ಹಸಿವು ನೀಗಿಸಿದ ಆಹಾರ ಇಲಾಖೆ : ಲಾಕ್ಡೌನ್ನಲ್ಲಿ ಬಡವರು-ವಲಸೆ ಕಾರ್ಮಿಕರಿಗೆ ಆಹಾರಧಾನ್ಯ
Team Udayavani, Feb 26, 2021, 6:50 AM IST
ಬೆಂಗಳೂರು: ಕೊರೊನಾ ಸಂದರ್ಭದಲ್ಲಿ ರಾಜ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದ ಬಡ ಹಾಗೂ ಕಾರ್ಮಿಕ ವರ್ಗದ “ಹಸಿವು’ ನೀಗಿಸುವ ಸಲುವಾಗಿಯೇ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಹೆಚ್ಚಿನ ಅನುದಾನ ವಿನಿಯೋಗಿಸಿದೆ.
2020-21 ನೇ ಸಾಲಿನ ಬಜೆಟ್ನಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ಹಂಚಿಕೆಯಾಗಿದ್ದ 2,668 ಕೋಟಿ ರೂ. ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಿದೆ. ಇತರ ಇಲಾಖೆಗಳಿಗೆ ಹೋಲಿಸಿದರೆ ಬಳಕೆ ಪ್ರಮಾಣದಲ್ಲಿ ಮುಂದಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಕೇಂದ್ರದ ನೆರವು ಜತೆಗೆ ಹೆಚ್ಚುವರಿ ಯಾಗಿ ಸಹ ಅನುದಾನ ಪಡೆಯಲಾಗಿದೆ.
ಕೇಂದ್ರ ಸರಕಾರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಅನುಷ್ಠಾನದ ಹೊಣೆ ಗಾರಿಕೆಯೂ ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಮೇಲೆ ಬಿದ್ದಿತು. ಈ ಹೊಣೆ ಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿದೆ. ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ 3 ಅಡುಗೆ ಅನಿಲ ಸಿಲಿಂಡರ್ಗಳನ್ನು ಉಚಿತವಾಗಿ ವಿತರಿಸಿದೆ.
ಆಗಲೇಬೇಕಾದ ಕೆಲಸ
– ಬಿಪಿಎಲ್ ಕಾರ್ಡ್ಗಳಿಗಾಗಿ ಸಲ್ಲಿಸಿದ್ದ 1.50 ಲಕ್ಷ ಅರ್ಜಿಗಳು ಬಾಕಿ ಇದ್ದು ವಿಲೇವಾರಿ ಯಾಗಬೇಕಿದೆ.
– ಪಡಿತರ ಆಹಾರ ಧಾನ್ಯ ಕಾಳಸಂತೆಯಲ್ಲಿ ಮಾರಾಟ ಮಾಡುವುದು ನಿಗ್ರಹಿಸಿ ಅನರ್ಹ ಪಡಿತರ ಕಾರ್ಡ್ದಾರರನ್ನು ಪತ್ತೆ ಹಚ್ಚಿ ರದ್ದುಪಡಿಸಬೇಕಿದೆ.
ಬಜೆಟ್ ನಿರೀಕ್ಷೆಗಳು
– ಪಡಿತರ ಕಾರ್ಡ್ದಾರರಿಗೆ ಅಕ್ಕಿಯ ಜತೆ ಉತ್ತರ ಕರ್ನಾಟಕ ಭಾಗದಲ್ಲಿ ಜೋಳ, ಹಳೇ ಮೈಸೂರು ಭಾಗದಲ್ಲಿ ರಾಗಿ ಕರಾವಳಿ ಭಾಗದಲ್ಲಿ ಕುಚ್ಚಲಕ್ಕಿ ನೀಡುವುದು.
– ಪಡಿತರ ವಿತರಣೆಗೆ ಬೇಕಾಗುವಷ್ಟು ಭತ್ತ, ರಾಗಿ, ಜೋಳ ರೈತರಿಂದ ಖರೀದಿ.