ಕೋವಿಡ್- 19 ಸೇನಾನಿಗಳ ಸುರಕ್ಷೆಗೆ ಇನ್ನಷ್ಟು ಆದ್ಯತೆ ಬೇಕು
ದ.ಕ. ಮತ್ತು ಉಡುಪಿ ಜಿಲ್ಲೆಯ ಒಟ್ಟು ನಾಲ್ವರು ಪೊಲೀಸರಿಗೆ ಸೋಂಕು
Team Udayavani, May 25, 2020, 6:30 AM IST
ಉಡುಪಿ /ಮಂಗಳೂರು: ಇದೇ ಮೊದಲ ಬಾರಿಗೆ ಕರಾವಳಿಯಲ್ಲಿಯೂ ಕೋವಿಡ್- 19 ಸೇನಾನಿಗಳಾಗಿ ಕಾರ್ಯನಿರ್ವ ಹಿಸುವ ಪೊಲೀಸ್ ಸಿಬಂದಿಗೆ ಸೋಂಕು ತಗಲಿದೆ.
ಉಡುಪಿ ಜಿಲ್ಲೆಯ ಮೂವರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಓರ್ವರಿಗೆ ಕೋವಿಡ್- 19 ದೃಢಪಟ್ಟಿದೆ. ಈ ಬೆಳವಣಿಗೆ ಕೋವಿಡ್- 19 ಸೇನಾನಿಗಳ ವಲಯದಲ್ಲಿ ಆತಂಕಕ್ಕೆ ಕಾರಣ ವಾಗಿದೆ. ಜಿಲ್ಲಾಡಳಿತ ಮತ್ತು ಸರಕಾರ ಈ ಕೂಡಲೇ ಕೊರೊನಾ ವಾರಿಯರ್ಗಳ ಸುರಕ್ಷೆಗೆ ಮತ್ತಷ್ಟು ಗಮನ ನೀಡಬೇಕಿದೆ.
ವೈದ್ಯರು, ದಾದಿಯರು, ಆಶಾ ಕಾರ್ಯಕರ್ತರು ಕೋವಿಡ್- 19 ಸೇನಾನಿಗಳಾಗಿ ದಿನದ 24 ತಾಸು ಕೂಡ ನೇರ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವುದರಿಂದ ಅವರಿಗೆ ಸೋಂಕು ತಗಲುವ ಸಾಧ್ಯತೆ ಹೆಚ್ಚಿದೆ. ಇದಲ್ಲದೆ ವಿವಿಧ ಅಧಿಕಾರಿ ಗಳು,ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ಪೈಕಿ ಚೆಕ್ಪೋಸ್ಟ್ ಭದ್ರತೆ ಮತ್ತಿತರ ಬಂದೋಬಸ್ತ್ ಕಾರ್ಯಗಳಲ್ಲಿ ತೊಡಗಿರುವ ಪೊಲೀಸರಿಗೂ ಸೋಂಕು ತಗಲುವ ಸಾಧ್ಯತೆ ಹೆಚ್ಚಿದೆ ಎಂಬ ಆತಂಕ ಈ ಹಿಂದೆಯೇ ವ್ಯಕ್ತವಾಗಿತ್ತು. ಅದೀಗ ನಿಜವಾಗಿದೆ. ಸಾಕಷ್ಟು ಎಚ್ಚರ ವಹಿಸಿದರೂ ಸೋಂಕು ತಗಲಿರುವುದು ತಳ ಮಟ್ಟದಲ್ಲಿ ಕೆಲಸ ಮಾಡುವ ಪೊಲೀಸರಲ್ಲಿ ಮಾತ್ರವಲ್ಲದೆ, ಅಧಿಕಾರಿ ಹಂತದಲ್ಲೂ ಆತಂಕ ಸೃಷ್ಟಿಸಿದೆ. ಪೊಲೀಸರ ಕುಟುಂಬದವರಲ್ಲೂ ಭಯದ ವಾತಾವರಣ ಆವರಿಸಿದೆ.
ಕೋವಿಡ್- 19 ಸಂಕಷ್ಟ ಕಾಲದಲ್ಲಿ ಜನರ ಅನಗತ್ಯ ಓಡಾಟ ನಿಯಂತ್ರಣ, ಸೂಕ್ತ ಅನುಮತಿ ಇಲ್ಲದೆ ಹೊರರಾಜ್ಯ, ಹೊರ ಜಿಲ್ಲೆ ಗಳಿಂದ ಬರುವವರ ಮೇಲೆ ನಿಗಾ ಮತ್ತು ಚೆಕ್ಪೋಸ್ಟ್ಗಳ ಭದ್ರತೆಯನ್ನು ಸದ್ಯಕ್ಕೆ ಪೊಲೀಸರು ನಿರ್ವಹಿಸುತ್ತಿದ್ದಾರೆ. ಸೋಂಕು ನಿಯಂತ್ರಣಕ್ಕೆ ಸಾಕಷ್ಟು ಶ್ರಮ ವಹಿಸುತ್ತಿರುವ ಪೊಲೀಸರೇ ತೊಂದರೆಗೆ ಸಿಲುಕಿರುವ ಈ ಸಂದರ್ಭದಲ್ಲಿ ಸರಕಾರ, ಜಿಲ್ಲಾಡಳಿತ ಹೆಚ್ಚಿನ ಗಮನ ವಹಿಸಬೇಕಿದೆ. ಜತೆಗೆ ಜನರೂ ಸಹಕರಿಸಬೇಕಿದೆ. ಮುಖ್ಯವಾಗಿ ಸೀಲ್ಡೌನ್ ಆಗಿರುವ ಪೊಲೀಸ್ ಠಾಣೆ ವ್ಯಾಪ್ತಿಯ ಜನರು ಹೆಚ್ಚಿನ ಜವಾಬ್ದಾರಿಯಿಂದ ವರ್ತಿಸಿ ಪೊಲೀಸರ ಒತ್ತಡವನ್ನು ಕಡಿಮೆಗೊಳಿಸಿ ಅವರ ಪರಿಶ್ರಮವನ್ನು ಗೌರವಿಸಬೇಕಿದೆ.
ಚೆಕ್ಪೋಸ್ಟ್ ಮತ್ತು ಟೋಲ್ಗೇಟ್ಗಳಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುವಾಗ ಯಾರಿಂದಲೋ ಸೋಂಕು ತಗಲಿರಬಹುದು ಅಥವಾ ಬೇರೆಡೆಯಿಂದಲೂ ಬಂದಿರಬಹುದು. ಪೊಲೀಸರು ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್ಗಳನ್ನು ಬಳಸಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಸೋಂಕು ತಗಲಿರುವುದು ಸಾರ್ವಜನಿಕರಲ್ಲೂ ಭೀತಿ ಸೃಷ್ಟಿಸಿದೆ.
ಸಾವಿರಾರು ಪೊಲೀಸರು, ಆಶಾಕಾರ್ಯಕರ್ತೆಯರ ಸಹಿತ ಕೋವಿಡ್- 19 ವಾರಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಹಲವರು ಸಮಾಜದ ಜೀವಾಳ. ಇವರಿಗೆ ಬೇಕಾದ ಸ್ಯಾನಿಟೈಸರ್,ಗ್ಲೌಸ್,ಮಾಸ್ಕ್ ಗಳನ್ನು ಪೂರೈಸು ವುದರ ಜತೆಗೆ ಅವರಿಗೆ ಕಾಲ ಕಾಲಕ್ಕೆ ಬೇಕಾದ ಊಟೋಪಚಾರವನ್ನೂ ಒದಗಿಸಬೇಕು. ಅದರೊಂದಿಗೆ ಹೆಚ್ಚಿನ ಸುರಕ್ಷಾ ಕ್ರಮಗಳಿಗೂ ಆದ್ಯತೆ ನೀಡಬೇಕೆಂಬುದು ಜನಾಗ್ರಹ.
ಇದುವರೆಗೆ ಸಾಗಿದ ದೂರಕ್ಕಿಂತ ಸಾಗ ಬೇಕಾದ ದಾರಿ ಹೆಚ್ಚು ಇರುವುದನ್ನು ವರದಿಗಳು ಸಾರುತ್ತಿವೆ. ಇನ್ನಷ್ಟು ಕಠಿನ ದಿನ ಗಳು ಬರುವುದರ ಆತಂಕವೂ ಇದ್ದು, ಈ ಕ್ಷಣದಿಂದಲೇ ಕೋವಿಡ್- 19 ವಾರಿಯರ್ ಸಹಿತ ಸಾರ್ವಜನಿಕರು ಸಾಕಷ್ಟು ಮುನ್ನೆಚ್ಚರಿಕೆ ವಹಿಸ ಬೇಕಾಗಿದೆ ಎಂಬ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಗುತ್ತಿದೆ.
10-12 ಪೊಲೀಸರಿಗೆ ಸೋಂಕು
ಪೊಲೀಸ್ ಇಲಾಖೆ ಮೂಲಗಳ ಪ್ರಕಾರ ಬೆಂಗಳೂರು, ಬಾಗಲಕೋಟೆ, ಕಲಬುರಗಿ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಸೇರಿ ರಾಜ್ಯದಲ್ಲಿ ಸುಮಾರು 10-12 ಮಂದಿ ಪೊಲೀಸ್ ಅಧಿಕಾರಿ, ಸಿಬಂದಿಗೆ ಸೋಂಕು ತಗುಲಿದ್ದು, ಪ್ರತಿಯೊಬ್ಬರನ್ನೂ ಪ್ರತ್ಯೇಕವಾಗಿ ಕ್ವಾರಂಟೈನ್ ಮಾಡಲಾಗಿದೆ. ಜತೆಗೆ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನೂ ಕ್ವಾರಂಟೈನ್ ಮಾಡಲಾಗಿದೆ.
ಬೆಂಗಳೂರು ಗ್ರಾಮಾಂತರ, ಕಲಬುರಗಿ, ಬೀದರ್,ಉಡುಪಿ ಸೇರಿ ಕೆಲವೆಡೆ ಶಂಕಿತರು ಮತ್ತು ಸೋಂಕುಪೀಡಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ ಸುಮಾರು 120ಕ್ಕೂ ಅಧಿಕ ಅಧಿಕಾರಿ, ಸಿಬಂದಿಗೆ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ನೆಗೆಟಿವ್ ಬಂದಿದೆ. ಆದರೂ ಮುನ್ನೆಚ್ಚರಿಕೆಯಾಗಿ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ ಎಂದು ಇಲಾಖೆಯ ಮೂಲಗಳು ದೃಢಪಡಿಸಿವೆ.
ಪೊಲೀಸ್ ಸಿಬಂದಿಗೆ ಪ್ರತೀ ದಿನ ಬೆಳಗ್ಗೆ ಕರ್ತವ್ಯಕ್ಕೆ ತೆರಳುವ ಸಂದರ್ಭದಲ್ಲಿ ವಹಿಸಬೇಕಾದ ಎಚ್ಚರಿಕೆಯ ಕ್ರಮಗಳ ಬಗ್ಗೆ ಸಲಹೆ ಸೂಚನೆ ನೀಡಲಾಗುತ್ತಿದೆ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತೆಯೂ ತಿಳಿ ಹೇಳಲಾಗುತ್ತಿದೆ. ಠಾಣೆಗೆ ಬರುವ ಜನರ ಜತೆ ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯ ನಿರ್ವಹಿಸುವಂತೆ ಸೂಚಿಸಿದ್ದು, ಠಾಣೆಯ ಸುತ್ತ ತಡೆ ಬೇಲಿ ವ್ಯವಸ್ಥೆಯನ್ನು ಮಾಡಲಾಗಿದೆ.
– ಲಕ್ಷ್ಮೀ ಗಣೇಶ್, ಡಿಸಿಪಿ, ಮಂಗಳೂರು
ಎಲ್ಲ ಪೊಲೀಸರಿಗೆ, ಆಶಾ ಕಾರ್ಯಕರ್ತೆಯರಿಗೆ ಎರಡೆರಡು ಮಾಸ್ಕ್ ಗಳನ್ನು ಕೊಟ್ಟಿದ್ದೇವೆ. ಬಳಸಿ ಎಸೆಯುವ ಮಾಸ್ಕ್ ಬೇಡವೆಂದು ಬಟ್ಟೆಯ ಮಾಸ್ಕ್ ಗಳನ್ನು ಮತ್ತು ಸ್ಯಾನಿಟೈಸರ್ ಗಳನ್ನು ವಿತರಿಸಲಾಗಿದೆ. ಕೋವಿಡ್- 19 ವಾರಿಯರ್ಗಳಿಗೆ ಬೇಕಾದ ಎಲ್ಲ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
– ಜಿ. ಜಗದೀಶ್, ಜಿಲ್ಲಾಧಿಕಾರಿಗಳು, ಉಡುಪಿ.
ಎಲ್ಲ ಸಿಬಂದಿಗೆ ಟ್ರಿಪಲ್ ಲೇಯರ್ ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್, ಪಿಪಿಇ ಕಿಟ್ ಒದಗಿಸಲಾಗಿದೆ. ಆರೋಪಿಗಳ ಪತ್ತೆ ಕಾರ್ಯಾಚರಣೆ, ಶವ ಪತ್ತೆ ಮತ್ತಿತರ ಗಂಭೀರ ಪ್ರಕರಣಗಳಲ್ಲಿ ಪಿಪಿಇ ಕಿಟ್ಗಳಲ್ಲಿರುವ ಸಾಧನಗಳನ್ನು ಅಗತ್ಯವಾಗಿ ಬಳಸುವಂತೆ ಸೂಚಿಸಲಾಗಿದೆ.
-ಲಕ್ಷ್ಮೀ ಪ್ರಸಾದ್, ದ.ಕ. ಎಸ್ಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ