ಗೋವಾದಲ್ಲಿ ಬಿಜೆಪಿಯೇತರ ಪಕ್ಷಗಳೊಂದಿಗೆ ಚುನಾವಣೋತ್ತರ ಮೈತ್ರಿ ಸಾಧ್ಯ: ಕೇಜ್ರಿವಾಲ್
Team Udayavani, Jan 16, 2022, 3:59 PM IST
ಪಣಜಿ: ಆಮ್ ಆದ್ಮಿ ಪಕ್ಷಕ್ಕೆ ಬಹುಮತ ಬರದಿದ್ದರೆ ಗೋವಾದಲ್ಲಿ ಬಿಜೆಪಿಯೇತರ ಪಕ್ಷಗಳೊಂದಿಗೆ ಚುನಾವಣೋತ್ತರ ಮೈತ್ರಿ ಸಾಧ್ಯ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿಕೆ ನೀಡಿದ್ದಾರೆ.
ಪಣಜಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತೃಣಮೂಲ ಕಾಂಗ್ರೆಸ್ ಜತೆ ಚುನಾವಣಾ ಪೂರ್ವ ಮೈತ್ರಿ ಪ್ರಸ್ತಾಪವನ್ನು ತಳ್ಳಿ ಹಾಕಿದರು.
ಮಾಜಿ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಅವರ ಪುತ್ರ ಉತ್ಪಲ್ ಪರ್ರಿಕರ್ ಅವರು ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇವೆ, ನಾನು ಮನೋಹರ್ ಪರ್ರಿಕರ್ ಅವರಂತಹ ರಾಜಕಾರಣಿಯನ್ನು ಗೌರವಿಸುತ್ತೇನೆ ಎಂದರು. .
ಫಲಿತಾಂಶದ ಬಳಿಕ ಒಂದು ವೇಳೆ ಮೈತ್ರಿ ಅನಿವಾರ್ಯವಾದರೆ ಬಿಜೆಪಿಯೇತರ ಪಕ್ಷಗಳೊಂದಿಗೆ ಮಾತ್ರ ಸರಕಾರ ರಚಿಸುತ್ತೇವೆ ಎಂದರು.
ಪಣಜಿ ಕ್ಷೇತ್ರದ ಟಿಕೆಟ್ ಕೇಳಿರುವ ಉತ್ಪಲ್ ಅವರಿಗೆ ಬಿಜೆಪಿ ಇದುವರೆಗೆ ಟಿಕೆಟ್ ಕುರಿತಾಗಿ ಸ್ಪಷ್ಟತೆ ನೀಡಿಲ್ಲ, ಅವರು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಗಳಿವೆ ಎಂದೂ ಹೇಳಲಾಗಿದೆ.
ನಿರೀಕ್ಷೆ ಈಡೇರಿಸಲು ಪ್ರಯತ್ನ
ಶಿರೋಡಾದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅರವಿಂದ ಕೇಜ್ರಿವಾಲ್ ಅವರು,ಆಮ್ ಆದ್ಮಿ ಪಕ್ಷದ ಮೇಲೆ ಗೋವಾದ ಜನತೆ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದು, ನಮ್ಮ ಸರ್ಕಾರ ಸ್ಥಾಪನೆಯಾದರೆ ಎಲ್ಲಾ ನಿರೀಕ್ಷೆಯನ್ನು ಈಡೇರಿಸಲು ನಾವು ಪ್ರಯತ್ನಿಸುತ್ತೇವೆ ಎಂದರು.
ಗೋವಾದಲ್ಲಿ ಆಮ್ ಆದ್ಮಿ ಸರ್ಕಾರ ಸ್ಥಾಪನೆಯಾದರೆ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿಯಾಗಲಿದೆ. ಗೋವಾದಲ್ಲಿ ದಿನದ 24 ಗಂಟೆ ಉಚಿತ ವಿದ್ಯುತ್, ಕುಡಿಯುವ ನೀರು, ರಸ್ತೆ ಸುಧಾರಣೆ, ಎಲ್ಲ ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ, ರೈತರೊಂದಿಗೆ ಚರ್ಚೆ ನಡೆಸಿ ಕೃಷಿ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ಗೋವಾದಲ್ಲಿ ಬದಲಾವಣೆಗಾಗಿ ಜನರು ಮತದಾನ ಮಾಡಲು ಉತ್ಸುಕರಾಗಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಈ ಪಕ್ಷಗಳು ಜನತೆಗಾಗಿ ಏನನ್ನೂ ಮಾಡಿಲ್ಲ. ರಾಜ್ಯದಲ್ಲಿ ಯುವಕರು ಉದ್ಯೋಗವಿಲ್ಲದೆ ಮನೆಯಲ್ಲಿಯೇ ಕುಳಿತಿದ್ದಾರೆ. ನಿರುದ್ಯೋಗ ದೊಡ್ಡ ಸಮಸ್ಯೆಯಾಗಿದೆ ಎಂದರು.