ಕೋವಿಡ್ ನಡುವೆ ಸರಳ ಸಂಭ್ರಮದಿಂದ ನಡೆದ ವೈರಮುಡಿ ಉತ್ಸವ
Team Udayavani, Mar 24, 2021, 9:40 PM IST
ಮಂಡ್ಯ: ವಿಶ್ವ ಪ್ರಸಿದ್ಧ ಮೇಲುಕೋಟೆಯಲ್ಲಿ ಬುಧವಾರ ರಾತ್ರಿ ಶ್ರೀ ಚೆಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮೋತ್ಸವ ಕೊರೊನಾದ ನಡುವೆ ಸಂಭ್ರಮ ಹಾಗೂ ಸರಳವಾಗಿ ನಡೆಯಿತು.
ಪಾಂಡವಪುರ ತಾಲೂಕಿನಿಂದ ಆಗಮಿಸಿದ್ದ ಭಕ್ತರು ಹಾಗೂ ಸಾರ್ವಜನಿಕರು ವಜ್ರಖಚಿತ ಕಿರೀಟದಿಂದ ವಿರಾಜಮಾನನಾದ ಶ್ರೀ ಚೆಲುವನಾರಾಯಣಸ್ವಾಮಿಯ ವೈರಮುಡಿ ಉತ್ಸವವನ್ನು ಕಣ್ತುಂಬಿಕೊoಡರು.
ಬೆಳಿಗ್ಗೆ ಮಂಡ್ಯ ನಗರದ ಜಿಲ್ಲಾ ಖಜಾನೆಯಿಂದ ಹೊರಟ ವೈರಮುಡಿ ವಿವಿಧ ಗ್ರಾಮಗಳ ಮೂಲಕ ಸಂಜೆ 4.45ಕ್ಕೆ ಮೇಲುಕೋಟೆ ಪ್ರವೇಶಿಸಿತು. ಈ ವೇಳೆ ದಾರಿಯುದ್ದಕ್ಕೂ ಗ್ರಾಮಸ್ಥರಿಂದ ವೈರಮುಡಿಗೆ ಪೂಜೆ ಸಲ್ಲಿಸಿದ ದೃಶ್ಯ ಕಂಡು ಬಂದಿತು.
ಪ್ರದಕ್ಷಿಣೆ:
ಮೇಲುಕೋಟೆಯ ಪ್ರವೇಶದ್ವಾರ `ಪಾರ್ವಟೆ’ ಮಂಟಪದಿAದ ವೈರಮುಡಿ, ರಾಜಮುಡಿ ಹಾಗೂ ಇತರ ಆಭರಣಗಳ ಎರಡು ಗಂಟನ್ನು ಚಿನ್ನದ ಪಲ್ಲಕ್ಕಿಯಲ್ಲಿಟ್ಟುಕೊಂಡು ಚತುರ್ವೀದಿಗಳಲ್ಲಿ ಮೆರವಣಿಗೆ ಮೂಲಕ 6.30ರ ಸುಮಾರಿಗೆ ದೇವಾಲಯಕ್ಕೆ ತರಲಾಯಿತು. ಇದಕ್ಕೂ ಮುನ್ನ ದೇವಸ್ಥಾನವನ್ನು ಒಂದು ಸುತ್ತು ಪ್ರದಕ್ಷಿಣೆ ಮಾಡಲಾಯಿತು.
ಆಭರಣಗಳ ಪರ್ಕಾವಣೆ:
ರಾತ್ರಿ 6.45ಕ್ಕೆ ಜಿಲ್ಲಾಧಿಕಾರಿ ಎಸ್.ಅಶ್ವಥಿ ನೇತೃತ್ವದಲ್ಲಿ ಆಭರಣದ ಗಂಟುಗಳನ್ನು ಬಿಚ್ಚಿ ಸುಮಾರು 45 ನಿಮಿಷಗಳ ಕಾಲ ವೈರಮುಡಿ ಹಾಗೂ ಇತರ ಆಭರಣಗಳ ಪಾರ್ಕಾವಣೆ(ಪರಿಶೀಲನೆ) ಮಾಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಶಾಸಕ ಸಿ.ಎಸ್.ಪುಟ್ಟರಾಜು, ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ಶ್ರೀರಂಗಪಟ್ಟಣ ತಹಶೀಲ್ದಾರ್ ರೂಪಾ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಪಿ.ಉಮೇಶ್ ಪಾರ್ಕಾವಣೆಗೆ ಸಾಕ್ಷಿಯಾದರು. ಬಳಿಕ ಅಧಿಕಾರಿಗಳು, ಸ್ಥಾನಿಕರು, ಪ್ರಮುಖ ಅರ್ಚಕರಿಂದ ಸಹಿ ಸಂಗ್ರಹಿಸಿ ನಂತರ ವೈರಮುಡಿ ಸಹಿತ ಎಲ್ಲ ಆಭರಣಗಳನ್ನು ದೇವಾಲಯದ ಸ್ಥಾನೀಕರಿಗೆ ಹಸ್ತಾಂತರಿಸಲಾಯಿತು.
ಇದನ್ನೂ ಓದಿ :ಏ.4 ರೊಳಗೆ ರೈತರ ಕಬ್ಬಿನ್ ಬಿಲ್ ಪಾವತಿ ಮಾಡಿ : ಕಾರ್ಖಾನೆ ಮಾಲೀಕರಿಗೆ ಜಿಲ್ಲಾಧಿಕಾರಿ ಸೂಚನೆ
ನೇರ ಪ್ರಸಾರ:
ಪಾರ್ಕಾವಣೆಯ ಪ್ರತಿ ದೃಶ್ಯವನ್ನು ಹೊರಗಡೆ ಅಳವಡಿಸಿದ್ದ ಎಲ್ಇಡಿ ಸ್ಕ್ರೀನ್ ಮೂಲಕ ನೇರ ಪ್ರಸಾರ ಮಾಡಿ ಭಕ್ತರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೆ, ಯೂಟ್ಯೂಬ್, ಫೇಸ್ಬುಕ್ ಹಾಗೂ ಜಿಲ್ಲಾಧಿಕಾರಿ ವೆಬ್ಸೈಟ್ನಲ್ಲಿ ನೇರ ಪ್ರಸಾರ ಮಾಡಲಾಯಿತು. ಪಾರ್ಕಾವಣೆ ನಂತರ ಗರ್ಭಗುಡಿಯ ಚೆಲುವನಾರಾಯಣಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಆಗಮಿಸಿದ್ದ ಗಣ್ಯರು, ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ನಂತರ ಚಲುವನಾರಾಯಣಸ್ವಾಮಿಗೆ ವೈರಮುಡಿ ಕಿರೀಟ, ಆಭರಣ ಧರಿಸಲಾಯಿತು.
ಮೈಸೂರಿನ ಬ್ರಹ್ಮತಂತ್ರ ಸ್ವತಂತ್ರ ಪರಕಾಲಸ್ವಾಮಿ ಮಠದ ಶ್ರೀ ಅಭಿನವ ವಾಗೀಶ ಬ್ರಹ್ಮತಂತ್ರ ಸ್ವತಂತ್ರ ಪರಕಾಲಸ್ವಾಮೀಜಿ, ಶ್ರೀಯಧುಗಿರಿ ಯತಿರಾಜ್ ಜೀಯರ್, ದೇವಸ್ಥಾನದ 4ನೇ ಸ್ಥಾನಿಕಂ ಶ್ರೀನಿವಾಸ ನರಸಿಂಹನ್ ಗುರೂಜಿ, ಪಾಂಡವಪುರ ತಹಸೀಲ್ದಾರ್ ಪ್ರಮೋದ್ ಎಲ್.ಪಾಟೀಲ್, ಮೇಲುಕೋಟೆ ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿ ರತ್ನಮ್ಮ ಇತರರು ಹಾಜರಿದ್ದರು.
ಶ್ರೀದೇವಿ-ಭೂದೇವಿಯೊಂದಿಗೆ ವೈರಮುಡಿ ಉತ್ಸವ:
ರಾತ್ರಿ 8ಕ್ಕೆ ಶ್ರೀದೇವಿ-ಭೂದೇವಿಯೊಂದಿಗೆ ವಜ್ರಖಚಿತ ವೈರಮುಡಿ ಕಿರೀಟ ತೊಟ್ಟು ವಿರಾಜಮಾನನಾದ ಶ್ರೀ ಚೆಲುವನಾರಾಯಣಸ್ವಾಮಿಯ ವೈರಮುಡಿ ಬ್ರಹ್ಮೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ರಾತ್ರಿ 8.20ಕ್ಕೆ ಉತ್ಸವಕ್ಕೆ ಚಾಲನೆ ನೀಡಲಾಯಿತು. 8.25ಕ್ಕೆ ದೇವಾಲಯದ ಒಳಗಿನ ಮಂಟಪದಿoದ ಹೊರಕ್ಕೆ ಉತ್ಸವ ತರಲಾಯಿತು. ಶ್ರೀದೇವಿ, ಭೂದೇವಿಯರ ಮಧ್ಯೆ ಗರೂಢಾರೂಢನಾದ ಚಲುವರಾಯಸ್ವಾಮಿಯ ಉತ್ಸವ ಮೂರ್ತಿ ವೈರಮುಡಿ ಸೇರಿದಂತೆ ಆಭರಣಗಳಿಂದಾಗಿ ಕಂಗೊಳಿಸಿತು. ವೈರಮುಡಿ ಧರಿಸಿದ್ದ ಸ್ವಾಮಿಗೆ ನಮಸ್ಕರಿಸಿದ ಭಕ್ತರು, ಜಯಘೋಷ ಮೊಳಗಿಸಿದರು. ಮುಖ್ಯದ್ವಾರದ ಬಳಿಯೇ 30ನಿಮಿಷಗಳ ಕಾಲ ಉತ್ಸವ ನಡೆಯಿತು. ಮೇಲುಕೋಟೆಯ ರಾಜಬೀದಿಯ ವಿವಿಧ ಎಲ್ಇಡಿ ಪರದೆಗಳನ್ನು ಅಳವಡಿಸಿ ಉತ್ಸವ ವೀಕ್ಷಿಸಲು ಭಕ್ತರಿಗೆ ಅವಕಾಶ ಕಲ್ಪಿಸಲಾಯಿತು. ಮಧ್ಯರಾತ್ರಿ 12 ಗಂಟೆವರೆಗೂ ಉತ್ಸವ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ