂದ ಸ್ಥಳೀಯ ಹೋಬಳಿ ಮಟ್ಟದ ಅಧಿಕಾರಿಗಳು, ಕುಸಿತಕ್ಕೊಳಗಾದ ಮನೆಯ ಮಹಜರು ನಡೆಸಿ ಮನೆ ಬಾಡಿಗೆ ಮತ್ತು ಬಿದ್ದು ಹೋದ ಮನೆಗೆ ಪ್ರಕೃತಿ ವಿಕೋಪ ನಿಧಿಯಡಿ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದ್ದರು. 3200 ರೂ. ಬಾಡಿಗೆಯೋ, ಪರಿಹಾರವೋ ಎಂದು ಕೇಳಿದ್ದಕ್ಕೆ ಇದು ಪರಿಹಾರ ಎಂದು ಅಧಿಕಾರಿಗಳು ತಿಳಿಸುತ್ತಾರೆಂದು ಪುಟ್ಟತಾಯಮ್ಮ ಹೇಳಿದರು.
ಇದನ್ನೂ ಓದಿ:ಬೆಂಗಳೂರಿನಲ್ಲಿ ನಟ ವಿಷ್ಣುವರ್ಧನ್ ಪ್ರತಿಮೆ ಧ್ವಂಸಗೊಳಿಸಿದ ಕಿಡಿಗೇಡಿಗಳು
ಕಡಿಮೆ ಪರಿಹಾರ ಹಣದಲ್ಲಿ ಏನು ಮಾಡಲು ಸಾಧ್ಯ. ಬಿದ್ದು ಹೋದ ಮನೆ ಇರಲಿ, ಕಿಟಕಿ ಬಾಗಿಲುಗಳನ್ನು ನಿಲ್ಲಿಸಲೂ ಸಾಕಾಗುವುದಿಲ್ಲ. ತಿಂಗಳ ಮನೆ ಬಾಡಿಗೆಯೇ ಈ ಪರಿಹಾರಕ್ಕಿಂತ ಹೆಚ್ಚು ಎನ್ನುತ್ತಾರೆ ಕುಟುಂಬಸ್ಥರು.
ಹಿರಿಯ ಅಧಿಕಾರಿಗಳು ಗಮನಹರಿಸಲಿ: ಬಿದ್ದ ಮನೆ ಪರಿಶೀಲಿಸಲು ಬಂದ ನಾಡಕಚೇರಿ ಹಾಗೂ ಪಂಚಾಯಿತಿ ಅಧಿಕಾರಿಗಳು ಕೇಳಿದ ಹಣ ನೀಡಲಾಗದಿದ್ದಕ್ಕೆ ಮನೆಯ ನಷ್ಟದ ಅಂದಾಜನ್ನು ಕಡಿಮೆ ಮಾಡಿದ್ದೇ ಈ ಅಲ್ಪ ಮೊತ್ತದ ಪರಿಹಾರ ಬರಲು ಕಾರಣ ಎನ್ನುವುದು ಪುಟ್ಟತಾಯಮ್ಮನವರ ಆರೋಪ. ತಕ್ಷಣ ಹಿರಿಯ ಅಧಿಕಾರಿಗಳು ಗಮನ ಹರಿಸಿ ಸಹಾಯ ಮಾಡಲಿ ಎಂಬುದೇ ಎಲ್ಲರ ಆಶಯವಾಗಿದೆ.