ಮಂಗಳೂರಿನಲ್ಲಿ ಉನ್ನತ ಸಂಶೋಧನ ಕೇಂದ್ರ
ಸಮುದ್ರ ಸಂಪನ್ಮೂಲಗಳ ವಿಸ್ತೃತ ಬಳಕೆಯ ಉದ್ದೇಶದಿಂದ ಸ್ಥಾಪನೆ
Team Udayavani, Mar 29, 2021, 7:10 AM IST
ಮಂಗಳೂರು: ಸದ್ಯ ಮೀನುಗಾರಿಕೆ ಮಾತ್ರ ನಡೆಯುತ್ತಿರುವ ನಮ್ಮ ಭಾಗದ ಅರಬಿ ಸಮುದ್ರದಲ್ಲಿ ಭವಿಷ್ಯದಲ್ಲಿ ಔಷಧ ಉತ್ಪನ್ನ, ಕೈಗಾರಿಕೆಗಳಿಗೆ ಅಗತ್ಯವಾದ ರಾಸಾಯನಿಕ ಉತ್ಪಾದನೆ ಮತ್ತು ಆಹಾರ ವಸ್ತು ಉತ್ಪಾದನೆಯೂ ಆಗಲಿದೆ.
ಇಂಥ ಮಹತ್ವದ ಕಾರ್ಯ ಯೋಜನೆಗಳಿಗೆ ಪೂರ್ವಭಾವಿಯಾಗಿ ಅತೀ ಅಗತ್ಯವಿರುವ ಸುಸಜ್ಜಿತ ಸಂಶೋಧನ ಕೇಂದ್ರ “ಬಯೋಟೆಕ್ ಇನ್ನೊವೇಶನ್ ಸೆಂಟರ್ ಫಾರ್ ಅಕ್ವಾ ಮರೈನ್’ ಮಂಗಳೂರಿನಲ್ಲಿ ಸ್ಥಾಪನೆಗೊಳ್ಳಲಿದೆ. 6 ಕೋ.ರೂ. ವೆಚ್ಚದಲ್ಲಿ ಈ ಕೇಂದ್ರ ಸ್ಥಾಪನೆಯ ಬಗ್ಗೆ ರಾಜ್ಯ ಬಜೆಟ್ನಲ್ಲಿ ಉಲ್ಲೇಖೀಸಲಾಗಿದ್ದು, ಇದು ಸ್ಥಾಪನೆಯಾದರೆ ಕರಾವಳಿಯಲ್ಲಿ ಮತ್ತಷ್ಟು ಹೂಡಿಕೆ, ಉದ್ಯೋಗ ಅವಕಾಶಗಳು ತೆರೆದುಕೊಳ್ಳಲಿವೆ.
ಸದ್ಯದ ಮಾಹಿತಿ ಪ್ರಕಾರ ಮಂಗಳೂರಿನ ಮೀನುಗಾರಿಕೆ ಕಾಲೇಜಿನಲ್ಲಿ ನೂತನ ಕೇಂದ್ರ ಸ್ಥಾಪನೆಯಾಗಲಿದೆ.
ವಿದೇಶಗಳಲ್ಲಿ ಇದೆ
ಕೇಂದ್ರ ಸರಕಾರದ ಭೂ ವಿಜ್ಞಾನ ಸಚಿ ವಾಲಯ ಪ್ರಕಟಿಸಿರುವ “ಬ್ಲೂ ಎಕಾನಮಿ’ ನೀತಿಯಲ್ಲಿ ಪ್ರಸ್ತಾವವಾಗಿರುವ “ಮರೈನ್ ಬಯೋಟೆಕ್ ಕೇಂದ್ರ’ದ ಮಾದರಿಯಲ್ಲೇ ಮಂಗಳೂರಿನ ಕೇಂದ್ರ ರಚನೆಯಾಗಲಿದೆ. ವಿದೇಶಗಳಲ್ಲಿ ಕಡಲಿನ ಜೈವಿಕ ಅಂಶಗಳನ್ನು ಸಂಶೋಧಿಸಿ ಹೊಸ ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತಿದೆ.
ಹೀಗಾಗಿ ಅಲ್ಲಿ ಔಷಧ ಸಹಿತ ವಿವಿಧ ಕ್ಷೇತ್ರಗಳಲ್ಲಿ ಸಮುದ್ರ ಉತ್ಪನ್ನಗಳ ಪಾಲು ಗಮನಾರ್ಹ ಪ್ರಮಾಣದಲ್ಲಿದೆ. ಆದರೆ ಭಾರತದಲ್ಲಿ ಈ ಕುರಿತ ಸಂಶೋಧನೆ ದೊಡ್ಡ ಮಟ್ಟದಲ್ಲಿ ಆಗಿಲ್ಲ.
ಕಡಲಿನ ಸಂಪನ್ಮೂಲವನ್ನು ಬಳಸಿಕೊಂಡು ಕರಾವಳಿಯಲ್ಲಿ ಹೊಸ ಅನ್ವೇಷಣೆ ಮತ್ತು ಉತ್ಪಾದನೆಗೆ ಅವಕಾಶವಿದೆ. ವಿದೇಶದಲ್ಲಿ ಔಷಧ ಬಳಕೆಗೂ ಜಲಸಂಪನ್ಮೂಲವನ್ನು ಬಳಸುತ್ತಿದ್ದು, ರಾಜ್ಯದಲ್ಲಿಯೂ ಈ ಬಗೆಗಿನ ಸಂಶೋಧನೆ ಅಗತ್ಯವಾಗಿ ನಡೆಯಬೇಕಿದೆ. ಹೀಗಾಗಿ ರಾಜ್ಯ ಸರಕಾರ “ಬಯೋಟೆಕ್ ಇನ್ನೊವೇಶನ್ ಸೆಂಟರ್ ಫಾರ್ ಅಕ್ವಾ ಮರೈನ್’ ಸ್ಥಾಪನೆಗೆ ಮುಂದಾಗಿದೆ.
– ಡಾ| ಸೆಂಥಿಲ್ವೇಲ್, ಡೀನ್, ಮೀನುಗಾರಿಕೆ ಕಾಲೇಜು-ಮಂಗಳೂರು
ಯಾಕಾಗಿ ಕೇಂದ್ರ?
ಕಡಲಿನ ಸಂಪನ್ಮೂಲಗಳ ಬಗ್ಗೆ ಸಂಶೋಧನೆಗೆ ಗುಜರಾತ್, ಮಹಾರಾಷ್ಟ್ರಗಳಲ್ಲಿ ಅಧ್ಯಯನ ಕೇಂದ್ರಗಳಿವೆ. ಕೇರಳದಲ್ಲಿ “ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅರ್ತ್ ಸೈನ್ಸ್ ಸ್ಟಡೀಸ್’ ಇದೆ. ತ. ನಾಡು, ಆಂಧ್ರಗಳಲ್ಲೂ ಇದೆ. ಕರ್ನಾಟಕದಲ್ಲಿ ಸಮುದ್ರ ಸಂಪನ್ಮೂಲಗಳ ಸಂಶೋಧನೆಗೆ ಸೂಕ್ತ ಕೇಂದ್ರ ಇಲ್ಲ. ಪ್ರಸ್ತಾವಿತ ಕೇಂದ್ರ ಈ ಕೊರತೆಯನ್ನು ನೀಗಿಸಲಿದೆ.
ಏನೇನು ಸಾಧ್ಯ?
– ಸೀ ವೀಡ್ ಮೂಲಕ ಹೊಸ ಉತ್ಪನ್ನಗಳ ಸೃಷ್ಟಿ
– ಕೈಗಾರಿಕೆಗಳಿಗೆ ಬಳಸುವ ಹಲವು ರಾಸಾಯನಿಕಗಳ ಸಂಶೋಧನೆ, ಉತ್ಪಾದನೆ
– ಪ್ರಾಣಿ ಆಹಾರ ಸಂಶೋಧನೆ – ಉತ್ಪಾದನೆ
– ಸಮುದ್ರ ಪಾಚಿಯಿಂದ ಬಯೋ ಇಂಧನ ಉತ್ಪಾದನೆ ಕುರಿತು ಸಂಶೋಧನೆ
– ಜೈವಿಕ ತಂತ್ರಜ್ಞಾನ ಬಳಕೆ, ಉಪ್ಪುನೀರು ಸಂಸ್ಕರಣೆ