ಹಿರೋಶಿಮಾದಲ್ಲಿ ಬಾಕ್ಗೆ ಮಿಶ್ರ ಅನುಭವ
Team Udayavani, Jul 17, 2021, 2:23 AM IST
ಹಿರೋಶಿಮಾ : ಶುಕ್ರವಾರ ಹಿರೋಶಿಮಾದ “ಪೀಸ್ ಮೆಮೋರಿಯಲ್ ಪಾರ್ಕ್’ಗೆ ಭೇಟಿಯಿತ್ತ ಐಒಸಿ ಅಧ್ಯಕ್ಷ ಥಾಮಸ್ ಬಾಕ್ ಅವರಿಗೆ ಮಿಶ್ರ ಅನುಭವವಾಯಿತು. 1945ರ ನ್ಯೂಕ್ಲಿಯರ್ ಬಾಂಬ್ ದಾಳಿಯಲ್ಲಿ ಬದುಕಿಳಿದ ಫುಮಿಯಾಕಿ ಕಜಿಯ ಅವರು ಒಲಿಂಪಿಕ್ಸ್ ಯಶಸ್ವಿಯಾಗಲಿ ಎಂದು ಹಾರೈಸಿದರೆ, ಹಿರೋಶಿಮಾ ಹೊರವಲಯದಲ್ಲಿ ನೂರಾರು ಮಂದಿ ಒಲಿಂಪಿಕ್ಸ್ ವಿರೋಧಿ ಪ್ರತಿಭಟನಾಕಾರರು ಬಾಕ್ ವಿರುದ್ಧ ಘೋಷಣೆಗಳನ್ನು ಕೂಗಿದರು.
“ಪೀಸ್ ಮೆಮೋರಿಲ್ ಪಾರ್ಕ್’ಗೆ ಆಗಮಿಸಿದ ಬಾಕ್, ಬಾಂಬ್ ದಾಳಿಯಲ್ಲಿ ಮೃತಪಟ್ಟ ಜಪಾನಿಗರನ್ನು ನೆನೆದು ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರನ್ನು ಫುಮಿಯಾಕಿ ಕಜಿಯ ಭೇಟಿಯಾದರು. ಒಲಿಂಪಿಕ್ಸ್ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿ ಶುಭ ಕೋರಿದರು. ಕಜಿಯ ಒಲಿಂಪಿಕ್ಸ್ ರಿಲೇಯಲ್ಲಿ ಪಾಲ್ಗೊಂಡ ಅದೃಷ್ಟಶಾಲಿಯೂ ಹೌದು.
ಸ್ಮಾರಕದ ಹೊರಗೆ ನಿಂತಿದ್ದ 57 ವರ್ಷದ ಯುಕೊ ಇನೋಯಿ, ಇದು ಸ್ಮಾರಕ ಭೇಟಿಗೆ ಸೂಕ್ತ ದಿನವಲ್ಲ ಎಂಬ ಗಂಭೀರ ಆರೋಪ ಮಾಡಿದರು. ಸರಿಯಾಗಿ 76 ವರ್ಷಗಳ ಹಿಂದೆ, ಜುಲೈ 16ರಂದೇ ನ್ಯೂ ಮೆಕ್ಸಿಕೊದಲ್ಲಿ “ಟ್ರಿನಿಟಿ ನ್ಯೂಕ್ಲಿಯರ್ ಟೆಸ್ಟ್’ ನಡೆದಿತ್ತು. ಕೆಲವೇ ವಾರಗಳಲ್ಲಿ ಹಿರೋಶಿಮಾ ಮತ್ತು ನಾಗಾಸಾಕಿಯಲ್ಲಿ ಬಾಂಬ್ ಸುರಿಮಳೆಯಾಗಿತ್ತು.
66 ವರ್ಷದ ಯುಕಿಯೊ ನಿಶಿಯೋಕಾ ಕೂಡ ಒಲಿಂಪಿಕ್ಸ್ ವಿರೋಧಿಸುತ್ತ, ಇದು ದುಡ್ಡು ಮಾಡುವ ದಂಧೆ ಎಂದು ಆರೋಪಿಸಿದರು. ನಿಶಿಯೋಕಾ ಅವರ ತಾಯಿ ಕೂಡ ಬಾಂಬ್ ದಾಳಿಯಲ್ಲಿ ಬದುಕುಳಿದ ಅದೃಷ್ಟಶಾಲಿಯಾಗಿದ್ದರು.
ಒಲಿಂಪಿಕ್ಸ್ ರದ್ದುಗೊಳಿಸಿ!
ಪ್ರತಿಭಟನಾಕಾರರ ಕೈಯಲ್ಲಿ “ಗೋ ಹೋಮ್ ಬಾಕ್’, “ಯೂ ಆರ್ ನಾಟ್ ವೆಲ್ಕಮ್ ಹಿಯರ್’. “ಕ್ಯಾನ್ಸೆಲ್ ದ ಒಲಿಂಪಿಕ್ಸ್’ ಎಂಬ ಫಲಕಗಳು ಕಂಡುಬಂದವು.
ಇದೇ ವೇಳೆ ಐಒಸಿ ಉಪಾಧ್ಯಕ್ಷ ಜಾನ್ ಕೋಟ್ಸ್ ನಾಗಾಸಾಕಿಗೆ ಭೇಟಿಯಿತ್ತರು.
ಟೋಕಿಯೊ ತಲುಪಿದ ಮೀರಾಬಾಯಿ ಚಾನು
ಟೋಕಿಯೊ: ಒಲಿಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಏಕೈಕ ವೇಟ್ಲಿಫ್ಟರ್ಮೀರಾಬಾಯಿ ಚಾನು ಶುಕ್ರವಾರ ಟೋಕಿಯೊಗೆ ಬಂದಿಳಿದರು. ಅಮೆರಿಕದ ಸೇಂಟ್ ಲೂಯಿಸ್ನಲ್ಲಿ ಕಳೆದ 50 ದಿನಗಳಿಂದ ಅಭ್ಯಾಸ ನಡೆಸುತ್ತಿದ್ದ ಅವರು, ಅಲ್ಲಿಂದಲೇ ಜಪಾನ್ಗೆ ಪ್ರಯಾಣ ಬೆಳೆಸಿದರು.
ಮೀರಾಬಾಯಿ ವನಿತೆಯರ 49 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಅವರೊಂದಿಗೆ ಕೋಚ್ ಪ್ರಮೋದ್ ಶರ್ಮ, ಫಿಸಿಯೋ ಆಲಾಪ್ ಜಾಬ್ಡೇಕರ್ ಕೂಡ ಆಗಮಿಸಿದರು.
ಸುಮಿತ್ಗೆ ಒಲಿಂಪಿಕ್ಸ್ ಅರ್ಹತೆ
ಹೊಸದಿಲ್ಲಿ: ಭಾರತದ ಟೆನಿಸಿಗ ಸುಮಿತ್ ನಾಗಲ್ ಟೋಕಿಯೊ ಒಲಿಂಪಿಕ್ಸ್ ಅರ್ಹತೆ ಗಳಿಸಿದ್ದಾರೆ. ನಗಾಲ್ ಸಿಂಗಲ್ಸ್ ನಲ್ಲಿ ಆಡಲಿದ್ದಾರೆ. ದಿವಿಜ್ ಶರಣ್ ಹಿಂದೆ ಸರಿದ ಕಾರಣ ರೋಹನ್ ಬೋಪಣ್ಣ ಅವರೊಂದಿಗೆ ಡಬಲ್ಸ್ ನಲ್ಲೂ ಆಡುವ ಸಾಧ್ಯತೆ ಇದೆ.
“ಸಿಂಗಲ್ಸ… ಆಡಲು ಸುಮಿತ್ ಅರ್ಹತೆ ಪಡೆದಿದ್ದಾರೆಂದು ನಮಗೆ ಐಟಿಎಫ್ನಿಂದ ಸಂದೇಶ ಬಂದಿದೆ. ಆಟಗಾರನ ವಿವರಗಳನ್ನು ಒದಗಿಸಲು ಕೇಳಿದ್ದಾರೆ. ಈ ಪ್ರಕ್ರಿಯೆ ಜಾರಿಯಲ್ಲಿದೆ’ ಎಂದು ಎಐಟಿಎಯ ಪ್ರಧಾನ ಕಾರ್ಯದರ್ಶಿ ಅನಿಲ್ ಧುಪರ್ ತಿಳಿಸಿದ್ದಾರೆ.