ಕ್ರೀಡೆಯ ಹೊಂಬೆಳಕಲ್ಲಿ ಜಗಮಗಿಸಿತು ಜಪಾನ್‌


Team Udayavani, Jul 23, 2021, 11:30 PM IST

ಕ್ರೀಡೆಯ ಹೊಂಬೆಳಕಲ್ಲಿ ಜಗಮಗಿಸಿತು ಜಪಾನ್‌

ಶ್ರಮಜೀವಿಗಳ ನಾಡಾದ ಜಪಾನನ್ನು ಫೀನಿಕ್ಸ್‌ಗೆ ಹೋಲಿಸುತ್ತಾರೆ. ಭೀಕರ ಅಣು ಬಾಂಬ್‌ಗ ಧ್ವಂಸವಾಗಿ ಅಲ್ಲಿಂದಲೇ ಮರುಹುಟ್ಟು ಪಡೆದ, ಭೂಕಂಪ-ಸುನಾಮಿಗಳಿಗೂ ಜಗ್ಗದ ಬಗ್ಗದ ಜಪಾನ್‌ ಹಿಡಿದ ಪಟ್ಟನ್ನು ಬಿಡದೇ ಸಾಧಿಸುವ ಛಲವಂತರ ದೇಶ ಎಂಬುದನ್ನು ಎಂದೋ ಸಾಬೀತುಪಡಿಸಿದೆ. ಇದಕ್ಕೆ ನೂತನ ಸೇರ್ಪಡೆಯೇ ಟೋಕಿಯೊ ಒಲಿಂಪಿಕ್ಸ್‌. ಕೊರೊನಾ ಹೆಮ್ಮಾರಿಯಿಂದ ಜಗತ್ತೇ ತತ್ತರಿಸಿರುವಾಗ, ಜಾಗತಿಕ ಕ್ರೀಡಾಕೂಟಕ್ಕೆ ತವರಿನಲ್ಲೇ ಭಾರೀ ವಿರೋಧ ಎದ್ದಿರುವಾಗ ಜಪಾನ್‌ ಇದನ್ನು ಸವಾಲಾಗಿ ಸ್ವೀಕರಿಸಿದೆ. ಶುಕ್ರವಾರ ಐತಿಹಾಸಿಕ ಕ್ರೀಡಾಕೂಟಕ್ಕೆ ವರ್ಣರಂಜಿತ ಆರಂಭ ನೀಡಿದೆ. ಕ್ರೀಡೆಯ ಹೊಂಬೆಳಕಲ್ಲಿ ಜಪಾನ್‌ ಜಗಮಗಿಸಿದೆ. ಇದರ ಪ್ರಭೆ ಜಗತ್ತಿಗೆ ಒಳಿತನ್ನೇ ಉಂಟುಮಾಡಲಿ, ಕ್ರೀಡೆ ಗೆಲ್ಲಲಿ.

ಟೋಕಿಯೊ: ದೀರ್ಘ‌ ಸುರಂಗದ ಕೊನೆಯಲ್ಲಿ ಕಂಡು ಬಂದ ಬೆಳಕು ಈ ಟೋಕಿಯೊ ಒಲಿಂಪಿಕ್ಸ್‌… ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ ಅಧ್ಯಕ್ಷ ಥಾಮಸ್‌ ಬಾಕ್‌ ಉದ್ಘಾಟನಾ ಸಮಾರಂಭದಲ್ಲಿ ಆಡಿದ ನುಡಿಗಳಿವು. ಕೊರೊನಾ ಕಾರಣಕ್ಕೆ ಇಡೀ ಜಗತ್ತೇ ನಲುಗಿರುವ ಈ ಹೊತ್ತಿನಲ್ಲಿ ಅವರ ಮಾತು ಅಕ್ಷರಶಃ ಜೀವಚೈತನ್ಯಭಾವವನ್ನು ಪ್ರತಿನಿಧಿಸುವಂತಿತ್ತು. ಜಪಾನಿನ ಸರ್ವಶ್ರೇಷ್ಠ ಟೆನಿಸ್‌ ಆಟಗಾರ್ತಿ ನವೋಮಿ ಒಸಾಕಾ ಮುಖ್ಯವೇದಿಕೆಯಲ್ಲಿ ಜ್ಯೋತಿಯನ್ನು ಬೆಳಗಿ, ಬೆಳಕಿನ ಭರವಸೆಯನ್ನು ಬೀರಿದರು. ಜಪಾನ್‌ ದೊರೆ ನರುಹಿಟೊ ಟೋಕಿಯೊ ಒಲಿಂಪಿಕ್ಸ್‌ ಆರಂಭವಾಗಿದೆ ಎಂದು ಅಧಿಕೃತವಾಗಿ ಘೋಷಿಸಿದರು.
ಸಾಂಕ್ರಾಮಿಕರೋಗದ ಕಾರಣಕ್ಕೆ ಜಗತ್ತೇ ಸದ್ಯ ಮಂಕಾದಂತಿದೆ. ಆ ಮಂಕುತನ ಉದ್ಘಾಟನಾ ಸಮಾರಂಭದಲ್ಲೂ ತುಸು ಕಂಡುಬಂತು. ಆದರೆ ಉದ್ದೇಶಪೂರ್ವಕವಾಗಿಯೇ ಕಾರ್ಯಕ್ರಮವನ್ನು ಸರಳಗೊಳಿಸಲು ತೀರ್ಮಾನಿಸಿದ್ದರಿಂದ, ಈ ಹಿಂದಿನ ಉದ್ಘಾಟನಾ ಸಮಾರಂಭದಂತೆ ಅದ್ಧೂರಿಯಾಗಿರಲಿಲ್ಲ ಎಂದು ಬೇಸರಿಸುವ ಅಗತ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಸರಳಗೊಳಿಸುವುದೇ ಮಾರ್ಗ.

68 ಸಾವಿರ ಪ್ರೇಕ್ಷಕರನ್ನು ಹಿಡಿಸುವ ಟೋಕಿಯೋದ ನ್ಯಾಶನಲ್‌ ಸ್ಟೇಡಿಯಂನಲ್ಲಿ ಪಾಲ್ಗೊಂಡಿದ್ದು ಒಟ್ಟು 10,400 ಮಂದಿ. ಇದರಲ್ಲಿ 950 ಗಣ್ಯರೇ ಸೇರಿದ್ದರು. ಆ್ಯತ್ಲೀಟ್‌ಗಳ ಸಂಖ್ಯೆಯಂತೂ ಬಹಳ ಕಡಿಮೆಯಿತ್ತು.

ಭಾವನೆಗಳ ಸಮಾಗಮ
“ಯುನೈಟೆಡ್‌ ಬೈ ಎಮೋಶನ್ಸ್‌’-ಇದು ಉದ್ಘಾಟನಾ ಕಾರ್ಯಕ್ರಮದ ಘೋಷವಾಕ್ಯ. ವಿಶ್ವದ 204 ದೇಶಗಳ ಆ್ಯತ್ಲೀಟ್‌ಗಳು ಪಾಲ್ಗೊಳ್ಳುವ ಈ ಕೂಟ ಭಾವನೆಗಳಿಂದಲೇ ಸಮಾಗಮವಾ ಗಬೇಕು. ಹಲವು ಸಂಕಷ್ಟ, ಸಂಭ್ರಮ, ವೈಶಿಷ್ಟé, ವೈಪರೀತ್ಯಗಳಿರುವಾಗ ಕ್ರೀಡಾಸ್ಫೂರ್ತಿ ಎಂಬ ಭಾವವೊಂದೇ ಎಲ್ಲರನ್ನೂ ಒಗ್ಗೂಡಿಸಬೇಕು. ಅದಕ್ಕೆ ಅನುಗುಣ ವಾಗಿಯೇ ಸಾಂಸ್ಕೃತಿಕ, ಐತಿಹಾಸಿಕ ಕಾರ್ಯಕ್ರಮಗಳು ಸರಳವಾಗಿ ನಡೆದವು.

ಉದ್ಘಾಟನಾ ಕಾರ್ಯಕ್ರಮ ಆರಂಭವಾದ ಕೂಡಲೇ ಲೇಸರ್‌ ಕಿರಣಗಳ ಚಿತ್ತಾರ ಆರಂಭ ವಾಯಿತು. ಒಲಿಂಪಿಕ್ಸ್‌ ಲಾಂಛನದ ವಿವಿಧ ಬಣ್ಣಗಳು ಪ್ರಕಟವಾದವು. ಅಂತಿಮವಾಗಿ ಅದು ಅಭಿಮಾನಿಯಂತೆ ರೂಪು ತಳೆಯಿತು.
ಸ್ಟೇಡಿಯಂ ಮೇಲ್ಭಾಗದ ಆಗಸದಲ್ಲಿ 1,824 ಡ್ರೋನ್‌ಗಳ ಮೂಲಕ ಅದ್ಭುತ ಸೃಷ್ಟಿಸಲಾಯಿತು. ಅಲ್ಲಿ ಈ ಬಾರಿಯ ಲಾಂಛನವನ್ನು ಸುಂದರವಾಗಿ ತೋರಿಸಲಾಯಿತು.

ಯುದ್ಧಪೀಡಿತ ನಾಡಿನಿಂದ ಬಂದ 12ರ ಬಾಲೆ!
ಟೋಕಿಯೊ ಒಲಿಂಪಿಕ್ಸ್‌ನ ಅತೀ ಕಿರಿಯ ಕ್ರೀಡಾಪಟು ಎಂಬ ದಾಖಲೆ ಹೆಂಡಾ ಝಾಜಾ ಪಾಲಾಗಿದೆ. ಕೇವಲ 12 ವರ್ಷದ ಈ ಟೇಬಲ್‌ ಟೆನಿಸ್‌ಪಟು ಯುದ್ಧಪೀಡಿತ ಸಿರಿಯಾದಿಂದ ಬಂದವಳಾಗಿದ್ದಾಳೆ!

“ಸಿರಿಯಾದ ಜನತೆಯನ್ನು ಸಂತೋಷಪಡಿಸುವುದು ನನ್ನ ಗುರಿ. ಕೇವಲ ನನ್ನದಷ್ಟೇ ಅಲ್ಲ, ಇಲ್ಲಿ ಭಾಗವಹಿಸುತ್ತಿರುವ ಸಿರಿಯಾದ ಎಲ್ಲ ಕ್ರೀಡಾಪಟುಗಳ ಗುರಿಯೂ ಆಗಿದೆ’ ಎಂದು ಸಿರಿಯಾದ ಹಾಮಾ ನಗರದ ಹೆಂಡಾ ಝಾಜಾ ಹೇಳಿದರು. ಉದ್ಘಾಟನಾ ಸಮಾರಂಭದಲ್ಲಿ ಈಕೆ ಸಿರಿಯಾದ ಧ್ವಜಧಾರಿಯಾಗಿದ್ದಳು.

ಝಾಜಾ 1992ರ ಬಳಿಕ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ಅತೀ ಕಿರಿಯ ಕ್ರೀಡಾಪಟು. ಅಂದು ರೋಯಿಂಗ್‌ನಲ್ಲಿ ಪಾಲ್ಗೊಂಡ ಸ್ಪೇನಿನ ಕಾರ್ಲೋಸ್‌ ಫ್ರಂಟ್‌ಗೆ ಕೇವಲ 11 ವರ್ಷವಾಗಿತ್ತು.

ಇದನ್ನೂ ಓದಿ :ಟೋಕಿಯೊ ಒಲಿಂಪಿಕ್ಸ್‌ : ಆರ್ಚರಿ ರೌಂಡ್‌ : ದೀಪಿಕಾ ನಂ.9

ಮಾಸ್ಕ್ ಕಡೆಗಣಿಸಿದ ಧ್ವಜಧಾರಿಗಳು!
ಪಥಸಂಚಲನದ ವೇಳೆ ಪಾಕಿಸ್ಥಾನದ ಧ್ವಜಧಾರಿ, ಬ್ಯಾಡ್ಮಿಂಟನ್‌ ಆಟಗಾರ್ತಿ ಮಹೂರ್‌ ಶೆಹಜಾದ್‌ ಗದ್ದದಿಂದ ಕೆಳಕ್ಕೆ ಮಾಸ್ಕ್ ಎಳೆದುಕೊಂಡಿದ್ದರು. ಇನ್ನೊಬ್ಬ ಧ್ವಜಧಾರಿ ಖಲೀಲ್‌ ಅಖ್ತರ್‌ ಬಾಯಿ ಮಾತ್ರ ಮುಚ್ಚುವಂತೆ ಮಾಸ್ಕ್ ಧರಿಸಿದ್ದರು. ಕಿರ್ಗಿಸ್ಥಾನ, ತಜಿಕಿಸ್ಥಾನದ ಬಹುತೇಕ ಕ್ರೀಡಾಳುಗಳು ಮಾಸ್ಕ್ ಧರಿಸಿರಲಿಲ್ಲ. ಇವರು ಕೊರೊನಾ ನಿಯಮಾವಳಿಯನ್ನು ಪಾಲಿಸದಿದ್ದುದು ವಿವಾದಕ್ಕೆ ಕಾರಣವಾಗಿದೆ.

ನಿರಾಶ್ರಿತರ ತಂಡಕ್ಕೆ 2ನೇ ಸ್ಥಾನ!
ವಿವಿಧ ದೇಶಗಳ ಆಟಗಾರರ ಪಥಸಂಚಲನ, ಸಂಪ್ರದಾಯದಂತೆ ಗ್ರೀಸ್‌ನಿಂದ ಆರಂಭವಾಯಿತು. ಗ್ರೀಸ್‌ನ ಅಥೇನ್ಸ್‌ನಲ್ಲಿ ಮೊದಲ ಒಲಿಂಪಿಕ್ಸ್‌ ನಡೆದಿದ್ದರಿಂದ ಆ ರಾಷ್ಟ್ರದ ಆ್ಯತ್ಲೀಟ್‌ಗಳಿಗೆ ಯಾವಾಗಲೂ ಈ ಗೌರವವಿರುತ್ತದೆ.
ಹಾಗೆಯೇ ಒಲಿಂಪಿಕ್ಸ್‌ ಸಂಸ್ಥೆಯಿಂದಲೇ ಕಳುಹಿಸಲ್ಪಡುವ ವಿವಿಧ ದೇಶಗಳ ನಿರಾಶ್ರಿತ ಕ್ರೀಡಾಪಟುಗಳ ತಂಡ 2ನೇ ಸ್ಥಾನದಲ್ಲಿ ಪಥಸಂಚಲನದಲ್ಲಿ ಭಾಗವಹಿಸಿತು. ಭಾರತ 21ನೇ ಸ್ಥಾನದಲ್ಲಿ ಕಾಣಿಸಿಕೊಂಡಿತು. ದೇಶದ 19 ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

ಟುವಾಲು ದೇಶದಿಂದ ಬರೀ ಇಬ್ಬರು!
ವಿಶ್ವದ ಅತೀ ಸಣ್ಣ ದೇಶ ಟುವಾಲುವಿನ ಜನಸಂಖ್ಯೆ ಎಷ್ಟು ಗೊತ್ತೇ? ಕೇವಲ 12,000. ಅಂತಹ ದೇಶದಿಂದ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಕೇವಲ ಓರ್ವ ಕ್ರೀಡಾಪಟು ಪಾಲ್ಗೊಂಡಿದ್ದರು. ಈ ಬಾರಿ ಇಲ್ಲಿನ ಆ್ಯತ್ಲೀಟ್‌ಗಳ ಸಂಖ್ಯೆ ಎರಡಕ್ಕೇರಿದೆ!

ಹಂಸದುಡುಪಿನ ಗಾಯಕಿ
ಜಪಾನಿ ರಾಷ್ಟ್ರಗೀತೆಯನ್ನು ಗೀತರಚನೆಗಾರ್ತಿ, ಗಾಯಕಿ ಮಿಸಿಯಾ ಹಾಡಿದರು. ಈ ವೇಳೆ ಗಮನ ಸೆಳೆದಿದ್ದು ಅವರ ಉಡುಪು. ಅವರು ತಮ್ಮ ವಸ್ತ್ರ ವಿನ್ಯಾಸದಿಂದ ಹಂಸದಂತೆ ಕಾಣಿಸಿಕೊಂಡರು ಎಂದು ಟ್ವೀಟಿಗರು ವರ್ಣಿಸಿದ್ದಾರೆ.

ಇದನ್ನೂ ಓದಿ :ಒಲಿಂಪಿಕ್ಸ್‌ ಹಾಕಿ : ನೀಗಲಿ ಭಾರತದ ಪದಕ ಬರಗಾಲ

ಅಂದು ತಾತ, ಇಂದು ಮೊಮ್ಮಗ!
ಜಪಾನ್‌ ದೊರೆ ನರುಹಿಟೊ ಟೋಕಿಯೊ ಒಲಿಂಪಿಕ್ಸ್‌ ಕ್ರೀಡಾಕೂಟದ ಅಧಿಕೃತ ಉದ್ಘಾಟನೆಯನ್ನು ಘೋಷಿಸಿದರು. ಕಾಕತಾಳೀಯವೆಂದರೆ, 1964ರ ಟೋಕಿಯೊ ಒಲಿಂಪಿಕ್ಸ್‌ ಕೂಟವನ್ನು ನರುಹಿಟೊ ಅವರ ತಾತ ಹಿರೊಹಿಟೊ ಉದ್ಘಾಟಿಸಿದ್ದರು!
ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭದಲ್ಲಿ ಮೊದಲ ಬಾರಿಗೆ ವಿದೇಶಿ ಅತಿಥಿಗಳು ಹಾಗೂ ಮುಖಂಡರು ಅತ್ಯಂತ ಕಡಿಮೆ ಸಂಖ್ಯೆಯಲ್ಲಿದ್ದರು. ಉಪಸ್ಥಿತರ ಯಾದಿಯ ಪ್ರಮುಖರೆಂದರೆ ಅಮೆರಿಕದ ಫ‌ಸ್ಟ್‌ ಲೇಡಿ ಜಿಲ್‌ ಬೈಡೆನ್‌.

ಉಗ್ರರಿಗೆ ಬಲಿಯಾದ ಇಸ್ರೇಲ್‌ ಕ್ರೀಡಾಳುಗಳ ಸ್ಮರಣೆ
ಒಲಿಂಪಿಕ್ಸ್‌ ಒಡಲಲ್ಲಿ ದುರಂತ ಇತಿಹಾಸವೂ ಅಡಗಿದೆ. ಇದಕ್ಕೆ ದೊಡ್ಡ ಸಾಕ್ಷಿ 1972ರ ಮ್ಯೂನಿಚ್‌ ಒಲಿಂಪಿಕ್ಸ್‌. ಅಂದು ಪ್ಯಾಲೆಸ್ತೀನ್‌ ಉಗ್ರರ ದಾಳಿಗೆ 11 ಇಸ್ರೇಲ್‌ ಕ್ರೀಡಾಪಟುಗಳು ಹತರಾಗಿದ್ದರು. ಈ ದುರ್ಘ‌ಟನೆಯನ್ನು ಬರೋಬ್ಬರಿ 49 ವರ್ಷಗಳ ಬಳಿಕ, ಟೋಕಿಯೊ ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭದಲ್ಲಿ ಸ್ಮರಿಸಿಕೊಳ್ಳಲಾಯಿತು. ಮೃತರ ಸ್ಮರಣೆಯಲ್ಲಿ ಒಂದು ನಿಮಿಷ ಮೌನ ಆಚರಿಸಲಾಯಿತು.
ಇಸ್ರೇಲ್‌ ಕ್ರೀಡಾಪಟುಗಳ ಕುಟುಂಬದವರು ಇಂಥದೊಂದು ಮನವಿಯನ್ನು ಐಒಸಿ ಮುಂದಿರಿಸಿದ್ದರು. ಶುಕ್ರವಾರ ಕಡೇ ಗಳಿಗೆ ತನಕ ಇದಕ್ಕೆ ಐಒಸಿ ಒಪ್ಪಿಗೆ ನೀಡಿರಲಿಲ್ಲ.

ಸೋಂಕಿತರ “ಶತಕ’
ಟೋಕಿಯೊ: ಒಲಿಂಪಿಕ್ಸ್‌ ಕ್ರೀಡಾಗ್ರಾಮದಲ್ಲಿ ಶುಕ್ರವಾರ ಒಂದೇ ದಿನ 19 ಕೊರೊನಾ ಕೇಸ್‌ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 100ಕ್ಕೆ ತಲುಪಿದೆ ಎಂದು ಒಲಿಂಪಿಕ್ಸ್‌ ಆಯೋಜನ ಸಮಿತಿ ತಿಳಿಸಿದೆ. ಇದರಲ್ಲಿ ಓರ್ವ ಜೆಕ್‌ ಗಣರಾಜ್ಯದ ಆತ್ಲೀಟ್‌ ಆಗಿದ್ದಾರೆ.

ಒಲಿಂಪಿಕ್ಸ್‌ ಸಂಘಟನಾ ಸಮಿತಿ ಮತ್ತು ಜಪಾನಿ ಅಧಿಕಾರಿಗಳು ಕೂಟವನ್ನು ಸಂಘಟಿಸಲು ಅಸಾಧಾರಣ ಪರಿಶ್ರಮವಹಿಸಿದ್ದಾರೆ. ವೇದಿಕೆಯಲ್ಲಿ ಕಾಣಿಸಿಕೊಳ್ಳದ ಸಾವಿರಾರು ಮಂದಿ ಅಪಾರ ತ್ಯಾಗ ಮಾಡಿದ್ದಾರೆ. ವೈದ್ಯರು, ದಾದಿಯರು, ಈ ಕೂಟಕ್ಕಾಗಿ ತಮ್ಮ ಸಮಯವನ್ನು ಮೀಸಲಿರಿಸಿದ ಎಲ್ಲ ಜಪಾನೀಯರಿಗೆ ನನ್ನ ಅಂತರಂಗದಾಳದ ಧನ್ಯವಾದಗಳು.
– ಥಾಮಸ್‌ ಬಾಕ್‌, ಐಒಸಿ ಅಧ್ಯಕ್ಷ

ಟಾಪ್ ನ್ಯೂಸ್

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asaas

Mumbai Indians; ಹಾರ್ದಿಕ್‌ ಪಾಂಡ್ಯ, ಬೌಷರ್‌ ಮೌನ!

1-wewewqe

‘Bangaluru’: ಅನ್‌ಬಾಕ್ಸ್‌  ಸಮಾರಂಭದಲ್ಲಿ ಆರ್‌ಸಿಬಿ ವನಿತೆಯರು

1-saddas-aa-4

IPL:ರಾಹುಲ್‌ ಫಿಟ್‌; ಕೀಪಿಂಗ್‌ ಡೌಟ್‌

1-saddas-aa-3

IPL; ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದ ಕೊಹ್ಲಿ

1-saddas

Badminton; ಇಂದಿನಿಂದ ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.