ಪ. ಬಂಗಾಳ ಚುನಾವಣಾ ಕದನ: ಹೈಕಮಾಂಡ್ ತುರ್ತು ಕರೆ, ದೆಹಲಿಗೆ ಅರವಿಂದ ಲಿಂಬಾವಳಿ
Team Udayavani, Mar 5, 2021, 10:24 PM IST
ಬೆಂಗಳೂರು: ಕಲ್ಬುರ್ಗಿ ಪ್ರವಾಸದಲ್ಲಿದ್ದ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ದೆಹಲಿಯಿಂದ ತುರ್ತು ಬುಲಾವ್ ಬಂದ ಹಿನ್ನೆಲೆಯಲ್ಲಿ ತಮ್ಮ ಪ್ರವಾಸ ಮೊಟಕುಗೊಳಿಸಿ ದೆಹಲಿಗೆ ತೆರಳಿದ್ದಾರೆ.
ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ರವರ ಕರೆಯ ಮೇರೆಗೆ ಅವರು ದಿಲ್ಲಿಗೆ ತೆರಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಜವಾಬ್ದಾರಿಯನ್ನು ಹೈಕಮಾಂಡ್ ಅರವಿಂದ ಲಿಂಬಾವಳಿ ಅವರಿಗೆ ವಹಿಸಿದೆ. ಕರ್ನಾಟಕದ ಮೊದಲ ಹಂತದ ಉಪಚುನಾವಣೆಗಳಲ್ಲಿ, ತೆಲಂಗಾಣ ಲೋಕಸಭಾ ಚುನಾವಣೆಗಳಲ್ಲಿ ಅರವಿಂದ ಲಿಂಬಾವಳಿ ಯಶ ಸಾಧಿಸಿದ್ದರು.
ತೃಣಮೂಲ ಕಾಂಗ್ರೆಸ್ ನ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಪಶ್ಚಿಮ ಬಂಗಾಳದಲ್ಲಿ ಭಾರತೀಯ ಜನತಾ ಪಕ್ಷದ ಪ್ರಾಬಲ್ಯ ಸಾಬೀತುಪಡಿಸುವ ಮತ್ತು ಅದನ್ನು ಬೆಳೆಸುವ ಮಹತ್ವದ ಜವಾಬ್ದಾರಿಯನ್ನು ಅರವಿಂದ ಲಿಂಬಾವಳಿ ಅವರಿಗೆ ವಹಿಸಲಾಗಿದೆ.
ಚುನಾವಣಾ ಕಾರ್ಯತಂತ್ರವನ್ನು ಹೆಣೆಯಲೆಂದೇ ಅವರನ್ನು ದಿಲ್ಲಿಗೆ ಕರೆಸಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ : ಆರ್ಥಿಕ ಸ್ಥಿತಿ ಸುಧಾರಣೆ : ಬಜೆಟ್ ಗಾತ್ರ ಕಳೆದ ಬಾರಿಗಿಂತ ಹೆಚ್ಚಿರಲಿದೆ ; ಸಿಎಂ