ವಿಶ್ವನಾಥ್ ಅನುಭವಿ ರಾಜಕಾರಣಿ; ಎಚ್ಡಿಕೆ ವ್ಯಂಗ್ಯ
Team Udayavani, Jun 18, 2020, 8:21 PM IST
ಬೆಂಗಳೂರು: ವಿಶ್ವನಾಥ್ ಒಬ್ಬ ಅನುಭವಿ ರಾಜಕಾರಣಿ, ಆದರೆ, ಅವರಿಗೆ ಟಿಕೆಟ್ ತಪ್ಪಲು ನನ್ನ ಪ್ರಭಾವ ಇದೆ ಅಂದರೇನು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ನಂತರ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲೂ ನನಗೆ ಪ್ರಭಾವ ಬೀರುವ ಶಕ್ತಿ ಇದೆ ಎಂದು ನನ್ನ ಶಕ್ತಿ ಹೆಚ್ಚಿಸಿದ್ದಾರೆ ಎಂದು ವ್ಯಂಗ್ಯವಾಡಿದರು.
ವಿಶ್ವನಾಥ್ ಅವರು ನನ್ನ ಆಡಳಿತವನ್ನು ರಾಕ್ಷಸಿ ಆಡಳಿತ, ನಾನಿದ್ದಿದ್ದರೆ ಕೋವಿಡ್ 50 ಸಾವಿರ ದಾಟುತ್ತಿತ್ತು ಎಂದು ಹೇಳಿದ್ದಾರೆ. ಅವರು ಲಘುವಾಗಿ ಮಾತನಾಡುವುದು ಬಿಡಬೇಕು. ನಾಲಿಗೆ ಇದೆ ಅಂತ ಏನು ಬೇಕಾದರೂ ಮಾತನಾಡಬಾರದು ಎಂದು ಹೇಳಿದರು.
ಸಾಲಮನ್ನಾ ಮಾಡಿದ್ದು ರಾಕ್ಷಸಿ ಪ್ರವೃತ್ತಿನಾ? ಕೊಡಗು ಪ್ರಕೃತಿ ವಿಕೋಪದ ವೇಳೆ ಅಷ್ಟು ಕೆಲಸ ಮಾಡಿದ್ದು ರಾಕ್ಷಸಿ ಕೆಲಸವಾ ಎಂದರು.
ರಾಜ್ಯ ಸರ್ಕಾರ ಮಾಸ್ಕ್ ಖರೀದಿ, ಪಿಪಿಇ ಕಿಟ್ ಖರೀದಿಯಲ್ಲಿ ದುಡ್ಡು ಮಾಡಲು ಹೊರಟಿದೆ. ಇಂತಹ ಸರ್ಕಾರಕ್ಕೆ ನನ್ನ ಸರ್ಟಿಪಿಕೇಟ್ ಬೇಕಿಲ್ಲ. ಬೀದಿ ಬದಿ ವ್ಯಾಪಾರಿಗಳನ್ನು ಬೀದಿಗೆ ತಂದಿರುವ ಈ ಸರ್ಕಾರ ಎಂತಹ ಸರ್ಕಾರ ಎಂದು ವಿಶ್ವನಾಥ್ ಹೇಳಲಿ ಎಂದು ತಿರುಗೇಟು ನೀಡಿದರು.
ಸಂಕಷ್ಟ ಸಮಯ
ಚೀನಾ ಸಂಘರ್ಷ ಕುರಿತು ಪ್ರತಿಕ್ರಿಯಿಸಿದ ಅವರು, ಗಡಿ ಭಾಗದಲ್ಲಿ ಚೀನಾ ಭಾರತ ನಡುವೆ ಸಂಘರ್ಷ ನಡೆಯುತ್ತಿದೆ. ಭಾರತಕ್ಕೆ ಇದು ಸಂಕಷ್ಟ ಸಮಯ, ಇದು ಯುದ್ಧ ಮಾಡುವ ಸಮಯವಲ್ಲ. ಮಾತುಕತೆ ಮೂಲಕ ಶಾಂತಿ ಕಾಪಾಡಬೇಕಿದೆ. ಇಂತಹ ಸಂದರ್ಭದಲ್ಲಿ ವೀರಾವೇಶದ ಮಾತುಗಳನ್ನು ಆಡಬಾರದು. ಆದಷ್ಟೂ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.
ಚೀನಾ ವಸ್ತು ಬಹಿಷ್ಕಾರ ಎಂದು ಪ್ರಚಾರ ಮಾಡಿಕೊಂಡು ಯಾಕೆ ಮಾಡಬೇಕು? ನಮ್ಮ ಸಾಮರ್ಥ್ಯ ಮೊದಲು ಹೆಚ್ಚಿಸಿಕೊಳ್ಳಬೇಕು. ನಿತ್ಯ ಚೀನಾ ವಸ್ತುಗಳ ಮೇಲೆ ಅವಲಂಬನೆಯಾಗುವುದು ಕಡಿಮೆ ಮಾಡಬೇಕು. ಪ್ರಚಾರಕ್ಕಾಗಿ ಶೋ ಮಾಡಬಾರದು. ಇಂತಹ ವಿಚಾರಗಳಲ್ಲಿ ಮೌನವಾಗಿ ನಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು.