ಉಡುಪಿ-ಮಣಿಪಾಲವನ್ನು ದೇಶಕ್ಕೆ ಮಾದರಿ ನಗರವನ್ನಾಗಿಸಲು ಯತ್ನ : ಅನುಮೋದನೆಯೊಂದೇ ಬಾಕಿ
Team Udayavani, Apr 15, 2021, 6:43 PM IST
ಉಡುಪಿ : ಚಿಕ್ಕ ನಗರಗಳ ಪೈಕಿ ಉಡುಪಿ-ಮಣಿಪಾಲವನ್ನು ಸ್ಮಾರ್ಟ್ಸಿಟಿ ಯೋಜನೆಯ ಮೂಲಕ ಅಭಿವೃದ್ಧಿ ಪಡಿಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ಬಗ್ಗೆ 6 ತಿಂಗಳುಗಳ ಕಾಲ ಚರ್ಚೆ ನಡೆದು ಡಿಪಿಆರ್ ಸಿದ್ಧಪಡಿಸಿ ಈಗಾಗಲೇ ಸರಕಾರಕ್ಕೆ ಕಳುಹಿಸಲಾಗಿದೆ. ಅನುಮೋದನೆಗೊಂಡರೆ ಉಡುಪಿಯನ್ನು ದೇಶದಲ್ಲೇ ಮಾದರಿ ನಗರವನ್ನಾಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ಗುರುವಾರ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ನಡೆದ “ತಿಂಗಳ ಮಾಧ್ಯಮ ಸಂವಾದ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಕಾರ್ಖಾನೆ ನಿರ್ಮಾಣಕ್ಕೆ ಸೂಕ್ತ ಜಾಗದ ಕೊರತೆಯಿದೆ. ಪ್ರಸ್ತುತ ಇರುವ ಕೈಗಾರಿಕಾ ವಲಯಗಳು ಈಗಾಗಲೇ ಭರ್ತಿಯಾಗಿವೆ. ಬೈಂದೂರಿನಲ್ಲಿ 60 ಎಕರೆ ಪ್ರದೇಶವನ್ನು ಗುರುತಿಸಿ ಕಾರ್ಖಾನೆ ರಚಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಉಡುಪಿ-ಕಾಪು ಭಾಗದಲ್ಲಿಯೂ ಜಾಗ ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಬ್ರಹ್ಮಾವರದಲ್ಲಿ ಜಾಗ ಗುರುತಿಸಲಾಗಿದೆ. ಕಾರ್ಕಳದಲ್ಲಿ ಜವುಳಿ ಪಾರ್ಕ್ಗೆ 20 ಎಕರೆ ಜಮೀನು ಮೀಸಲಿರಿಸಲಾಗಿದೆ. ಫುಡ್ಪಾರ್ಕ್, ಟೆಕ್ಸ್ಟೈಲ್ ಪಾರ್ಕ್, ಫರ್ನಿಚರ್ ಪಾರ್ಕ್ಗಳನ್ನು ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಕಾರ್ಕಳದಲ್ಲಿ ಶಿಲ್ಪಕಲೆ ಪಾರ್ಕ್
ಕಾರ್ಕಳ ತಾಲೂಕಿನಲ್ಲಿ ಶಿಲ್ಪಿಗಳ ಸಂಖ್ಯೆ ಹೆಚ್ಚಳವಿರುವುದರಿಂದ ಅಲ್ಲಿ ಶಿಲ್ಪಕಲಾ ಪಾರ್ಕ್ ನಿರ್ಮಿಸಲು ಉದ್ದೇಶಿಸಲಾಗಿದೆ. ಇಂತಹ ಯೋಜನೆಗಳಿಗೆ ಜಿಲ್ಲೆಯ ಬಂಡವಾಳಗಾರರೂ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಕಾರ್ಖಾನೆಗಳ ನಿರ್ಮಾಣಕ್ಕೆ 500 ಎಕರೆಯಷ್ಟು ಜಾಗ ಗುರುತಿಸುವ ಸವಾಲು ಜಿಲ್ಲಾಡಳಿತಕ್ಕಿದೆ. ಬ್ರಹ್ಮಾವರದಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಾಣವಾಗದಿದ್ದರೆ ಅಲ್ಲಿ ದೊಡ್ಡ ಕಾರ್ಖಾನೆಯೊಂದನ್ನು ನಿರ್ಮಿಸುವ ಉದ್ದೇಶವೂ ಇದೆ ಎಂದರು.
ಸರಕಾರಕ್ಕೆ ಮನವಿ
ರಾ.ಹೆ.169(ಎ) ಭಾಗವಾಗಿ ಮಲ್ಪೆಯಿಂದ-ಕರಾವಳಿ ವರೆಗೆ ಭೂಸ್ವಾಧೀನ ಪ್ರಕ್ರಿಯೆ ಹಂತಕ್ಕೆ ತಲುಪಿದೆ. ಭೂಸ್ವಾಧೀನದ ಬಗ್ಗೆ ಗೊಂದಲ ನಿವಾರಿಸುವ ನಿಟ್ಟಿನಲ್ಲಿ ಆ ಪ್ರಕ್ರಿಯೆಯನ್ನು ಹೆದ್ದಾರಿ ಪ್ರಾಧಿಕಾರದಿಂದ ಜಿಲ್ಲಾಡಳಿತಕ್ಕೆ ನೀಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.
ಹೊಂಡಗುಂಡಿ ಮುಚ್ಚಲು 20 ಕೋ.ರೂ.
ಜಿಲ್ಲೆಯಲ್ಲಿರುವ ರಸ್ತೆಗಳ ಹೊಂಡ-ಗುಂಡಿಗಳನ್ನು ಮುಚ್ಚಲು 20 ಕೋ.ರೂ.ಗಳನ್ನು ಮೀಸಲಿರಿಸಲಾಗಿದೆ. ಈ ಪೈಕಿ 3 ಕೋ.ರೂ.ಗಳನ್ನು ನಗರಸಭೆ ವ್ಯಾಪ್ತಿಗೆ ಮೀಸಲಿರಿಸಲಾಗಿದೆ. ಪ್ರಾಕೃತಿಕ ವಿಕೋಪ ನಿಧಿಯಿಂದ ಇದನ್ನು ಬಿಡುಗಡೆ ಮಾಡಲಾಗಿದೆ ಎಂದರು.
ಕೃಷಿ ಭೂಮಿ ಹಡಿಲು ಹಾಕಿದವರಿಗೆ ನೋಟಿಸ್
ಕೃಷಿ ಭೂಮಿಯನ್ನು ಹಡಿಲು ಬಿಟ್ಟವರಿಗೆ ಜಿಲ್ಲಾಡಳಿತದಿಂದ ನೋಟಿಸ್ ನೀಡುವ ಪ್ರಕ್ರಿಯೆ ನಡೆಯಲಿದೆ. ಹಡಿಲು ಭೂಮಿಯಲ್ಲಿ ಕೃಷಿ ನಡೆಸುವ ಬಗ್ಗೆ ಈಗಾಗಲೇ ಶಾಸಕರ ನೇತೃತ್ವದಲ್ಲಿ ದೊಡ್ಡ ಅಭಿಯಾನ ನಡೆಯುತ್ತಿದೆ. ಕಳೆದ ಬಾರಿ ಹಡಿಲು ಬಿಟ್ಟವರಿಗೆ ಕೇವಲ ಎಚ್ಚರಿಕೆಯನ್ನಷ್ಟೇ ನೀಡಲಾಗಿತ್ತು. ಈ ಬಾರಿ ನೋಟಿಸ್ ನೀಡುವ ಕೆಲಸವಾಗಲಿದೆ. ಸಂಘ-ಸಂಸ್ಥೆಗಳ ಮೂಲಕವೂ ಕೃಷಿ ಚಟುವಟಿಕೆ ನಡೆಸಬಹುದು ಸಬ್ಸಿಡಿ ನೀಡುವ ಬಗ್ಗೆಯೂ ಸರಕಾರಕ್ಕೆ ಪತ್ರ ಬರೆಯಲಾಗುವುದು. ಯಂತ್ರಗಳಿಂದ ಕೃಷಿ ಮಾಡಿದರೆ ಲಾಭಮಾಡಬಹುದು ಎಂಬುವುದನ್ನು ಜಿಲ್ಲೆಯ ರೈತರು ಈಗಾಗಲೇ ಸಾಬೀತುಪಡಿಸಿದ್ದಾರೆ ಎಂದರು.
ಯುಜಿಡಿ ಮರುವಿನ್ಯಾಸದಿಂದಷ್ಟೇ ಇಂದ್ರಾಣಿಗೆ ಮುಕ್ತಿ
ಪದೇ ಪದೇ ಕೇಳಿ ಬರುತ್ತಿರುವ ಇಂದ್ರಾಣಿ ಸಮಸ್ಯೆಯ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ನಗರದ ಯುಜಿಡಿ ಸರಿಯಾದ ವಿನ್ಯಾಸ ಇಲ್ಲದ ಕಾರಣದಿಂದ ಸಮಸ್ಯೆಯಾಗುತ್ತಿದೆ. ಅದನ್ನು ಮರುವಿನ್ಯಾಸ ಮಾಡಲು ವಾಟರ್ಬೋರ್ಡ್ನಿಂದ ಸರ್ವೆ ಮಾಡಿಸಲಾಗುವುದು. ಇದಕ್ಕೆ 400 ಕೋ.ರೂ.ಗಳಷ್ಟು ಅಗತ್ಯವಿದೆ. ಸ್ಮಾರ್ಟ್ಸಿಟಿ ಯೋಜನೆಯಲ್ಲಿ ನಗರದ ಯುಜಿಡಿಯೂ ಪ್ರಮುಖ ಪಾತ್ರ ವಹಿಸಲಿದೆ. ಈ ಕಾಮಗಾರಿ ಮುಗಿದ ಬಳಿಕವಷ್ಟೇ ಇಂದ್ರಾಣಿ ಸಮಸ್ಯೆ ಇತ್ಯರ್ಥವಾಗಲಿದೆ ಎಂದರು.
ಮರೀನಾ ಯೋಜನೆ ಬಗ್ಗೆ ಚರ್ಚೆಯೇ ನಡೆದಿಲ್ಲ
ಜಿಲ್ಲಾಡಳಿತ ಮರೀನಾ ಯೋಜನೆಯ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ. ಈ ಬಗ್ಗೆ ಯಾವುದೇ ನಿರ್ಧಾರವೂ ಇಲ್ಲ. ಗೋವಾ ಮೂಲದ ಸಂಸ್ಥೆಯೊಂದು ಅದರ ರೂಪುರೇಖೆಗಳ ಬಗ್ಗೆ ಮಾಹಿತಿಯನ್ನಷ್ಟೇ ನೀಡಿತ್ತು. ಜಿಲ್ಲಾಡಳಿತ ಆ ಬಗ್ಗೆ ಯಾವ ಪ್ರಸ್ತಾವನೆಯನ್ನೂ ಮಾಡಿಲ್ಲ ಎಂದರು.
ಶಿಕ್ಷಣ ಇಲಾಖೆ ಆಯುಕ್ತನಾಗುವ ಕನಸು
ರಾಜಕೀಯಕ್ಕೆ ಪ್ರವೇಶಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ಅಧಿಕಾರಿಯಾಗಿಯೇ ಸೇವೆ ಮಾಡುವ ಉದ್ದೇಶ ಹೊಂದಿದ್ದೇನೆ. ಸಾಧ್ಯವಾದರೆ ಶಿಕ್ಷಣ ಇಲಾಖೆಯ ಆಯುಕ್ತನಾಗುವ ಉದ್ದೇಶ ಹೊಂದಿದ್ದೇನೆ. ಈ ಮೂಲಕ ಮುಚ್ಚಿರುವ ಸರಕಾರಿ ಶಾಲೆಗಳನ್ನು ತೆರೆದು ಮತ್ತೆ ಎಲ್ಲ ಮಕ್ಕಳು ಸರಕಾರಿ ಶಾಲೆಯತ್ತ ತೆರಳಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡಿದ್ದೇನೆ ಎಂದರು.