ವರುಣಾದಿಂದ ವಿಜಯೇಂದ್ರ ; ಊಹಾಪೋಹಗಳಿಗೆ ತೆರೆ ಎಳೆದ ಯಡಿಯೂರಪ್ಪ
ನಾನು ಹೈಕಮಾಂಡ್ ಮನವೊಲಿಸುತ್ತೇನೆ....
Team Udayavani, Mar 31, 2023, 7:38 PM IST
ಮೈಸೂರು : ಶಿಕಾರಿಪುರ ನನ್ನನ್ನು ಸಿಎಂ ಮಾಡಿದ ಕ್ಷೇತ್ರ. ಆ ಕ್ಷೇತ್ರವನ್ನ ಬಿಡಲು ಸಾಧ್ಯವಿಲ್ಲ.ವಿಜಯೇಂದ್ರ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ,ವರುಣಾ ದಲ್ಲಿ ಸ್ಪರ್ಧೆ ವಿಚಾರ ಚರ್ಚೆ ಬೇಡ ಎಂದು ಶುಕ್ರವಾರ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು
ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ವರುಣಾದಿಂದ ವಿಜಯೇಂದ್ರ ಸ್ಪರ್ಧೆಗೆ ಹೈಕಮಾಂಡ್ ಒಪ್ಪಿತ್ತು. ಆದರೆ ನಾನೇ ವರುಣದಿಂದ ಸ್ಪರ್ಧೆ ಬೇಡ ಎಂದು ಹೇಳಿದ್ದೇನೆ.ಈ ವಿಚಾರದಲ್ಲಿ ನಾನು ಹೈಕಮಾಂಡ್ ಮನವೊಲಿಸುತ್ತೇನೆ. ಯಾವ ಕಾರಣಕ್ಕೂ ವಿಜಯೇಂದ್ರ ವರುಣಾದಿಂದ ಸ್ಪರ್ಧೆ ಮಾಡುವ ಪ್ರಶ್ನಯೇ ಇಲ್ಲ.ಕಾರ್ಯಕರ್ತರ ಸಾಕಷ್ಟು ಒತ್ತಡ ಹಾಕುತ್ತಿದ್ದಾರೆ. ಶಿಕಾರಿಪುರ ಬಿಟ್ಟು ಅವರು ಬರುವುದಿಲ್ಲ.ಶಿಕಾರಿಪುರದಿಂದ ಸ್ಪರ್ಧೆ ಮಾಡುತ್ತಾರೆ ಎಂದರು.
ವರುಣಾ ಕ್ಷೇತ್ರದಿಂದ ಒಳ್ಳೆ ಅಭ್ಯರ್ಥಿ ಹಾಕುತ್ತೇವೆ. ನಾನು ಶಿಕಾರಿಪುರದಿಂದ ಸ್ಪರ್ಧೆ ಮಾಡುತ್ತಿಲ್ಲವಾದ ಕಾರಣ ವಿಜಯೇಂದ್ರ ಅಲ್ಲಿಂದ ಸ್ಪರ್ಧೆ ಮಾಡಬೇಕು. ಇದು ನನ್ನ ನಿರ್ಧಾರ ಎಂದು ಯಡಿಯೂರಪ್ಪ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.